ಕುಮಾರಸ್ವಾಮಿ ಜೋಕರ್ ಇದ್ದಂತೆ.. ಯಾವ ಪಾರ್ಟಿಯಾದರೂ ಹೊಂದಾಣಿಕೆಗೆ ಸಿದ್ಧರಿರುತ್ತಾರೆ: ಸಿಪಿ ಯೋಗೇಶ್ವರ್
ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವಕಾಶವಾದಿ ರಾಜಕಾರಣಿ ಎಂದು ಸಚಿವ ಹಾಗೂ ಅವರ ರಾಜಕೀಯ ಎದುರಾಳಿ ಸಿ.ಪಿ.ಯೋಗೇಶ್ವರ್ ಲೇವಡಿ ಮಾಡಿದ್ದಾರೆ.
Published: 26th February 2021 02:42 PM | Last Updated: 26th February 2021 03:17 PM | A+A A-

ಸಿ.ಪಿ ಯೋಗೇಶ್ವರ
ಮಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವಕಾಶವಾದಿ ರಾಜಕಾರಣಿ ಎಂದು ಸಚಿವ ಹಾಗೂ ಅವರ ರಾಜಕೀಯ ಎದುರಾಳಿ ಸಿ.ಪಿ.ಯೋಗೇಶ್ವರ್ ಲೇವಡಿ ಮಾಡಿದ್ದಾರೆ.
ನಗರದ ಪಡೀಲ್ ಸಮೀಪದ ಬೈರಾಡಿ ಕೆರೆಯ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಕಾರ್ಯಕ್ರಮದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. 'ಕುಮಾರಸ್ವಾಮಿ ಒಂದು ರೀತಿ ಜೋಕರ್ ಇದ್ದಂತೆ ಅವರಿಗೆ ನೈತಿಕತೆಯಿಲ್ಲ ಯಾವ ಪಾರ್ಟಿಯಾದರೂ ಸರಿಯೇ ಬೇಗ ಹೊಂದಾಣಿಕೆ ಮಾಡಿಕೊಂಡು ರಾಜಕೀಯ ಲಾಭ ಪಡೆಯುತ್ತಾರೆ ಎಂದು ಆಕ್ರೋಶ ಹೊರ ಹಾಕಿದರು.
ಕುಮಾರಸ್ವಾಮಿಯವರಿಗೆ ರಾಜಕೀಯ ನೈತಿಕತೆ, ಸಿದ್ಧಾಂತ ಏನೂ ಇಲ್ಲ. ಎಲ್ಲಿ ಅವಕಾಶ ಸಿಗುತ್ತದೆಯೋ ಅಲ್ಲಿ ಹೋಗುತ್ತಾರೆ. ಅವಕಾಶವಾದಿ ರಾಜಕಾರಣ ಅವರು ಮಾಡುವುದು ಅವರು. ಅವರು ಮುಖ್ಯಮಂತ್ರಿ ಆಗಿದ್ದಾಗ ಉದಾಸೀನದಿಂದ ಕಾಲ ಕಳೆದರು. ಈಗ ಕ್ಷೇತ್ರದ ಭೇಟಿ ಮಾಡಿ ಗೋಳಾಡುತ್ತಿದ್ದಾರೆ. ಅಧಿಕಾರ ಇಲ್ಲದಾಗ ಜನರ ಬಳಿಗೆ ಹೋಗುವುದು ಅವರ ಗುಣ. ಮುಂದಿನ ಚುನಾವಣೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ಬಿಜೆಪಿಯ ಬಹುಪಾಲು ಶಾಸಕರು ಆಯ್ಕೆಯಾಗಲಿದ್ದಾರೆ. ಜೆಡಿಎಸ್ ನೆಲಕಚ್ಚಲಿದೆ ಎಂದು ಅವರು ಹೇಳಿದರು.
