ಕೈಮಗ್ಗ ನಿಗಮದ ಟೆಂಡರ್‌ ಕೋಮಲ್ ಹೆಸರಿಗೆ ಹೋಗಿದ್ದು ಹೇಗೆ? ಭ್ರಷ್ಟರೇ ಭ್ರಷ್ಟಾಚಾರದ ಬಗ್ಗೆ ಆರೋಪಿಸುವುದು, ಹಾಸ್ಯನಟನೆ!

ಬಿಬಿಎಂಪಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ  ಸ್ವೆಟರ್ ನೀಡದೇ ವಂಚನೆ ಮಾಡಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದೆ.
ಕೋಮಲ್
ಕೋಮಲ್

ಬೆಂಗಳೂರು: ಬಿಬಿಎಂಪಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ  ಸ್ವೆಟರ್ ನೀಡದೇ ವಂಚನೆ ಮಾಡಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ, ಬಡ ಮಕ್ಕಳ ಮೊಟ್ಟೆ ಕದ್ದಂತೆ, ಸ್ವೆಟರ್‌ ಕದ್ದಿರುವ ಈ ಪ್ರಕರಣದ ತನಿಖೆ ನಡೆಸುವಿರಾ ಅಥವಾ ಶಶಿಕಲಾ ಜೊಲ್ಲೆಯವರಿಗೆ ಕ್ಲೀನ್ ಚಿಟ್ ಕೊಟ್ಟಂತೆ ಇದಕ್ಕೂ ಕೊಡುವಿರಾ ಬೊಮ್ಮಾಯಿ ಅವರೇ ಎಂದು ಪ್ರಶ್ನಿಸಿದೆ.

ಈ ಹಗರಣ ಬಗ್ಗೆ ಕೂಡಲೇ ತನಿಖೆಗೆ ವಹಿಸಿ, ಬಿಬಿಎಂಪಿ ಅಧಿಕಾರಿಗಳ ಗೋಲ್ಮಾಲ್, ಸಚಿವ ಆರ್. ಅಶೋಕ ಅವರ ಪಾತ್ರ, ಜಗ್ಗೇಶ್ ಅವರ ಪ್ರಭಾವ ಎಲ್ಲವೂ ಹೊರಬರಲಿ ಎಂದು ಆಗ್ರಹಿಸಿದೆ. ಬಿಜೆಪಿ ಸರ್ಕಾರ ಹಗರಣಗಳ ಕೂಪವಾಗಿದೆ.ಬಡ ಮಕ್ಕಳ ಪಾಲಿನ ಮೊಟ್ಟೆಯಿಂದ ಸ್ವೆಟರ್‌ವರೆಗೂ ಎಲ್ಲವನ್ನೂ ತಿನ್ನುತ್ತಿದ್ದಾರೆ.

ಬಿಬಿಎಂಪಿ ಶಾಲೆಗಳ ಸುಮಾರು 16,167 ಮಕ್ಕಳಿಗೆ ಸ್ವೆಟರ್ ನೀಡುವ ಯೋಜನೆಯಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಬಿಜೆಪಿ ವಕ್ತಾರ ಜಗ್ಗೇಶ್ ಅವರು ನಿಯಮ ಮೀರಿ ಸಹೋದರನಿಗೆ ಟೆಂಡರ್ ಕೊಡಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಮಕ್ಕಳಿಗೆ ಸ್ವೆಟರ್ ಹಂಚಿಕೆಯನ್ನೇ ಮಾಡದೆ 1.75 ಕೋಟಿ ಬಿಲ್ ಪಾವತಿಯಾಗಿದ್ದು ಹೇಗೆ? ಕೈಮಗ್ಗ ನಿಗಮದ ಟೆಂಡರ್‌ ನಿಯಮ ಮೀರಿ ಕೋಮಲ್ ಹೆಸರಿಗೆ ಹೋಗಿದ್ದು ಹೇಗೆ? ಶಾಲೆ ತೆರೆಯದೆ ಹಂಚಿದ್ದೇವೆನ್ನುವುದು ಸುಳ್ಳು ಎಂದಿದೆ.

ಹಂಚಿಕೆಯಾಗದಿದ್ದರೂ ಹಣ ಬಿಡುಗಡೆಗೆ ಆರ್.ಅಶೋಕ್ ಅಧಿಕಾರಿಗಳಿಗೆ ಒತ್ತಡ ಹಾಕಿದ್ದೇಕೆ? ಈ ಹಗರಣದಲ್ಲಿ ಅವರದ್ದೆಷ್ಟು ಪಾಲು? ಈ ಪ್ರಕರಣ ನನಗೆ ಸಂಬಂಧವಿಲ್ಲವೆಂದು ಕೋಮಲ್ ನಿರಾಕರಿಸುತ್ತಾರೆ, ಹಾಗಿದ್ದರೆ ಅವರ ಸಹೋದರ ಏಪ್ರಿಲ್ 27ರಂದು ಕೋಮಲ್‌ರ ಬಿಬಿಎಂಪಿ ಟೆಂಡರ್ ಬಗ್ಗೆ ಪ್ರಸ್ತಾಪಿಸಿದ್ದು ಹೇಗೆ?

ಬಿಜೆಪಿಯ ಆಡಳಿತ ಭ್ರಷ್ಟಾಚಾರದ ಕೂಪವಾಗಿದೆ, ಎಂದು ಸ್ವತಃ ಬಿಜೆಪಿಯ ಜಗ್ಗೇಶ್ ಆರೋಪಿಸಿದ್ದಾರೆ.  ಭ್ರಷ್ಟರೇ ಭ್ರಷ್ಟಾಚಾರದ ಬಗ್ಗೆ ಆರೋಪಿಸುವುದು ಹಾಸ್ಯನಟನೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com