ನವದೆಹಲಿ: ಸಚಿವ ಸಂಪುಟ ರಚನೆ ಮತ್ತು ಎಷ್ಟು ಹೊಸ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬುದು ಬಹುತೇಕ ಮಂಗಳವಾರ ಸಂಜೆಯೇ ತೀರ್ಮಾನವಾಗಲಿದೆ. ಎಲ್ಲವೂ ನಿಗದಿಯಂತೆ ನಡೆದರೆ ಒಂದೆರಡು ದಿನದಲ್ಲಿ(ಆಗಸ್ಟ್ 5 ರಂದು) ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ ಇದೇ ಆಗಸ್ಟ್ 5 ರಂದು ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಿದೆ ಎಂದು ಹೇಳಲಾಗಿದೆ.
ಒಂದೇ ಬಾರಿಗೆ ಸಂಪುಟ ವಿಸ್ತರಣೆ ಮಾಡಿ ಮುಗಿಸಲು ಹೈಕಮಾಂಡ್ ತೀರ್ಮಾನ ಮಾಡಿದ್ದು ಮೊದಲ ಹಂತದಲ್ಲಿ 25 ರಿಂದ 30 ಹೊಸ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದೂ ಹೇಳಲಾಗಿದೆ.
ವರಿಷ್ಠರು ಇಂದೇ ನೂತನ ಸಚಿವರ ಪಟ್ಟಿ ಪ್ರಕಟಿಸುತ್ತಾರೆ. ನಂತರ ಸಚಿವರ ಪ್ರಮಾಣ ವಚನ ದಿನಾಂಕ ಪ್ರಕಟಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಡಿಸಿಎಂ ಸ್ಥಾನಗಳ ಬಗ್ಗೆಯೂ ತೀರ್ಮಾನ ಆಗಲಿದೆ. ಎರಡು ಮೂರು ಪಟ್ಟಿ ನೀಡಲಾಗಿದೆ. ಹೈಕಮಾಂಡ್ ಚರ್ಚೆಯ ನಂತರ ಸರ್ವ ಸಮ್ಮತ ತೀರ್ಮಾನ ಹೊರ ಹೊಮ್ಮಲಿದೆ. ಇಂದಿನ ಸಂಸತ್ ಕಲಾಪದ ನಂತರ ವರಿಷ್ಠರು ಸಭೆ ಸೇರಿ ಸಚಿವರು ಹಾಗೂ ಡಿಸಿಎಂ ಗಳ ನೇಮಕ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ.
ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ವಾರ ಕಳೆದಿದ್ದರೂ ಸಂಪುಟ ವಿಸ್ತರಣೆಗೆ ಇನ್ನೂ ಮುಹೂರ್ತ ಕೂಡಿ ಬಂದಿಲ್ಲ.
Advertisement