ಏಕವಚನದಲ್ಲೇ ಭಾಷಣ
ಇದಕ್ಕೂ ಮೊದಲು ನಿನ್ನೆ ಚೆನ್ನಪಟ್ಟಣದಲ್ಲಿ ನಡೆದ ಯೋಜನಾ ಪ್ರಾಧಿಕಾರ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಸಿಪಿ ಯೋಗೇಶ್ವರ್ ಅವರು, 'ಕುಮಾರಸ್ವಾಮಿ ಸಿಎಂ ಆಗಿದ್ದಾಗ ಜನರ ಕೈಗೆ ಸಿಗುತ್ತಿರಲಿಲ್ಲ. ಬೆಳಗ್ಗೆ 6 ಗಂಟೆಗೆ ಹೋದರು ಜನರನ್ನ ಮನೆಗೆ ಸೇರಿಸುತ್ತಿರಲಿಲ್ಲ. ಆದರೆ ಅವನು (ಕುಮಾರಸ್ವಾಮಿ) ಅಧಿಕಾರ ಕಳೆದುಕೊಂಡಾಗ ಬೆಳಗ್ಗೆ 6 ಗಂಟೆಗೆ ಚನ್ನಪಟ್ಟಣಕ್ಕೆ ಬರ್ತಿದ್ದಾನೆ. ಅವನಿಗೆ ಈಗ ಗೊತ್ತಾಗಿದೆ ಜನರೆದುರು ದುರಹಂಕಾರ ನಡೆಯಲ್ಲವೆಂದು. ಅಭಿವೃದ್ಧಿ ಮಾಡಿದರಷ್ಟೇ ಜನ ಮತ ಹಾಕ್ತಾರೆಂದು ಗೊತ್ತಾಗಿದೆ. ಹೆಚ್ಡಿಕೆ ಬಂದಾಗ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಹಲ್ಲು ಗಿಂಜುತ್ತಾರೆ. ಅವನಿಗೆ ಹೂವಿನ ಹಾರ ಹಿಡ್ಕೊಂಡು ಹೋಗುತ್ತಾರೆ. ಆದ್ರೆ ಅವನು ಸಿಎಂ ಆಗಿದ್ದಾಗ ಯಾರಿಗೆ ಅಧಿಕಾರ ಕೊಟ್ಟಿದ್ದಾನೆ ಎಂದು ಸಿ.ಪಿ.ಯೋಗೇಶ್ವರ್ ವಾಗ್ದಾಳಿ ನಡೆಸಿದ್ದಾರೆ.
'ವಿಧಾನಸೌಧ ಚನ್ನಪಟ್ಟಣದಿಂದ 60 ಕಿ.ಮೀ ಇದೇ. ಆದರೆ ಯಾರು ವಿಧಾನಸೌಧದ ಮೆಟ್ಟಿಲು ಹತ್ತಿದ್ದಾರೆ ಜೆಡಿಎಸ್ ನವರು.. ಮುಂದಿನ ಏಪ್ರಿಲ್ ನಂತರ ನನ್ನ ರಾಜಕೀಯ ಪ್ರಾರಂಭವಾಗಲಿದೆ. ಇಲ್ಲಿ ನಾನು ಶಾಸಕ, ಬೇರೆಯವರು ಯಾಕೆ ಬರ್ತಾರೆ ಅಂತಾರೆ ಕುಮಾರಸ್ವಾಮಿ. ಹಾಗಾಗಿ ಮುಂದಿನ ಏಪ್ರಿಲ್ ನಂತರ ಕ್ಷೇತ್ರ ಪ್ರವಾಸ ಮಾಡ್ತೇನೆ. ಪ್ರತಿ ಹಳ್ಳಿಗೂ ಭೇಟಿ ಕೊಡ್ತೇನೆ, ಪಕ್ಷ ಸಂಘಟನೆ ಮಾಡ್ತೇನೆ. ಚನ್ನಪಟ್ಟಣ ನನ್ನ ತವರೂರು, ನನಗೆ ರಾಜಕೀಯ ಜನ್ಮ ನೀಡಿದ ತಾಲೂಕು. ನನಗೆ ನೀವು ಬಿಡುವು ಮಾಡಿಕೊಟ್ಟಿದ್ದೀರಿ, ಚನ್ನಪಟ್ಟಣದಿಂದ ರಾಜ್ಯ ಪ್ರವಾಸ ಮಾಡಲು ಅವಕಾಶ ಮಾಡಿಕೊಟ್ಟಿದ್ದೀರಿ, ಸರ್ಕಾರ ನನಗೆ ವಿಧಾನಸೌಧದಲ್ಲಿ ಕಚೇರಿ ಕೊಟ್ಟಿದೆ, ಬೆಂಗಳೂರಿನಲ್ಲಿ ಬಂಗಲೆ ಕೊಟ್ಟಿದೆ, ಜನ ನನಗೆ ಮತ ಹಾಕದಿದ್ದರೂ ಸಹ ಸಚಿವನಾಗುವ ಶಕ್ತಿ ಕೊಟ್ಟಿದ್ದೀರಿ ಎಂದು ಯೋಗೇಶ್ವರ್ ಹೇಳಿದರು.
ಯೋಗೇಶ್ವರ್ ಅವರ ಈ ಭಾಷಣದ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗಿದೆ.