‘ಉಂಬೋಕೆ ಉಡೋಕೆ ಅಣ್ಣಪ್ಪ ಕೆಲಸಕ್ಕಷ್ಟೇ ಇಲ್ಲಪ್ಪ’: ಕರ್ಫ್ಯೂ ಅಪಹಾಸ್ಯ ಮಾಡಿದವರಿಗೆ ಸುಧಾಕರ್ ತಿರುಗೇಟು

ಕೊರೊನಾ ಎರಡನೇ ಅಲೆಯ ಬಗ್ಗೆ ಪ್ರತಿಪಕ್ಷಗಳ ನಾಯಕರು ಅನಗತ್ಯ ಟೀಕೆ ಮಾಡುವ ಬದಲು ಸರ್ಕಾರಕ್ಕೆ ಸಲಹೆ ನೀಡಲಿ ಎಂದು ಆರೋಗ್ಯ ಮತ್ತು ಕುಟಂಬ ಕಲ್ಯಾಣ ಸಚಿವ ಡಾ.ಸುಧಾಕರ್ ಮನವಿ ಮಾಡಿದ್ದಾರೆ.
ಕೆ.ಸುಧಾಕರ್
ಕೆ.ಸುಧಾಕರ್

ಬೆಂಗಳೂರು: ಕೊರೊನಾ ಎರಡನೇ ಅಲೆಯ ಬಗ್ಗೆ ಪ್ರತಿಪಕ್ಷಗಳ ನಾಯಕರು ಅನಗತ್ಯ ಟೀಕೆ ಮಾಡುವ ಬದಲು ಸರ್ಕಾರಕ್ಕೆ ಸಲಹೆ ನೀಡಲಿ ಎಂದು ಆರೋಗ್ಯ ಮತ್ತು ಕುಟಂಬ ಕಲ್ಯಾಣ ಸಚಿವ ಡಾ.ಸುಧಾಕರ್ ಮನವಿ ಮಾಡಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಕೊರೊನಾ ಎರಡನೇ ಅಲೆಯನ್ನು ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಪರೀಕ್ಷೆ ಹೆಚ್ಚಳ, ಸಮರ್ಪಕ ಸಂಪರ್ಕ ಪತ್ತೆ, ಸೋಂಕಿತರ ಚಿಕಿತ್ಸೆಗೆ ಆಂಬ್ಯುಲೆನ್ಸ್, ಹಾಸಿಗೆಗಳ ವ್ಯವಸ್ಥೆ ಹೀಗೆ ಹಲವು ರೀತಿಯ ಸಿದ್ಧತೆಗಳಲ್ಲಿ ಅಧಿಕಾರಿಗಳು, ಕೊರೊನಾ ಯೋಧರು ನಿರಂತರ ಶ್ರಮಿಸುತ್ತಿದ್ದಾರೆ.

ಇಂತಹ ಸಂದರ್ಭದಲ್ಲಿ ಸೋಂಕು ಹರಡುವಿಕೆಯನ್ನು ತಡೆಯಲು ಕೊರೊನಾ ಕರ್ಫ್ಯೂ ಸೇರಿದಂತೆ ಹಲವು ಮುಂಜಾಗ್ರತಾ ಕ್ರಮಗಳನ್ನು ಜಾರಿ ಮಾಡಲಾಗಿದೆ. ಈ ಕುರಿತು ಕೆಲವರು ಅಪಹಾಸ್ಯ, ಟೀಕೆ-ಟಿಪ್ಪಣಿಗಳು ಮಾಡುತ್ತಿರುವುದನ್ನು ಗಮನಿಸಿದ್ದೇನೆ. ಮೊದಲನೇ ಅಲೆ ಕಡಿಮೆಯಾದ ನಂತರ ಕೊಂಚ ನಿರ್ಲಕ್ಷ್ಯ ತೋರುತ್ತಿರುವ ಜನರಲ್ಲಿ ಮತ್ತೊಮ್ಮೆ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದ್ದಾರೆ.

ಈ ಬಾರಿ ಲಸಿಕೆ ಕೂಡ ಲಭ್ಯವಿರುವುದರಿಂದ ಹೆಚ್ಚು ಹೆಚ್ಚು ಜನರಿಗೆ ಲಸಿಕೆ ವಿತರಿಸುವುದು, ಲಸಿಕೆ ಬಗ್ಗೆ ಇರುವ ಅಂಜಿಕೆ, ತಪ್ಪು ತಿಳುವಳಿಕೆಗಳ ನಿವಾರಣೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ ವಿಪಕ್ಷಗಳಿಗೆ ಮೊಸರಿನಲ್ಲಿ ಕಲ್ಲು ಹುಡುಕುವುದು, ಕಂಡೋರ ಮಕ್ಕಳನ್ನ ಬಾವಿಗೆ ತಳ್ಳಿ ಆಳ ನೋಡುವುದೇ ಕೆಲಸವಾಗಿದೆ.

ಅನ್ಯ ಪಕ್ಷಗಳ ನಾಯಕರೂ ಜನರಿಂದ ಆರಿಸಿ ಬಂದಂತಹ ಜನಪ್ರತಿನಿಧಿಗಳೇ. ಸರ್ಕಾರಕ್ಕೆ ರಚನಾತ್ಮಕ ಸಲಹೆ ಸೂಚನೆ ನೀಡುವುದಕ್ಕೆ ಅವರಿಗೆ ಅವಕಾಶವೂ ಇದೆ, ಅದು ಅವರ ಕರ್ತವ್ಯವೂ ಹೌದು. ಅದು ಬಿಟ್ಟು ‘ಉಂಬೋಕೆ ಉಡೋಕೆ ಅಣ್ಣಪ್ಪ ಕೆಲಸಕ್ಕಷ್ಟೇ ಇಲ್ಲಪ್ಪ’ ಎಂಬಂತೆ ಕೇವಲ ಅನಗತ್ಯ ಟೀಕೆ ಮಾಡುವುದು ಸರಿಯಲ್ಲ, ಅದು ಅವರಿಗೆ ಶೋಭೆ ತರುವುದೂ ಇಲ್ಲ.

ಪಕ್ಷಾತೀತವಾಗಿ ಎಲ್ಲ ನಾಯಕರು, ಜನಪ್ರತಿನಿಧಿಗಳು ಒಗ್ಗಟ್ಟಾಗಿ, ತಮ್ಮ ತಮ್ಮ ಕ್ಷೇತ್ರಗಳಲ್ಲಿ ಲಸಿಕೆ ಅಭಿಯಾನಕ್ಕೆ ವೇಗ ನೀಡಲು ಪ್ರಯತ್ನಿಸಿದರೆ, ಜನರಲ್ಲಿ ಎರಡನೇ ಅಲೆ ಬಗ್ಗೆ ಜಾಗೃತಿ ಮೂಡಿಸಿದರೆ, ರಾಜ್ಯವನ್ನು ಆದಷ್ಟು ಬೇಗ ಕೊರೊನಾ ಮುಕ್ತವನ್ನಾಗಿ ಮಾಡಿ, ಜನರ ಜೀವ ಮತ್ತು ಜೀವನೋಪಾಯ ಎರಡನ್ನೂ ಉಳಿಸಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com