ಹಾರ-ತುರಾಯಿ ಸನ್ಮಾನ ಬೇಡ: ಜನತಾ ಪಕ್ಷದ ಸರ್ಕಾರ ನೆನಪಿಸಿದ ಆದೇಶ!

ರಾಜ್ಯ ಸರ್ಕಾರ ಇಂದು ಸಭೆ – ಸಮಾರಂಭಗಳ ರೀತಿ ರಿವಾಜುಗಳಿಗೆ ಸಂಬಂಧಿಸಿದಂತೆ ಹೊರಡಿಸಿದ ಆದೇಶವೊಂದು ಜನತಾ ಪಕ್ಷದ ದಿನಗಳನ್ನು ನೆನಪಿಗೆ ತಂದಿದೆ. ಇತಿಹಾಸ ಮತ್ತೆಮತ್ತೆ ಮರುಕಳಿಸುತ್ತದೆ ಎಂಬುದನ್ನು ಇದು ನೆನಪಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ

ಬೆಂಗಳೂರು: ರಾಜ್ಯ ಸರ್ಕಾರ ಇಂದು ಸಭೆ – ಸಮಾರಂಭಗಳ ರೀತಿ ರಿವಾಜುಗಳಿಗೆ ಸಂಬಂಧಿಸಿದಂತೆ ಹೊರಡಿಸಿದ ಆದೇಶವೊಂದು ಜನತಾ ಪಕ್ಷದ ದಿನಗಳನ್ನು ನೆನಪಿಗೆ ತಂದಿದೆ. ಇತಿಹಾಸ ಮತ್ತೆಮತ್ತೆ ಮರುಕಳಿಸುತ್ತದೆ ಎಂಬುದನ್ನು ಇದು ನೆನಪಿಸಿದೆ.

“ರಾಜ್ಯ ಸರ್ಕಾರ ಮತ್ತು ಸರ್ಕಾರದ ಸ್ವಾಮ್ಯಕ್ಕೊಳಪಡುವ ಸಂಸ್ಥೆಗಳು ನಡೆಸುವ ಸಭೆ ಮತ್ತು ಸಮಾರಂಭಗಳಲ್ಲಿ ಹೂಗುಚ್ಛ, ಹಾರ – ತುರಾಯಿ, ಹಣ್ಣಿನ ಬುಟ್ಟಿ, ಶಾಲು, ನೆನಪಿನ ಕಾಣಿಕೆ ಇತ್ಯಾದಿ ಯಾವುದೇ ಕಾಣಿಕೆ ನೀಡಬಾರದೆಂದು ಈ ಮೂಲಕ ನಿರ್ದೇಶಿಸಲಾಗಿದೆ. ಬದಲಾಗಿ ಕನ್ನಡ ಪುಸ್ತಕಗಳನ್ನು ನೀಡಬಹುದು. ಈ ನಿರ್ದೇಶನವನ್ನು ಚಾಚೂ ತಪ್ಪದೇ ಅನುಷ್ಠಾನಗೊಳಿಸಲು ಸಂಬಂಧಪಟ್ಟ ಸರ್ಕಾರದ ಎಲ್ಲ ಇಲಾಖೆಗಳು ಮತ್ತು ರಾಜ್ಯ ಸರ್ಕಾರದ ಎಲ್ಲ ಸಂಸ್ಥೆಗಳು ತಮ್ಮ ಆಧೀನದಲ್ಲಿ ಬರುವ ಎಲ್ಲ ಅಧಿಕಾರಿಗಳಿಗೆ ಸೂಚಿಸುವಂತೆ ತಿಳಿಸಲಾಗಿದೆ” ಎಂದು ಮುಖ್ಯ ಕಾರ್ಯದರ್ಶಿ ರವಿಕುಮಾರ್ ಆದೇಶ ಹೊರಡಿಸಿದ್ದಾರೆ.

