ರಾಜಕೀಯವಾಗಿ ನನ್ನನ್ನು ತುಳಿಯಲು ಹೆಣೆದಿರುವ ಷಡ್ಯಂತ್ರವಿದು, ತನಿಖೆ ಎದುರಿಸಲು ಸಿದ್ದ: ಶಶಿಕಲಾ ಜೊಲ್ಲೆ

ಪಕ್ಷದ ರಾಷ್ಟ್ರೀಯ ವರಿಷ್ಠರು, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಆಶೀರ್ವಾದದಿಂದ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ವಿಶ್ವಾಸದಿಂದ ಎರಡನೇ ಬಾರಿ ಸಚಿವೆಯಾಗಲು ನನಗೆ ಅವಕಾಶ ನೀಡಿದ್ದಾರೆ, ರಾಜ್ಯಾದ್ಯಂತ ಪ್ರವಾಸ ಮಾಡಿ ನಮ್ಮ ಇಲಾಖೆಗೆ ಸಂಬಂಧಪಟ್ಟ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಪ್ರತಿಕ್ರಿಯಿಸಿದ್ದಾರೆ.
ಸಚಿವೆ ಶಶಿಕಲಾ ಜೊಲ್ಲೆ
ಸಚಿವೆ ಶಶಿಕಲಾ ಜೊಲ್ಲೆ

ಬೆಳಗಾವಿ: ಪಕ್ಷದ ರಾಷ್ಟ್ರೀಯ ವರಿಷ್ಠರು, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಆಶೀರ್ವಾದದಿಂದ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ವಿಶ್ವಾಸದಿಂದ ಎರಡನೇ ಬಾರಿ ಸಚಿವೆಯಾಗಲು ನನಗೆ ಅವಕಾಶ ನೀಡಿದ್ದಾರೆ, ರಾಜ್ಯಾದ್ಯಂತ ಪ್ರವಾಸ ಮಾಡಿ ನಮ್ಮ ಇಲಾಖೆಗೆ ಸಂಬಂಧಪಟ್ಟ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಪ್ರತಿಕ್ರಿಯಿಸಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಯಾವ ಇಲಾಖೆಯ ಜವಾಬ್ದಾರಿ ನೀಡುತ್ತಾರೋ ಆ ಇಲಾಖೆಯ ಕೆಲಸಗಳನ್ನು ಮತ್ತು ಪಕ್ಷ ಸಂಘಟನೆಯ ಕೆಲಸಗಳನ್ನು ಮಾಡಿಕೊಂಡು ಹೋಗುತ್ತೇನೆ. ನನ್ನ ಕ್ಷೇತ್ರದಲ್ಲಿ ಪ್ರವಾಹದಿಂದ ಬಹಳಷ್ಟು ಹಾನಿಯಾಗಿದೆ, ನಾಳೆ ಅಲ್ಲಿಗೆ ಸಹ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ ಜನರಿಗೆ ಸಹಾಯ ಮಾಡುತ್ತೇನೆ ಎಂದರು.

ಕೊರೋನಾ ಮಹಾರಾಷ್ಟ್ರದಲ್ಲಿ ಹೆಚ್ಚಾಗಿರುವುದರಿಂದ ಗಡಿಭಾಗದಲ್ಲಿ ಸಂಚರಿಸುವವರ ಬಗ್ಗೆ ನಿಗಾ ವಹಿಸಲು ವಿಜಯಪುರ ಸೇರಿದಂತೆ ಗಡಿ ಪ್ರದೇಶಗಳಿಗೂ ಇಂದು ಭೇಟಿ ನೀಡುತ್ತೇನೆ ಎಂದರು.

ರಾಜಕೀಯ ಷಡ್ಯಂತ್ರ: ತಮ್ಮ ಮೇಲೆ ಬಂದಿರುವ ಮೊಟ್ಟೆ ಖರೀದಿ ಅವ್ಯವಹಾರ ಆರೋಪಕ್ಕೆ ಸಂಬಂಧಪಟ್ಟಂತೆ ಏನೂ ಪ್ರತಿಕ್ರಿಯೆ ನೀಡುವುದಿಲ್ಲ. ರಾಜಕೀಯದಲ್ಲಿದ್ದಾಗ ಹೆಣ್ಣು ಮಕ್ಕಳು ಈ ಸ್ಥಾನಕ್ಕೆ ಬಂದು ಉತ್ತಮ ಕೆಲಸ ಕಾರ್ಯಗಳನ್ನು ಮಾಡುತ್ತಿರುವಾಗ ಅನೇಕ ಶತ್ರುಗಳು, ಹಿತಶತ್ರುಗಳು ಇರುತ್ತಾರೆ, ಮುಂದೆ ಹೋಗಬಾರದೆಂದು ಷಡ್ಯಂತ್ರ ಮಾಡಿರುತ್ತಾರೆ. ಅವ್ಯವಹಾರ ಆರೋಪದ ಬಗ್ಗೆ ಯಾವುದೇ ತನಿಖೆಯಾದರೂ ಎದುರಿಸಲು ಸಿದ್ದಳಿದ್ದೇನೆ ಎಂದರು.

ನಾನು ಯಾವುದೇ ತಪ್ಪು ಮಾಡಿಲ್ಲ, ತಪ್ಪು ಮಾಡುವ ಅಗತ್ಯವೂ ಇಲ್ಲ, ತನಿಖೆಯಾಗಿ ವರದಿ ಹೊರಬರಲಿ, ಎಲ್ಲವನ್ನೂ ಎದುರಿಸಲು ಸಿದ್ದಳಿದ್ದೇನೆ. ನಾನು ಯಾವುದೇ ಅವ್ಯವಹಾರ ಮಾಡಿಲ್ಲ, ನನ್ನ ವಿರುದ್ಧ ಆರೋಪ ಮಾಡೋದಿಕ್ಕೆ ಶತ್ರುಗಳು ನಡೆಸಿರುವ ಷಡ್ಯಂತ್ರವನ್ನು ಹೆಣೆದಿದ್ದಾರೆ ಎಂದು ಆರೋಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com