ಶಿವಮೊಗ್ಗ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಮಾಡಿದ ಖಾತೆ ಹಂಚಿಕೆ ಹಲವು ಅಚ್ಚರಿಗಳಿಂದ ಕೂಡಿತ್ತು, ತೀರ್ಥಹಳ್ಳಿ ಶಾಸಕ ಹಾಗೂ ಹಿರಿಯ ಬಿಜೆಪಿ ಮುಖಂಡ ಆರಗ ಜ್ಞಾನೇಂದ್ರ ಅವರಿಗೆ ಮಹತ್ದ ಗೃಹಖಾತೆ ಜವಾಬ್ದಾರಿ ನೀಡಿದ್ದಾರೆ.
ಇದೇ ಮೊದಲ ಬಾರಿಗೆ ಸಚಿವರಾಗಿರುವ ಆರಗ ಜ್ಞಾನೇಂದ್ರ ಅವರಿಗೆ ಯಾವುದೇ ನಿರೀಕ್ಷೆಗಳಿರಲಿಲ್ಲವಂತೆ ಹಾಗೂ ಕೊಟ್ಟ ಖಾತೆಯನ್ನು ಸಮರ್ಥವಾಗಿ ನಿಭಾಯಿಸುವ ಆತ್ಮವಿಶ್ವಾಸವಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಪ್ರ: ಮೊದಲಬಾರಿಗೆ ಸಚಿವರಾಗಿದ್ದೀರಿ, ಗೃಹ ಖಾತೆಯ ಜವಾಬ್ದಾರಿಯನ್ನು ಹೇಗೆ ನಿರ್ವಹಿಸುವಿರಿ?
ಖಾತೆಯನ್ನು ಸಮರ್ಥವಾಗಿ ನಿರ್ವಹಿಸುವುದು ಸವಾಲಿನ ಕೆಲಸ. ಆದರೆ ನನ್ನ ರಾಜಕೀಯ ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನದಲ್ಲಿ ಸವಾಲುಗಳನ್ನು ನಿರ್ವಹಿಸುವುದು ಅಭ್ಯಾಸವಾಗಿ ಹೋಗಿದೆ. ನಾನು ಸವಾಲುಗಳನ್ನು ಇಷ್ಟಪಡುತ್ತೇನೆ ಮತ್ತು ಈ ಸೂಕ್ಷ್ಮ ಮತ್ತು ಜವಾಬ್ದಾರಿಯುತ ಕೆಲಸವನ್ನು ಧೈರ್ಯದಿಂದ ನಿರ್ವಹಿಸುವ ವಿಶ್ವಾಸ ನನಗಿದೆ. ಖಾತೆ ಹಂಚಿಕೆಯ ನಂತರ ನನಗೆ ಅಚ್ಚರಿಯಾಗಿತ್ತು, ನಾನು ಸ್ವಲ್ಪ ಹಿಂಜರಿಯುತ್ತಿದ್ದೆ, ಈ ವೇಳೆ ನಾನು ಮುಖ್ಯಮಂತ್ರಿಗೆ ಕರೆ ಮಾಡಿದೆ ಅವರು ನನಗೆ ಧೈರ್ಯ ತುಂಬಿದರು. ಖಾತೆ ನಿಭಾಯಿಸಲು ನೀವು ಸಮರ್ಥರಾಗಿದ್ದೀರಿ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಿಮಗೆ ಮಾರ್ಗದರ್ಶನ ನೀಡುತ್ತಾರೆ ಎಂದು ಹೇಳಿದರು. ಚಿಂತೆ ಮಾಡದಂತೆ ಹೇಳಿ ನನ್ನಲ್ಲಿ ಆತ್ಮವಿಶ್ವಾಸ ತುಂಬಿದರು.
ಪ್ರ: ಈ ಹಿಂದೆ ಬೊಮ್ಮಾಯಿ ಅವರು ಗೃಹ ಸಚಿವರಾಗಿದ್ದ ವೇಳೆ ಮಾದಕ ವಸ್ತು ನಿಯಂತ್ರಣಕ್ಕೆ ಶ್ರಮಿಸಿದ್ದರು, ನಿಮ್ಮ ಆದ್ಯತೆಯೇನು?
