ಮೋದಿ ಸಂಪುಟಕ್ಕೆ ಕರ್ನಾಟಕದ ನಾಲ್ವರು ಸಂಸದರ ಸೇರ್ಪಡೆ: 2023 ವಿಧಾನಸಭೆ ಚುನಾವಣೆಗೆ ಅಡಿಪಾಯ?

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟಕ್ಕೆ ಕರ್ನಾಟಕದ ನಾಲ್ವರು ಸಂಸದರು ಸೇರ್ಪಡೆಯಾಗಿದ್ದಾರೆ. ನಾಲ್ವರನ್ನು ಸಂಪುಟಕ್ಕೆ ಸೇರ್ಪಡೆ ಮಾಡುವಾಗ ಬಿಜೆಪಿ ವರಿಷ್ಠರು ಜಾತಿ ಮತ್ತು ಪ್ರದೇಶವಾರು ಪ್ರಾತಿನಿಧ್ಯದಿಂದ ಆಚೆ ಲೆಕ್ಕಾಚಾರ ಹಾಕಿದಂತಿದೆ.
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಬೆಂಗಳೂರು:ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟಕ್ಕೆ ಕರ್ನಾಟಕದ ನಾಲ್ವರು ಸಂಸದರು ಸೇರ್ಪಡೆಯಾಗಿದ್ದಾರೆ. ನಾಲ್ವರನ್ನು ಸಂಪುಟಕ್ಕೆ ಸೇರ್ಪಡೆ ಮಾಡುವಾಗ ಬಿಜೆಪಿ ವರಿಷ್ಠರು ಜಾತಿ ಮತ್ತು ಪ್ರದೇಶವಾರು ಪ್ರಾತಿನಿಧ್ಯದಿಂದ ಆಚೆ ಲೆಕ್ಕಾಚಾರ ಹಾಕಿದಂತಿದೆ.

ಎ ನಾರಾಯಣಸ್ವಾಮಿ, ಶೋಭಾ ಕರಂದ್ಲಾಜೆ, ಭಗವಂತ ಖೂಬಾ ಮತ್ತು ರಾಜೀವ್ ಚಂದ್ರಶೇಖರ್ ನಾಲ್ವರೂ ಜಾತಿ, ಪ್ರದೇಶ ಪ್ರಾತಿನಿಧ್ಯ, ಪಕ್ಷದಲ್ಲಿ ಸದಸ್ಯತ್ವ ವಿಚಾರದಲ್ಲಿ ವಿವಿಧತೆ ಹೊಂದಿದ್ದರೂ ಇಲ್ಲಿ ಹೈಕಮಾಂಡ್ ಎರಡು ವಿಷಯಗಳನ್ನು ಆದ್ಯತೆಯಾಗಿ ಪರಿಗಣಿಸಿದಂತಿದೆ ಅದು ಹಿಂದುತ್ವ ಮತ್ತು ದೇಶೀಯವಾದ.

2023ರ ವಿಧಾನಸಭೆ ಚುನಾವಣೆಗೆ ಮತ್ತು 2024ರ ಲೋಕಸಭೆ ಚುನಾವಣೆಗೆ ಈ ಎರಡು ವಿಷಯಗಳನ್ನು ಮುಂದಿಟ್ಟುಕೊಂಡೇ ಬಿಜೆಪಿ ಜನರ ಮುಂದೆ ಮತಯಾಚನೆ ಮಾಡುವಂತಿದೆ. ನಾಲ್ವರು ಮಂತ್ರಿಗಳು ಬಿಜೆಪಿಯ ನಿಸ್ಸಂದೇಹವಾದ ಸೈದ್ಧಾಂತಿಕ ನಿಲುವು ಹೊಂದಿರುವವರು, ಇದರ ಮೂಲಕವೇ ಪಕ್ಷವು ಮತದಾರರನ್ನು ತಲುಪಲು ನೋಡುತ್ತಿದೆ.

ಮೊನ್ನೆ ಬುಧವಾರ ಕೃಷಿ ಇಲಾಖೆಯ ರಾಜ್ಯ ಸಚಿವೆಯಾಗಿ ಪ್ರಮಾಣವಚನ ಸ್ವೀಕರಿಸುವುದಕ್ಕೆ ಮುನ್ನ ಶೋಭಾ ಕರಂದ್ಲಾಜೆಯವರು ತಮ್ಮೆಲ್ಲಾ ಟ್ವೀಟ್ ಗಳನ್ನು ಡಿಲೀಟ್ ಮಾಡಿ ಅಚ್ಚರಿ ಮೂಡಿಸಿದ್ದರು. 2010ರಲ್ಲಿ ಟ್ವಿಟ್ಟರ್ ಅಕೌಂಟ್ ಸೃಷ್ಟಿಸಿದ್ದ ಶೋಭಾ ಕರಂದ್ಲಾಜೆಯವರ ಖಾತೆಯಲ್ಲಿ ಈಗಿರುವುದು ಕೇವಲ 15 ಟ್ವೀಟ್ ಗಳು. ಅದಕ್ಕೂ ಮುನ್ನ ಉದ್ರೇಕಕಾರಿ ಹೇಳಿಕೆಗಳು, ತಮ್ಮ ಕ್ಷೇತ್ರದ ಕೆಲಸಗಳು, ವಿವರಗಳು, ಬಿಜೆಪಿ ಪಕ್ಷದ ನಿಲುವುಗಳನ್ನು ಪ್ರಚಾರ ಮಾಡುತ್ತಿದ್ದರು.

