ವಿಧಾನಸೌಧ: ತಮ್ಮ ಬಳಿ ಕೆಲಸ ಮಾಡುತ್ತಿದ್ದ ಸಹಾಯಕನನ್ನು ಸಿಸಿಬಿ ಪೊಲೀಸರು ಬಂಧಿಸಿರುವ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಮಾಧ್ಯಮಗಳಿಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದ್ದಾರೆ.
ಇಂದು ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವರು ಯಾರೂ ಕೂಡ ಯಾರ ಹೆಸರನ್ನೂ ದುರ್ಬಳಕೆ ಮಾಡಿಕೊಳ್ಳಬಾರದು, ಅದು ಸರಿಯಲ್ಲ, ನನ್ನ ಬಳಿ ಕೆಲಸಕ್ಕಿದ್ದ ರಾಜಣ್ಣ ವಿರುದ್ಧ ಎಫ್ ಐಆರ್ ದಾಖಲಾಗಿದೆ, ತನಿಖೆ ಕೂಡ ನಡೆಯುತ್ತಿದೆ, ಹೀಗಾಗಿ ನಾನು ಹೆಚ್ಚಿಗೆ ಮಾತನಾಡಲು, ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.
ರಾಜಣ್ಣ ನನ್ನ ಕಚೇರಿಯಲ್ಲಿ ಕೆಲಸಕ್ಕೆ ಇದ್ದವನಲ್ಲ, ನಿನ್ನೆ ಆತನನ್ನು ನನ್ನ ನಿವಾಸಕ್ಕೆ ಬಂದು ಪೊಲೀಸರು ಬಂಧಿಸುವವರೆಗೆ ನನಗೆ ಮಾಹಿತಿಯಿರಲಿಲ್ಲ ಎಂದಿದ್ದಾರೆ.
ನನಗೆ ಮೊದಲೇ ಮಾಹಿತಿ ಇದ್ದಿದ್ದರೆ ಈ ಬಗ್ಗೆ ವಿಜಯೇಂದ್ರ ಅವರಲ್ಲಿ ಮಾತನಾಡಿ ಸರಿಪಡಿಸುತ್ತಿದ್ದೆ, ರಾಜುನನ್ನು ಕರೆದು ಕೇಳುತ್ತಿದ್ದೆ, ನನಗೆ ಮೊದಲೇ ಮಾಹಿತಿ ನೀಡಬೇಕಾಗಿತ್ತು. ಈ ವಿಷಯದಲ್ಲಿ ತಪ್ಪು ಸಂವಹನ ನಡೆದಿದೆ, ತಮ್ಮ ಗಮನಕ್ಕೆ ತಾರದೆ ಪೊಲೀಸರಿಗೆ ದೂರು ನೀಡಲಾಗಿದೆ. ಈ ಬಗ್ಗೆ ಸಿಎಂ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಬಳಿ ಮಾತನಾಡುತ್ತೇನೆ. ಕಾನೂನು ಪ್ರಕಾರ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಿ ಎಂದು ಶ್ರೀರಾಮುಲು ಹೇಳಿದರು.
ವಿಜಯೇಂದ್ರ ವಿರುದ್ಧ ಅಸಮಾಧಾನ?: ಮುಖ್ಯಮಂತ್ರಿಗಳ ಪುತ್ರ ವಿಜಯೇಂದ್ರ ತಂದೆಯ ಮತ್ತು ಸರ್ಕಾರದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಾರೆ, ಹಲವು ಸಚಿವರುಗಳಿಗೆ ಬೆಲೆಯೇ ಇಲ್ಲದಂತಾಗಿದೆ, ನಾಯಕತ್ವ ಬದಲಾವಣೆಯಾಗಬೇಕು ಎಂಬ ಕೂಗು ಆಗಾಗ ಕೇಳಿಬರುತ್ತಲೇ ಇರುತ್ತದೆ.
ಇದಕ್ಕೆ ಪುಷ್ಠಿ ನೀಡುವ ರೀತಿಯಲ್ಲಿ ಇಂದು ಸಚಿವ ಶ್ರೀರಾಮುಲು ಮಾತಿನ ಧಾಟಿಯಿತ್ತು. ವಿಜಯೇಂದ್ರ ಅವರು ತಮ್ಮ ಗಮನಕ್ಕೆ ತಾರದೆ ದೂರು ನೀಡಿದ್ದಾರೆ ಎಂದು ಅಸಮಾಧಾನವನ್ನು ಹೊರಹಾಕಿದ್ದಾರೆ.
Advertisement