ಚಿತ್ರದುರ್ಗದಲ್ಲಿ ಕಮಲ 'ಕಿಲಕಿಲ': ಮೂರನೇ ಪ್ರಯತ್ನದಲ್ಲಿ ಖುಲಾಯಿಸಿದ ಕೆ.ಎಸ್. ನವೀನ್ ಅದೃಷ್ಟ!

ಸತತ ಎರಡು ಸೋಲಿನ ನಂತರ ಮೂರನೇ ಬಾರಿಗೆ ಚಿತ್ರದುರ್ಗ ಬಿಜೆಪಿ ಅಭ್ಯರ್ಥಿ ಕೆ.ಎಸ್ ನವೀನ್ ಅವರ ಅದೃಷ್ಟ ಕೈ ಹಿಡಿದಿದೆ.
ಕೆ.ಎಸ್ ನವೀನ್
ಕೆ.ಎಸ್ ನವೀನ್

ಚಿತ್ರದುರ್ಗ :  ಸತತ ಎರಡು ಸೋಲಿನ ನಂತರ ಮೂರನೇ ಬಾರಿಗೆ ಚಿತ್ರದುರ್ಗ ಬಿಜೆಪಿ ಅಭ್ಯರ್ಥಿ ಕೆ.ಎಸ್ ನವೀನ್ ಅವರ ಅದೃಷ್ಟ ಕೈ ಹಿಡಿದಿದೆ.

ಚಿತ್ರದುರ್ಗ-ದಾವಣಗೆರೆ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ ಎಸ್ ನವೀನ್ 358 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. 2013ರ ಉಪ ಚುನಾವಣೆ ಮತ್ತು 2015ರ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನವೀನ್ ಸೋಲನುಭವಿಸಿದ್ದರು, ಮೂರನೇ ಬಾರಿ ಪರಿಷತ್ ಚುನಾವಣೆಯಲ್ಲಿ  ಕಾಂಗ್ರೆಸ್ ನ ಸೋಮಶೇಖರ್ ಅವರನ್ನು ಸೋಲಿಸಿದ್ದಾರೆ.

ಬಿಜೆಪಿ ಪಕ್ಷದ ಕೆ.ಎಸ್.ನವೀನ್- 2629 ಮತ, ಕಾಂಗ್ರೆಸ್ ಪಕ್ಷದ ಸೋಮಶೇಖರ್-2271 ಹಾಗೂ ಪಕ್ಷೇತರ ಅಭ್ಯರ್ಥಿ ಹನುಮಂತಪ್ಲ ದುರ್ಗ-16 ಮತಗಳನ್ನು ಪಡೆದಿದ್ದು, 144 ಮತಗಳು ತಿರಸ್ಕೃತಗೊಂಡಿವೆ.

ಬಿಜೆಪಿ ಆಭ್ಯರ್ಥಿ ಕೆ.ಎಸ್.ನವೀನ್ ಅವರು ಮೊದಲ ಪ್ರಾಶಸ್ತ್ಯದಲ್ಲಿ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಜಯ ಗಳಿಸಿದ್ದಾರೆ ಎಂದು ಚುನಾವಣಾಧಿಕಾರಿ ಕವೀತಾ ಎಸ್.ಮನ್ನಿಕೇರಿ ಘೋಷಣೆ ಮಾಡಿದರು.

ಜಿಲ್ಲೆಯ ಇಬ್ಬರು ಸಚಿವರು, ಶಾಸಕರು, ಸಮಸ್ತ ನಗರಸಭೆ, ಪಪಂ, ಗ್ರಾಪಂ ಸದಸ್ಯರ ಆಶೀರ್ವಾದದಿಂದ ಈ ಗೆಲುವು ಸಿಕ್ಕಿದೆ. ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಸ್ಥಳೀಯನಾಗಿದ್ದು, ಸ್ಥಳೀಯ ಅಭ್ಯರ್ಥಿಯನ್ನು ಗೆಲ್ಲಿಸಿದಕ್ಕೆ ಎಲ್ಲರಿಗೂ ವಂದನೆಗಳು ಎಂದು ವಿಜೇತ ಅಭ್ಯರ್ಥಿ ಕೆ ಎಸ್ ನವೀನ್ ಧನ್ಯವಾದ ತಿಳಿಸಿದ್ದಾರೆ.

ವಿಧಾನ ಪರಿಷತ್ ಚುನಾವಣೆ ಮತ ಎಣಿಕೆಗಾಗಿ 14 ಟೇಬಲ್​ಗಳಿದ್ದವು. ಪ್ರತಿ ಟೇಬಲ್‌ಗೆ ಒಬ್ಬ ಎಣಿಕೆ ಮೇಲ್ವಿಚಾರಕ ಮತ್ತು ಒಬ್ಬ ಎಣಿಕೆ ಸಹಾಯಕರನ್ನು ನೇಮಿಸಲಾಗಿತ್ತು. 14 ಎಣಿಕೆ ಟೇಬಲ್‌ಗಳಿಗೆ ಅಭ್ಯರ್ಥಿಗಳು ತಲಾ ಒಬ್ಬರಂತೆ 14 ಜನ ಎಣಿಕೆ ಏಜೆಂಟರುಗಳನ್ನು ನೇಮಿಸಿಕೊಂಡಿದ್ದರು.

ಪ್ರಾರಂಭಿಕ ಎಣಿಕೆಯು ಎಣಿಕೆ ಟೇಬಲ್‌ಗಳಲ್ಲಿ ನಡೆದು ತದ ನಂತರ ಎಣಿಕೆ ಪ್ರಕ್ರಿಯೆ ಚುನಾವಣಾಧಿಕಾರಿಗಳ ಟೇಬಲ್‌ನಲ್ಲಿ ನಡೆದಿದೆ. ಮತ ಎಣಿಕೆ ಕೇಂದ್ರದ ಸುತ್ತ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಚಿತ್ರದುರ್ಗ ಕ್ಷೇತ್ರದಲ್ಲಿ ಒಟ್ಟು 284 ಮತಗಟ್ಟೆಗಳನ್ನು ತೆರೆಯಲಾಗಿತ್ತು. 5,066 ಮತದಾರರ ಪೈಕಿ 5,060 ಮಂದಿ ತಮ್ಮ ಹಕ್ಕು ಚಲಾಯಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com