1983ರ ಚುನಾವಣೆಯಲ್ಲಿ ಜಯಗಳಿಸಿ ಅಧಿಕಾರಕ್ಕೆ ಬಂದಿದ್ದ ಜನತಾ ಪಕ್ಷದ ರಾಮಕೃಷ್ಣ ಹೆಗಡೆ ನೇತೃತ್ವದ ಸರಕಾರವೂ ಇದೇ ರೀತಿಯ ಆದೇಶ ಹೊರಡಿಸಿತ್ತು. ಇದಕ್ಕೆ ಕಾರಣವೂ ಇತ್ತು. ಇದರ ಹಿಂದಿನ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಗುಂಡೂರಾವ್ ಅವರಿಗೆ ಸಭೆ – ಸಮಾರಂಭಗಳಲ್ಲಿ ಬೆಳ್ಳಿ ಕಿರೀಟ – ಗದೆ ಇತ್ಯಾದಿಗಳನ್ನು ನೀಡಿ ಸನ್ಮಾನಿಸಲಾಗುತ್ತಿತ್ತು. ರಾವ್ ಅವರೂ ಸನ್ಮಾನಿತರಾದ ನಂತರ ಗದೆ ಹಿಡಿದ ಛಾಯಾಚಿತ್ರಗಳು ಪತ್ರಿಕೆಗಳಲ್ಲಿ ರಾರಾಜಿಸುತ್ತಿತ್ತು. ಇದು ನಕಾರಾತ್ಮಕ ಜನಾಭಿಪ್ರಾಯ ಮೂಡಿಸಿತ್ತು.

ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಿರೀಟ – ಗದೆ – ಹಾರ – ತುರಾಯಿ ಸ್ವೀಕರಿಸಬಾರದೆಂಬ ಸಂಪ್ರದಾಯ ಆರಂಭಿಸಲಾಯಿತು. ಎಂ.ಎನ್. ರಾಯ್ ಅವರ ವಿಚಾರಧಾರೆಗಳಿಂದ ಪ್ರಭಾವಿತರಾಗಿದ್ದ ಎಸ್.ಆರ್ ಬೊಮ್ಮಾಯಿ ಅವರು ಹೆಗಡೆ ಅವರ ನಂತರ ತಾತ್ಕಾಲಿಕ ಅವಧಿಗೆ ಮುಖ್ಯಮಂತ್ರಿಯಾಗಿದ್ದರು. ಇವರು ಸಹ ತಮ್ಮ ಅಧಿಕಾರವಧಿಯಲ್ಲಿಯೂ ಕಿರೀಟ – ಗದೆ – ಹಾರ ತುರಾಯಿ ಸ್ವೀಕರಿಸದೇ ಇರುವ ಸಂಪ್ರದಾಯ ಮುಂದುವರಿಸಿದ್ದರು.

ಈಗ ಎಸ್.ಆರ್. ಬೊಮ್ಮಾಯಿ ಅವರ ಪುತ್ರ ರಾಜ್ಯದ ಮುಖ್ಯಮಂತ್ರಿ ಆರಂಭದಲ್ಲಿಯೇ ಇವರ ನೇತೃತ್ವದ ಸರ್ಕಾರ ಕಾಣಿಕೆಗಳನ್ನು ಸ್ವೀಕರಿಸಬಾರದೆಂಬ ಸಂಪ್ರದಾಯಕ್ಕೆ ಮರು ನಾಂದಿ ಹಾಡಿದೆ. ಬಸವರಾಜ ಬೊಮ್ಮಾಯಿ ಅವರು ಒಂದು ಕಾಲದಲ್ಲಿ ಸರಳತೆಗೆ ಹೆಸರಾಗಿದ್ದ ಜನತಾ ಪರಿವಾರದಿಂದ ಬಂದವರು. ಸ್ವತ: ಸರಳತೆಯನ್ನು ಮೈಗೂಡಿಸಿಕೊಂಡವರು ಎಂಬುದು ಗಮನಾರ್ಹ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಸೇರ್ಪಡೆಯಾಗಿರುವವರಲ್ಲಿ ಅನೇಕರು ಅಧಿಕಾರ ಸ್ವೀಕರಿಸಿದ ನಂತರ ಸರಣಿ ಅಭಿನಂದನಾ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದರು. ರಾಜ್ಯದಲ್ಲಿ ಕೊರೊನಾ ಆರ್ಭಟ ಮರುಕಳಿಸಿದ್ದರೂ ಸನ್ಮಾನಗಳನ್ನು ಸ್ವೀಕರಿಸುತ್ತಿದ್ದ ಇವರುಗಳ ನಡೆ ಸಾರ್ವಜನಿಕರ ಟೀಕೆಗೂ ಒಳಗಾಗಿತ್ತು ಎಂಬುದನ್ನೂ ಸ್ಮರಿಸಬಹುದು.

ವರದಿ: ಕುಮಾರ ರೈತ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com