ದಶಕಗಳ ನಂತರ, ರಾಜ್ಯದಲ್ಲಿ ಉಪಮುಖ್ಯಮಂತ್ರಿಯಿಲ್ಲದ 2 ನೇ ಸಂಪುಟ ರಚನೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಬುಧವಾರ 29 ಸದಸ್ಯರ ನೂತನ ಸಂಪುಟ ರಚನೆಯಾಗಿದೆ. 
ರಾಜಭವನದಲ್ಲಿ ನೂತನ ಸಚಿವರೊಂದಿಗೆ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್
ರಾಜಭವನದಲ್ಲಿ ನೂತನ ಸಚಿವರೊಂದಿಗೆ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಬುಧವಾರ 29 ಸದಸ್ಯರ ನೂತನ ಸಂಪುಟ ರಚನೆಯಾಗಿದೆ. 

ಈ ನಡುವೆ, ಕಳೆದ 13 ವರ್ಷಗಳಲ್ಲಿ ಎರಡನೇ ಬಾರಿಗೆ ಉಪಮುಖ್ಯಮಂತ್ರಿ ನೇಮಕದ ಪ್ರವೃತ್ತಿಗೆ ಸಿಎಂ ಬೊಮ್ಮಾಯಿ ಬ್ರೇಕ್‌ ಹಾಕಿದ್ದಾರೆ. ಇತ್ತೀಚಿನ ದಶಕಗಳಲ್ಲಿ ಸಿದ್ದರಾಮಯ್ಯ ಅವರನ್ನು ಹೊರತುಪಡಿಸಿದರೆ ಬೊಮ್ಮಾಯಿ ನೇತೃತ್ವದ ಸರ್ಕಾರ ಯಾವುದೇ ಉಪಮುಖ್ಯಮಂತ್ರಿಯಿಲ್ಲದ ಸರ್ಕಾರವಾಗಿದೆ. 1989ರಲ್ಲಿ ಅಧಿಕಾರಕ್ಕೆ ಮರಳಿದ್ದ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್‌ 1994ರಲ್ಲಿ ಅಧಿಕಾರದಿಂದ ಕೆಳಗಿಳಿದಿದ್ದರು. ನಂತರ ಮೂರು ಮುಖ್ಯಮಂತ್ರಿಗಳನ್ನು ಬದಲಿಸಲಾಗಿತ್ತು. 

1992 ರಲ್ಲಿ ವೀರಪ್ಪ ಮೊಯ್ಲಿ ಸಿಎಂ ಆಗಿದ್ದ ಎಸ್‌.ಎಂ ಕೃಷ್ಣ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ನೇಮಿಸಲಾಗಿತ್ತು. ಎಚ್‌.ಡಿ.ದೇವೇಗೌಡ ಅವರ ಅಧಿಕಾರದಲ್ಲಿ ಜನತಾದಳ ಅಧಿಕಾರಕ್ಕೆ ಬಂದಾಗ ಜೆ.ಎಚ್‌ ಪಾಟೀಲ್‌ ಉಪಮುಖ್ಯಮಂತ್ರಿಯಾಗಿದ್ದರು. ನಂತರ ದೇವೇಗೌಡ ಪ್ರಧಾನಿ ಹುದ್ದೆ ಅಲಂಕರಿಸಿದ್ದರಿಂದ ತೆರವಾದ ಸಿಎಂ ಸ್ಥಾನಕ್ಕೆ ಪಟೇಲ್‌ ಆಯ್ಕೆಯಾಗಿದ್ದರು. ಆಗ ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿಯಾಗಿದ್ದರು. 

ಈ ನಡುವೆ 1999ರಿಂದ 2004ರ ಅವಧಿಯಲ್ಲಿ ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಯಾವುದೇ ಡಿಸಿಎಂ ಇರಲಿಲ್ಲ. ಧರ್ಮಸಿಂಗ್‌ ಅವರ ಸರ್ಕಾರದಲ್ಲಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿದ್ದರು. ಜೆಡಿಎಸ್‌ ಮುಖಂಡ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗಿನ ಮೈತ್ರಿ ಸರ್ಕಾರದಲ್ಲಿ ಬಿಜೆಪಿಯ ಯಡಿಯೂರಪ್ಪ ಉಪಮುಖ್ಯಮಂತ್ರಿಯಾಗಿದ್ದರು. ಈಗ ಡಿಸಿಎಂ ನೇಮಕದ ಪ್ರವೃತ್ತಿಯನ್ನು ಎರಡನೇ ಬಾರಿಗೆ ಬೊಮ್ಮಾಯಿ ಮುರಿದಿದ್ದಾರೆ. 

ಈ ಬಾರಿ ಬಿಜೆಪಿ ಹೈಕಮಾಂಡ್‌ ಉಪಮುಖ್ಯಮಂತ್ರಿ ನೇಮಕದ ಅಗತ್ಯವಿಲ್ಲ ಎಂದಿದೆ. ಮುಖ್ಯಮಂತ್ರಿ ಬದಲಾದ ಸಂದರ್ಭದಲ್ಲಿ ನಾಲ್ಕರಿಂದ ಐದು ಡಿಸಿಎಂ ಹುದ್ದೆ ಸೃಷ್ಟಿಯಾಗಲಿದೆ ಎಂಬ ವದಂತಿ ಹಬ್ಬಿತ್ತು. ಯಡಿಯೂರಪ್ಪ ಅವರ ಸಂಪುಟದಲ್ಲಿ ಮೂವರು ಡಿಸಿಎಂಗಳಿದ್ದರು. ಇದಕ್ಕೆ ವಿಪಕ್ಷಗಳಿಂದ ಭಾರಿ ಟೀಕೆ ವ್ಯಕ್ತವಾಗಿತ್ತು. ಶ್ರೀರಾಮುಲು ಅವರನ್ನು ಡಿಸಿಎಂ ಮಾಡಬೇಕೆಂದು ಅವರ ಸಮುದಾಯದ ಸ್ವಾಮೀಜಿಗಳು ಕೂಡ ಸಾಕಷ್ಟು ಒತ್ತಡ ಹೇರಿದ್ದರು. ಆದರೆ, ಹೈಕಮಾಂಡ್‌ ಅದಕ್ಕೆ ಸೊಪ್ಪು ಹಾಕಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com