ಸೋಶಿಯಲ್ ಮೀಡಿಯಾ ಮೂಲಕ ಜನರನ್ನು ತಲುಪಲು ಯುವ ಮುಖಂಡರು ಮುಂದಾಗಬೇಕು: ಡಾ. ಅಶ್ವತ್ಥ ನಾರಾಯಣ
ಸರಕಾರ ರೂಪಿಸುವ ಜನಪರ ಕಾರ್ಯಕ್ರಮಗಳನ್ನು, ಪಕ್ಷ ಹಮ್ಮಿಕೊಳ್ಳುವ ಕಾರ್ಯಕ್ರಮಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ನೇರವಾಗಿ, ಸರಳವಾಗಿ ದಾಟಿಸಬಹುದು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.
Published: 08th February 2021 07:33 AM | Last Updated: 08th February 2021 12:24 PM | A+A A-

ಡಾ. ಅಶ್ವತ್ಥ ನಾರಾಯಣ
ಬೆಂಗಳೂರು: ಸರಕಾರ ರೂಪಿಸುವ ಜನಪರ ಕಾರ್ಯಕ್ರಮಗಳನ್ನು, ಪಕ್ಷ ಹಮ್ಮಿಕೊಳ್ಳುವ ಕಾರ್ಯಕ್ರಮಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ನೇರವಾಗಿ, ಸರಳವಾಗಿ ದಾಟಿಸಬಹುದು. ಈ ಕಾರ್ಯಗಳನ್ನು ಸಮರ್ಥವಾಗಿ ಮಾಡುವ ಕಡೆಗೆ ಹೆಚ್ಚಿನ ಗಮನ ನೀಡಬೇಕು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರ ಪಕ್ಷದ ರಾಜ್ಯ ಘಟಕ ಹಮ್ಮಿಕೊಂಡಿದ್ದ ಸಾಮಾಜಿಕ ಜಾಲತಾಣ ಪ್ರಕೋಷ್ಠದ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳು ಇವತ್ತು ಪರಿಣಾಮಕಾರಿಯಾಗಿ ಬೆಳೆದಿವೆ. ಇವುಗಳನ್ನು ನಾವು ಸದುಪಯೋಗ ಮಾಡಿಕೊಳ್ಳಬೇಕು ಹಾಗೂ ಆ ಬಗ್ಗೆ ನಿಪುಣತೆಯನ್ನು ಸಾಧಿಸಿಕೊಳ್ಳಬೇಕು ಎಂದರು.
.@BJP4Karnataka ಸಾಮಾಜಿಕ ಜಾಲತಾಣ ಪ್ರಕೋಷ್ಟದ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಸಂಸದರಾದ @PCMohanMP ಅವರೊಂದಿಗೆ ಪಾಲ್ಗೊಂಡೆ.
— Dr. Ashwathnarayan C. N. (@drashwathcn) February 7, 2021
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ವಿಶ್ಲೇಷಿಸಿ,ಅಧ್ಯಯನ ನಡೆಸಿ ಜನರಿಗೆ ತಲುಪಿಸಲು ಸಾಮಾಜಿಕ ಜಾಲತಾಣದ ನಮ್ಮ ಕಾರ್ಯಕರ್ತರ ಪಾತ್ರ ಮಹತ್ತರ. ಈ ನಿಟ್ಟಿನಲ್ಲಿ ಜವಾಬ್ದಾರಿಯುತ ಕಾರ್ಯ ನಿರ್ವಹಿಸೋಣ. pic.twitter.com/BxifCqzoHN
ಮಾಧ್ಯಮ ಕ್ಷೇತ್ರ ವಿವಿಧ ಆಯಾಮಗಳಲ್ಲಿ ಬೆಳೆಯುತ್ತಿದೆ. ಸಾಂಪ್ರದಾಯಿಕ ಮಾಧ್ಯಮ ಒಂದೆಡೆಯಾದರೆ, ಸಾಮಾಜಿಕ ಜಾಲತಾಣಗಳ ರೂಪದಲ್ಲಿ ನವ ಮಾಧ್ಯಮಗಳು ವೇಗವಾಗಿ ಬೆಳೆಯುತ್ತಿವೆ. ಇಂತಹ ಸಂದರ್ಭದಲ್ಲಿ ಇಂಥ ಜಾಲತಾಣಗಳಲ್ಲಿ ಪಕ್ಷದ ಧ್ವನಿಯನ್ನು ಮೊಳಗಿಸಬೇಕಾದರೆ ಅದಕ್ಕೆ ಅಗತ್ಯವಾದ ಜ್ಞಾನ, ಅಧ್ಯಯನ, ಪೂರ್ವಸಿದ್ಧತೆ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕಿದೆ ಎಂದು ಡಿಸಿಎಂ ಒತ್ತಿ ಹೇಳಿದರು.
ಸರಕಾರ ಯಾವ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ? ಆ ಕಾರ್ಯಕ್ರಮಗಳು ಯಾರಿಗಾಗಿ? ಅವುಗಳ ಉದ್ದೇಶವೇನು? ಎಂಬ ಅಂಶಗಳ ಬಗ್ಗೆ ಅರಿವು ಹೊಂದಿರಬೇಕು. ಅದೇ ರೀತಿ ಜನಪರವಾಗಿ ಪಕ್ಷ ಯಾವ ದಿಕ್ಕಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂಬ ತಿಳಿವಳಿಕೆಯೂ ಇರಬೇಕು ಎಂದು ಅವರು ವಿವರಿಸಿದರು.
ಸಂಸದ ಪಿ.ಸಿ.ಮೋಹನ್ ಕಾರ್ಯಾಗಾರ ಉದ್ಘಾಟಸಿದರು. ಬಿಜೆಪಿಯ ರಾಜ್ಯಮಟ್ಟದ ಸಾಮಾಜಿಕ ಜಾಲತಾಣ ವಿಭಾಗದ ಸಂಚಾಲಕ ವಿನೋದ್ ಕೃಷ್ಣಮೂರ್ತಿ ಪ್ರಸ್ತಾವಿಕ ಭಾಷಣ ಮಾಡಿದರು, ಸಹ ಸಂಚಾಲಕ ಪ್ರಶಾಂತ್ ಜಾಧವ್ ಉಪಸ್ಥಿತರಿದ್ದರು. ಎಲ್ಲ ಜಿಲ್ಲೆಗಳಲ್ಲಿ ಪಕ್ಷದ ಸಾಮಾಜಿಕ ಜಾಲತಾಣ ಪ್ರಕೋಷ್ಠದಲ್ಲಿ ಕೆಲಸ ಮಾಡುತ್ತಿರುವವರೆಲ್ಲರೂ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.