ಮಂಗಳಾ ಅಂಗಡಿ ಗೆದ್ದಿದ್ದೇ ಆದರೆ, ಅಭಿವೃದ್ಧಿಗೆ ಅನುದಾನ: ಸಿಎಂ ಯಡಿಯೂರಪ್ಪ ಭರವಸೆ
ಏ.17 ರಂದು ನಡೆಯುವ ಲೋಕಸಭೆಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಗೆಲುವು ಸಾಧಿಸಿ ಸಂಸತ್ತು ಪ್ರವೇಶ್ ಮಾಡಿದರೆ, ಈ ಕ್ಷೇತ್ರದಲ್ಲಿ ಅವರು ಸೂಚಿಸುವ ಎಲ್ಲಾ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭರವಸೆ ನೀಡಿದ್ದಾರೆ.
Published: 08th April 2021 08:25 AM | Last Updated: 08th April 2021 01:04 PM | A+A A-

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಬೆಳಗಾವಿ: ಏ.17 ರಂದು ನಡೆಯುವ ಲೋಕಸಭೆಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಗೆಲುವು ಸಾಧಿಸಿ ಸಂಸತ್ತು ಪ್ರವೇಶ್ ಮಾಡಿದರೆ, ಈ ಕ್ಷೇತ್ರದಲ್ಲಿ ಅವರು ಸೂಚಿಸುವ ಎಲ್ಲಾ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭರವಸೆ ನೀಡಿದ್ದಾರೆ.
ರಾಮದುರ್ಗ ತಾಲೂಕಿನ ಸಾಲಹಳ್ಳಿಯಲ್ಲಿ ಬುಧವಾರ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಪರ ಮತಯಾಚನೆ ಮಾಡಿದ ಬಳಿಕ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಬಿಜೆಪಿ ಸಂಸದರು ಆಯ್ಕೆಯಾದರೆ, ಈ ಕ್ಷೇತ್ರದ ಸಮಗ್ರ ಅಭಿವೃದ್ಧಿ ಸಾಧ್ಯ. ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿದರೆ ಪ್ರತಿಪಕ್ಷದಲ್ಲಿರುತ್ತಾರೆ. ಯಾವುದೇ ಅಭಿವೃದ್ಧಿ ಕಾರ್ಯ ನಡೆಯುವುದಿಲ್ಲ. ಆದ್ದರಿಂದ ಸಮಗ್ರ ಅಭಿವೃದ್ಧಿಗೆ ಮಂಗಳಾ ಅಂಗಡಿಯವರಿಗೆ ಬೆಂಬಲ ನೀಡಿ ಎಂದು ಕೋರಿದರು.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ತೀವ್ರವಾಗಿ ಕಿಡಿಕಾರಿದ ಅವರು, ದಿವಂಗತ ಸುರೇಶ್ ಅಂಗಡಿ ಅವರ ಪತ್ನಿಗೆ ಟಿಕೆಟ್ ನೀಡಿದರೆ, ನಾವು ಅಭ್ಯರ್ಥಿಯನ್ನು ಹಾಕುವುದಿಲ್ಲ ಎಂದು ಕಾಂಗ್ರೆಸ್ ಹೇಳಿತ್ತು. ಈಗ ಕಾಂಗ್ರಸ್ ನವರು ಸ್ಪರ್ಧಿಸಿದ್ದಾರೆ. ಇದು ಸುರೇಶ್ ಅಂಗಡಿಯವರಿಗೆ ಮಾಡಿದ ಅವಮಾನ. ಪ್ರತಿಪಕ್ಷದ ನಾಯಕರು ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ ಎಂದು ಆರೋಪಿಸಿದರು.
ಸುರೇಶ್ ಅಂಗಡಿ ನಾಲ್ಕು ಬಾರಿ ಸಂಸದರಾಗಿ ಸೇವೆ ಮಾಡಿದರು. ಹಿರೇಬಾಗೇವಾಡಿ ಗ್ರಾಮದ ಅಭಿವೃದ್ಧಿಗಾಗಿ ಸೇವೆ ಮಾಡಿದರು. ಕೊರೋನಾದಿಂದ ಚೇತರಿಸಿಕೊಳ್ಳುತ್ತಾರೆ ಎಂದುಕೊಂಡಿದ್ದೆವು. ಆದರೆ, ಆಘಾತವಾಯಿತು. ಪ್ರಧಾನಿ ಮೋದಿ ಸೇರಿ ನಮ್ಮ ಕಾರ್ಯಕರ್ತರು ಕಣ್ಣೀರು ಹಾಕಿದರು.
ಈ ಹಿಂದೆ ಹಣ, ಹೆಂಡದ ಹೊಳೆ ಹರಿಸಿ ಕಾಂಗ್ರೆಸ್ ಚುನಾವಣೆ ಗೆಲ್ಲುತ್ತಿತ್ತು. ಆದರೆ, ಈಗ ಕಾಲ ಬದಲಾಗಿದೆ. ಬಜೆಟ್ ನಲ್ಲಿ ಹೆಣ್ಣುಮಕ್ಕಳಿಗಾಗಿ ಹಲವು ಯೋಜನೆ ಜಾರಿಗೆ ತಂದಿದ್ದೇವೆ. ಕೈಗಾರಿಕೆ ಆರಂಭಿಸುವ ಮಹಿಳೆಯರಿಗೆ ಎರಡು ಕೋರಿ ಸಾಲ ನೀಡುವ ವ್ಯವಸ್ಥೆ ಮಾಡುವ ಆಯವ್ಯಯ ಮಂಡನೆ ಮಾಡಿದ್ದೇನೆ. ಮಹಿಳೆಯರ ಸಬಲೀಕರಣಕ್ಕೆ ಕೆಎಸ್ಎಫ್'ಸಿಯಿಂದ ಎರಡು ಕೋಟಿ ವರೆಗೂ ಸಾಲ ಕೊಡುವ ವ್ಯವಸ್ಥೆ ಮಾಡಲಾಗಿದೆ. ಸಾಲ ನೀಡಲು ನಿರಾಕರಿಸಿದರೆ ನನಗೆ ತಿಳಿಸಿ 24 ಗಂಟೆಗಳಲ್ಲಿ ಸಾಲ ಮಂಜೂರು ಮಾಡಿಸುತ್ತೇನೆಂದು ತಿಳಿಸಿದ್ದಾರೆ.
ಮಂಗಳಾ ಅಂಗಡಿಯವರ ಗೆಲುವಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನಪರ ಯೋಜನೆಗಳನ್ನು ಪ್ರತಿ ಮತದಾರರ ಮನೆಗೆ ತಿಳಿ ಹೇಳುವ ಮೂಲಕ ಹೆಚ್ಚು ಮತಗಳು ದೊರೆಯುವಂತೆ ಕಾರ್ಯಕರ್ತರು ಶ್ರಮಿಸಬೇಕು. ರಾಜ್ಯದಲ್ಲಿ ಸರ್ವಧರ್ಮಗಳ, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಬದ್ಧವಾಗಿದೆ. ಈಗಾಗಲೇ ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ ರೂ.50 ಕೋಟಿ ಅನುದಾನ ಘೋಷಣೆ ಮಾಡಿದ್ದು, ಈ ಪೈಕಿ ರೂ.25 ಕೋಟಿ ಬಿಡುಗಡೆ ಮಾಡಲಾಗಿದೆ. ನೇಕಾರರ ಕುಟುಂಬಕ್ಕೆ ಸಹಾಯಧನ ನೀಡಲಾಗುವುದು ಎಂದಿದ್ದಾರೆ.