ಬೆಂಗಳೂರು: ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಆಸ್ತಿ ಮೇಲೆ ಈಡಿ ದಾಳಿ ನಡೆಸಿದ್ದಕ್ಕೆ ಅವರದ್ದೇ ಪಕ್ಷದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಳಗೊಳಗೆ ಖುಷಿಯಾಗಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮೇಲ್ಮನೆ ಸದಸ್ಯ ಎನ್.ರವಿಕುಮಾರ್ ಹೇಳಿದ್ದಾರೆ.
ಇಎಂಐ ಹಗರಣ ಸಂಬಂಧ ಮಾಜಿ ಸಚಿವರಾದ ರೋಷನ್ ಬೇಗ್ ಹಾಗೂ ಜಮೀರ್ ಅಹ್ಮದ್ ಆಸ್ತಿಗಳ ಮೇಲೆ ಈಡಿ ರೇಡ್ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ರವಿಕುಮಾರ್, ಡಿಕೆಶಿ, ಸಿದ್ದು ಕಾಲದಲ್ಲಿ ಏನೇನಾಗಿದೆಂದು ಪುಂಖಾನುಪುಂಕವಾಗಿ ಮಾಧ್ಯಮಗಳಲ್ಲಿ ತೋರಿಸಿದ್ದಾರೆ.ಎಐಸಿಯ ರಾಹುಲ್ ಗಾಂಧಿ, ಸೋನಿಯಾಗಾಂಧಿಯೂ ಸೇರಿದಂತೆ ಡಿ.ಕೆ ಶಿವಕುಮಾರ್ ಮೇಲೂ ಸಹ ಸಾಕಷ್ಟು ಪ್ರಕರಣದ ಆರೋಪಗಳಿವೆ.
ಏನೇ ದಾಳಿ ನಡೆದರೂ ಕಾಂಗ್ರೆಸಿಗರು ಬಿಜೆಪಿ ಮೇಲೆ ಬೆರಳು ಮಾಡಿ ತೋರಿಸುತ್ತಾರೆ. ಆದರೆ ಅವರು ತಮ್ಮ ಒಂದು ಬೆರಳನ್ನು ಬಿಜೆಪಿ ಕಡೆ ತೋರಿಸಿದರೆ ನಾಲ್ಕು ಬೆರಳು ಅವರ ಕಡೆ ತೋರಿಸುತ್ತವೆ ಎಂದು ಮಾರ್ಮಿಕವಾಗಿ ನುಡಿದರು.
ಜಮೀರ್ ಆಸ್ತಿಗಳ ಮೇಲೆ ದಾಳಿ ನಡೆಸಿದ್ದಕ್ಕೆ ಡಿ.ಕೆ ಶಿವಕುಮಾರ್ ಒಳಗೊಳಗೇ ಬಹಳ ಖುಷಿಯಾಗಿದ್ದಾರೆ. ಸಿದ್ದರಾಮಯ್ಯನವರಿಗೂ ಗೊತ್ತಾಗಬಾರದೆಂದು ಡಿಕೆಶಿ ಬಿಜೆಪಿ ವಿರುದ್ಧ ಆರೋಪ ಮಾಡಿದ್ದಾರೆ. ಡಿ.ಕೆ ಶಿವಕುಮಾರ್ ದ್ವಂದ್ವ ನಿಲುವಿನಲ್ಲಿ ಹೇಳಿಕೆ ನೀಡುತ್ತಾರೆ ಎಂದು ರವಿಕುಮಾರ್ ಹೇಳಿದರು.
Advertisement