ಮಾದಕದ್ರವ್ಯದ ಅಪಾಯವು ಒಂದು ಪ್ರಮುಖ ಸಮಸ್ಯೆಯಾಗಿದೆ ಮತ್ತು ಇದು ನನ್ನ ಆದ್ಯತೆಯ ಪಟ್ಟಿಯಲ್ಲಿ ಮೊದಲಿರುತ್ತದೆ, ರಾಜ್ಯದಲ್ಲಿ ಶಾಂತಿ ಕದಡಲು ಪ್ರಯತ್ನಿಸುವ ಯಾವುದೇ ದೇಶವಿರೋಧಿ ಅಥವಾ ಸಮಾಜವಿರೋಧಿ ಅಂಶಗಳನ್ನು ಸರ್ಕಾರ ಸಹಿಸುವುದಿಲ್ಲ.
ಪ್ರ: ಕಸ್ಟಡಿಯಲ್ಲಿ ಆಫ್ರಿಕನ್ ಪ್ರಜೆ ಸಾವನ್ನಪ್ಪಿದ ಪ್ರಕರಣವನ್ನು ಹೇಗೆ ನಿರ್ವಹಿಸುವಿರಿ? ಸೂಕ್ತ ದಾಖಲಾತಿಗಳಿಲ್ಲದೇ ಹಲವರು ನೆಲೆಸಿದ್ದರೇ ಅಂತವರ ವಿರುದ್ಧ ನಿಮ್ಮ ಕ್ರಮ?
ಕಾನೂನುಬಾಹಿರ ವಾಸ್ತವ್ಯ ದೊಡ್ಡ ಅಪರಾಧವಾಗಿದೆ ಮತ್ತು ನಾವು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಅವರಲ್ಲಿ ಹಲವರು ಮಾದಕ ದ್ರವ್ಯ ಮಾರಾಟದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಲಾಗಿದೆ. ಒಬ್ಬ ಭಾರತೀಯ ಅಥವಾ ವಿದೇಶಿ ಪ್ರಜೆಯಾಗಿರಲಿ, ಯಾವುದೇ ಕಾನೂನುಬಾಹಿರ ಚಟುವಟಿಕೆಯನ್ನು ಸಹಿಸಲಾಗುವುದಿಲ್ಲ. ನಾನು ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿ ಸಮಸ್ಯೆ ಕುರಿತು ಚರ್ಚಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇನೆ.
ಪ್ರ:ಪೋಲಿಸ್ ಪಡೆಯನ್ನು ಹೆಚ್ಚು ಜನಸ್ನೇಹಿ ಮಾಡಲು ನೀವು ಸುಧಾರಣೆಗಳನ್ನು ಪರಿಚಯಿಸಲು ಯೋಜಿಸುತ್ತಿದ್ದೀರಾ?
ಗೃಹ ಸಚಿವರಾಗಿ ನನ್ನ ಇಲಾಖೆಯ ಸಿಬ್ಬಂದಿ ಜನರೊಂದಿಗೆ ಸಹೃದಯದಿಂದ ವರ್ತಿಸಬೇಕು ಮತ್ತು ಉತ್ತಮ ಪೊಲೀಸ್-ಸಾರ್ವಜನಿಕ ಸಂಬಂಧವನ್ನು ನಿರ್ಮಿಸಲು ಸಹಾಯ ಮಾಡಬೇಕೆಂದು ನಾನು ನಿರೀಕ್ಷಿಸುತ್ತೇನೆ.
ಪ್ರ: ಪೊಲೀಸ್ ಇಲಾಖೆಯ ದಕ್ಷತೆಯನ್ನು ಸುಧಾರಿಸಲು ನೀವು ಹೇಗೆ ಯೋಜಿಸುತ್ತಿದ್ದೀರಿ?
ದುಷ್ಕರ್ಮಿಗಳನ್ನು ಶಿಕ್ಷಿಸಿ ಮತ್ತು ಮುಗ್ಧರನ್ನು ರಕ್ಷಿಸುವುದು ನನ್ನ ಧ್ಯೇಯ, ಇಲಾಖೆಯು ಈ ತತ್ವಗಳನ್ನು ಅನುಸರಿಸುತ್ತಿದೆ, ಆದರೆ ಕೆಲವು ಸಮಸ್ಯೆಗಳು ತಲೆದೋರಿವೆ. ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ.
Advertisement