ನವದೆಹಲಿ: ರಾಜ್ಯ ಸಚಿವ ಸಂಪುಟದ ಅಂತಿಮ ಪಟ್ಟಿಯನ್ನು ಮಂಗಳವಾರ ರಾತ್ರಿಯೊಳಗೆ ಹೈಕಮಾಂಡ್ ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಅವರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿನ ವಸ್ತುಸ್ಥಿತಿಯನ್ನು ಹೈಕಮಾಂಡ್ ಗೆ ಮನವರಿಕೆ ಮಾಡಿಕೊಟ್ಟಿದ್ದು ಹಲವು ಆಯಾಮಗಳಲ್ಲಿ ಚರ್ಚೆ ನಡೆದಿದೆ. ಸೂಕ್ತವಾದ ರೀತಿಯಲ್ಲಿ ಸಂಪುಟ ರಚನೆಯಾಗಬೇಕು ಎಂದು ಹೇಳಿದ್ದೇವೆ. ಅವರು ಕೂಡಾ ಅನೇಕ ಸಲಹೆ, ಸೂಚನೆಗಳನ್ನು ನೀಡಿದ್ದಾರೆ. ಒಳ್ಳೆಯ ವಾತವಾರಣದಲ್ಲಿ ಚರ್ಚೆಯಾಗಿದೆ, ಹೈಕಮಾಂಡ್ ಉತ್ತಮ ರೀತಿಯಲ್ಲಿ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ ಎಂದರು.
ಹೈಕಮಾಂಡ್ ಗೆ ಎರಡು ಪಟ್ಟಿ ನೀಡಿದ್ದೇವೆ, ಸಂಪುಟದಲ್ಲಿ ಯಾರಿಗೆ ಸ್ಥಾನ ನೀಡಬೇಕು, ಯಾರನ್ನು ಬಿಡಬೇಕು ಎಂಬ ಬಗ್ಗೆ ವರಿಷ್ಠರು ಪರಿಶೀಲಿಸಿ ನಾಳೆ ರಾತ್ರಿಯೊಳಗೆ ಅಂತಿಮ ಪಟ್ಟಿ ಬಿಡುಗಡೆ ಮಾಡಲಿದ್ದಾರೆ. ಡಿಸಿಎಂ ಸ್ಥಾನದ ಪ್ರಕಟಣೆ ಕೂಡಾ ಅವರೇ ಮಾಡಲಿದ್ದಾರೆ. ವಲಸಿಗರು, ಮೂಲ ಎಂಬ ವರ್ಗೀಕರಣವಿಲ್ಲದೆ ಎಲ್ಲರನ್ನೂ ಪರಿಗಣಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.
Advertisement