2017ರಿಂದ ತಮ್ಮ ಟ್ವೀಟ್ ಗಳಲ್ಲಿ ಶೋಭಾ ಕರಂದ್ಲಾಜೆಯವರು ಹಿಂದು ಯುವಕ ಪರೇಶ್ ಮೆಸ್ತಾ ಮೇಲೆ ನಡೆದಿದ್ದ ಹಲ್ಲೆ, ಜಿಹಾದಿ ವಿವಾದಗಳನ್ನು ಟ್ವೀಟ್ ಮಾಡುತ್ತಿದ್ದರು. ಯುವಕನಿಗೆ ಚಿತ್ರಹಿಂಸೆ ನೀಡುವ ಅವರ ವಾದಗಳು ಮತ್ತು ಆರೋಪಗಳನ್ನು ತಜ್ಞರು ನಿರಾಕರಿಸಿದ್ದರು.ಈ ಪ್ರಕರಣವನ್ನು ಅಂತಿಮವಾಗಿ ಸಿಬಿಐಗೆ ವರ್ಗಾಯಿಸಲಾಯಿತು, ಅದು ಇನ್ನೂ ತನಿಖೆ ನಡೆಸುತ್ತಿದೆ. ಮತ್ತೊಂದು ನಿದರ್ಶನದಲ್ಲಿ, ಕೋಮು ಪ್ರಚೋದನೆಗಾಗಿ ಶೋಭಾ ಕರಂದ್ಲಾಜೆ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

2020ರಲ್ಲಿ ಬೀದರ್ ಸಂಸದ ಭಗವಂತ್ ಖೂಬಾ ಅವರು ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ನಾಟಕ ಮಾಡಿದ್ದ ಶಾಲೆಯೊಂದನ್ನು ಕಪ್ಪು ಪಟ್ಟಿಯಲ್ಲಿ ಸೇರಿಸುವಂತೆ ಸೂಚಿಸಿದ್ದರು. ನಾಟಕದಲ್ಲಿ ಭಾಗವಹಿಸಿದ್ದ ಮಕ್ಕಳ ಪೋಷಕರು ಮತ್ತು ಶಿಕ್ಷಕರ ವಿರುದ್ಧ ದೇಶದ್ರೋಹದ ಬಗ್ಗೆ ಸಂಸದರು ಆರೋಪ ಮಾಡಿದ್ದರು. ದೂರು ಕೂಡ ದಾಖಲಾಗಿತ್ತು, ಕಳೆದ ಮಾರ್ಚ್ ತಿಂಗಳಲ್ಲಿ ಸೆಷನ್ಸ್ ನ್ಯಾಯಾಲಯ ಎಲ್ಲಾ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿತ್ತು.

ಇನ್ನು ಎ ನಾರಾಯಣಸ್ವಾಮಿಯವರು ಕೋಮುವಾದಿ ಹೇಳಿಕೆಗಳಿಂದ ಸುದ್ದಿಯಾಗಿರದಿದ್ದರೂ ಅವರು ಮೂಲತಃ ಆರ್ ಎಸ್ ಎಸ್ ಕಾರ್ಯಕರ್ತ, ಹಿಂದುತ್ವವನ್ನು ಬಹಳವಾಗಿ ಪಾಲಿಸುವವರು, ದಲಿತ ಎಂಬ ಹಣೆಪಟ್ಟಿ ಬೇರೆ ಅವರಿಗಿದೆ.

ಕೇರಳದ ಶಬರಿಮಲೆ ವಿವಾದದಲ್ಲಿ ರಾಜೀವ್ ಚಂದ್ರಶೇಖರ್ ಮಾತನಾಡಿ ಹಿಂದೂ ಪದ್ಧತಿ ಬಗ್ಗೆ ಬಹಳವಾಗಿ ಒತ್ತಿ ಹೇಳಿದ್ದರು. ಬಿಜೆಪಿಯ ಹಿಂದೂ ತತ್ವಗಳು ಮತ್ತು ನೀತಿಗಳನ್ನು ಬಹಳವಾಗಿ ಪಾಲಿಸುವವರು, ಸಹಜವಾಗಿ ರಾಷ್ಟ್ರಮಟ್ಟದ ನಾಯಕರ ಗಮನ ಸೆಳೆದರು.

ಇವುಗಳನ್ನು ನೋಡಿದಾಗ ಮುಂದಿನ ಚುನಾವಣೆಗಳಲ್ಲಿ ಬಿಜೆಪಿ ಹಿಂದುತ್ವ, ರಾಷ್ಟ್ರೀಯವಾದ, ಅಭಿವೃದ್ಧಿ ವಿಚಾರಗಳನ್ನಿಟ್ಟುಕೊಂಡು ಚುನಾವಣೆಯನ್ನು ಎದುರಿಸುತ್ತದೆ ಎಂಬುದು ಸ್ಪಷ್ಟವಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com