ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಜನರಿಗೆ ನೆರವಾಗಿ: ಶಾಸಕರಿಗೆ ಸಿದ್ದರಾಮಯ್ಯ ಮನವಿ

ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಜನರಿಗೆ ನೆರವಾಗುವಂತೆ ಕಾಂಗ್ರೆಸ್ ಪಕ್ಷದ ಶಾಸಕರಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಜನರಿಗೆ ನೆರವಾಗುವಂತೆ ಕಾಂಗ್ರೆಸ್ ಪಕ್ಷದ ಶಾಸಕರಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

ಕೋವಿಡ್ 2ನೇ ಅಲೆ ರಾಜ್ಯ ಮತ್ತು ರಾಷ್ಟ್ರವನ್ನು ಬಾಧಿಸುತ್ತಿದೆ. ತಜ್ಞರುಗಳು ಮತ್ತು ಪರಿಣಿತರು 2020ರ ನವೆಂಬರ್ ತಿಂಗಳಲ್ಲಿಯೇ ಕೋವಿಡ್ 2ನೇ ಅಲೆ ಫೆಬ್ರವರಿ ಅಥವಾ ಮಾರ್ಚ್ ತಿಂಗಳ ಹೊತ್ತಿಗೆ ತನ್ನ ಭೀಕರತೆಯನ್ನು ಪ್ರದರ್ಶಿಸಲಿದೆ ಎಂದು ಹೇಳಿದ್ದರು. ಈ ಎಚ್ಚರಿಕೆಗಳನ್ನು ಸರ್ಕಾರಗಳು ಕಸದ ಬುಟ್ಟಿಗೆ ಎಸೆದವು. ಸಮರ್ಪಕವಾಗಿ ಟೆಸ್ಟಿಂಗ್ ಗಳನ್ನು ಸಹ ನಡೆಸುತ್ತಿಲ್ಲ, ನಡೆಸಿದ ಟೆಸ್ಟ್ ವರದಿ ವಾರವಾದರೂ ಜನರ ಕೈಗೆ ವೈದ್ಯರುಗಳ ಕೈಗೆ ಸಿಗುತ್ತಿಲ್ಲ.  ಇದೆಲ್ಲದರಿಂದಾಗಿ ಕೋವಿಡ್‍ನಿಂದ ಮರಣ ಹೊಂದುವವರಷ್ಟೆ  ಆತಂಕದಿಂದ ಮರಣ ಹೊಂದುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. 

ತಜ್ಞರ ವರದಿಯನ್ನು ಗಂಭೀರವಾಗಿ ಪರಿಗಣಿಸಿ  ಲ್ಯಾಬ್ ಗಳು,  ಆಸ್ಪತ್ರೆಗಳು, ಹಾಸಿಗೆಗಳು, ಆಕ್ಸಿಜನ್ ವ್ಯವಸ್ಥೆ, ಐ.ಸಿ.ಯು, ವೆಂಟಿಲೇಟರ್ ಗಳು, ಕೋವಿಡ್ ನಿಯಂತ್ರಣಕ್ಕೆ ಬೇಕಾದ ಔಷಧಿಗಳು ಇತ್ಯಾದಿಯಾಗಿ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದ್ದರೆ ಇವತ್ತಿನ ಈ ಅನಾಹುತವನ್ನು ತಪ್ಪಿಸಬಹುದಾಗಿತ್ತು.  ಈ ಸಿದ್ದತೆಗಳನ್ನೇನೂ ಮಾಡಿಕೊಳ್ಳದ ಕಾರಣದಿಂದಾಗಿಯೇ ಜನರು ಅನಾಥರಂತೆ ರಸ್ತೆಗಳಲ್ಲಿ, ಆಸ್ಪತ್ರೆಯ ವರಾಂಡಗಳಲ್ಲಿ ಮರಣ ಹೊಂದುತ್ತಿದ್ದಾರೆ.ಮರಣ ಹೊಂದುತ್ತಿರುವ ಬಹುಪಾಲು ಜನರು ರಾಜಕೀಯ ನಿರ್ಲಕ್ಷ್ಯದಿಂದ ಆದ ಕೊಲೆಗಳು ಎನ್ನದೆ ಅನ್ಯ ದಾರಿ ಇಲ್ಲ ಎಂದಿದ್ದಾರೆ.

ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಸರ್ಕಾರಗಳಿಗೆ ಶವಸಂಸ್ಕಾರವನ್ನೂ ಸಹ ಘನತೆಯಿಂದ ನಡೆಸಲು ಸಾಧ್ಯವಾಗದಷ್ಟರ ಮಟ್ಟಿಗೆ ಪರಿಸ್ಥಿತಿ ಅರಾಜಕವಾಗಿದೆ. ಸಂಕಷ್ಟದಲ್ಲಿರುವ ಬಡವರು  ಹಸಿವಿನಿಂದ ನರಳದಂತೆ ನೋಡಿಕೊಳ್ಳಲು, ಪಡಿತರ ವ್ಯವಸ್ಥೆಯನ್ನು ಇನ್ನಷ್ಟುಸಮರ್ಪಕಗೊಳಿಸಬೇಕಾಗಿತ್ತು.  ಅದರ ಬದಲಾಗಿ ಜನರಿಗೆ ನೀಡುವ ಪಡಿತರ ಅಕ್ಕಿಯನ್ನು 2 ಕೆ.ಜಿ ಗೆ ಇಳಿಸಲಾಗಿದೆ.  ಇಂದಿರಾ ಕ್ಯಾಂಟಿನ್‍ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ. 

ಇಂತಹ ಸಂದರ್ಭದಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ಶಾಸಕರು, ಮುಖಂಡರು, ಕಾರ್ಯಕರ್ತರು, ಕೋವಿಡ್‍ನ 2ನೇ ಅಲೆ ರಾಕ್ಷಸ ರೂಪವನ್ನು ತಳೆಯುತ್ತಿರುವ ಈ ಸಂದರ್ಭದಲ್ಲಿ ಜನರ ಜೊತೆ ನಿಂತು, ಆಸ್ಪತ್ರೆ, ಆಕ್ಸಿಜನ್, ಔಷಧಿಗಳು, ಆಂಬ್ಯುಲೆನ್ಸ್‍ಗಳು, ಇನ್ನಿತರ ಚಿಕಿತ್ಸೆಗಳಿಗೆ ನೆರವಾಗಬೇಕು ಹಾಗೂ  ಹಸಿವಿನಿಂದ ಬಳಲುತ್ತಿರುವವರಿಗೆ ಅನ್ನ ಆಹಾರದ ವ್ಯವಸ್ಥೆಯನ್ನು ಸಹ ಕಳೆದ ವರ್ಷದಂತೆ  ಈ ವರ್ಷವೂ ಮಾಡುವ ಮೂಲಕ ಜನರ ಸಕಲ ಸಂಕಷ್ಟಗಳಿಗೆ ಸ್ಪಂದಿಸುವ ಮಾನವೀಯ ಕಾರ್ಯಗಳನ್ನು ಮಾಡಬೇಕೆಂದು ಸಿದ್ದರಾಮಯ್ಯ ಕೋರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com