ಬೆಂಗಳೂರು: ಬಹು ನಿರೀಕ್ಷಿತ ಸಚಿವ ಸಂಪುಟ ರಚನೆಗೆ ಇಂದು ಅಥವಾ ನಾಳೆ ಹೈಕಮಾಂಡ್ ನಿಂದ ಸೂಚನೆ ಬರುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇಂದು ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ನಿವಾಸಕ್ಕೆ ಆಗಮಿಸಿದ ಸಿಎಂ ಬೊಮ್ಮಾಯಿ ಸಚಿವ ಸಂಪುಟ ರಚನೆ ಬಗ್ಗೆ ಚರ್ಚಿಸಲು ಬಂದಿದ್ದರೇ, ಯಡಿಯೂರಪ್ಪವರ ಕಾವೇರಿ ನಿವಾಸ ಒಂದರ್ಥದಲ್ಲಿ ಶಕ್ತಿ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಹೇಳಲಾಗುತ್ತಿದೆ. ಅದರ ಜೊತೆಗೆ ಸಚಿವಾಕಾಂಕ್ಷಿ ಶಾಸಕರು ಸಿಎಂ ಬೊಮ್ಮಾಯಿಯವರ ಆರ್ ಟಿ ನಗರ ನಿವಾಸಕ್ಕೆ ಒಬ್ಬರ ಮೇಲೊಬ್ಬರಂತೆ ಬಂದು ಭೇಟಿಯಾಗುತ್ತಿದ್ದುದು ಕಂಡುಬಂತು.
ಇಂದು ಬೆಳಗ್ಗೆ ತಮ್ಮ ನಿವಾಸದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ಇತ್ತೀಚೆಗೆ ಉಂಟಾದ ಪ್ರವಾಹದಿಂದ ಆಗಿರುವ ಹಾನಿ, ನಷ್ಟದ ಬಗ್ಗೆ ಹಣಕಾಸಿನ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಲು ಅಂದಾಜಿಸಲಾಗುತ್ತಿದೆ. ಇಂದು ಅಧಿಕಾರಿಗಳ ಸಭೆ ನಡೆಸಿ ನಂತರ ಮಾಹಿತಿ ನೀಡುತ್ತೇನೆ ಎಂದರು.
ಸಿಎಂ ಬೊಮ್ಮಾಯಿಯವರ ಆರ್ ಟಿ ನಗರ ನಿವಾಸಕ್ಕೆ ಹಿರಿಯ ಶಾಸಕರ ದಂಡೇ ಆಗಮಿಸುತ್ತಿದೆ. ಸರ್, ನಮ್ಮನ್ನು ಕೈ ಬಿಡಬೇಡಿ ಸರ್, ನಿಮ್ಮನ್ನೇ ನಂಬಿಕೊಂಡಿದ್ದೇವೆ, ಮಂತ್ರಿ ಮಂಡಲದಲ್ಲಿ ನಮಗೊಂದು ಚಾನ್ಸ್ ಕೊಡಿ ಎಂದು ಮುಖ್ಯಮಂತ್ರಿಗೆ ದುಂಬಾಲು ಬೀಳುತ್ತಿರುವುದು ಸಾಮಾನ್ಯವಾಗಿದೆ.
Advertisement