ಬೆಂಗಳೂರು: ಮಹಾತ್ಮಾ ಗಾಂಧಿ ಬಹಳ ಒಳ್ಳೆಯವರು, ತಮ್ಮ ನಡೆ-ನುಡಿ, ಕೆಲಸಗಳಿಂದ ಮಹಾತ್ಮರಾದರು, ಆದರೆ ಅವರ ಮಗ ಏನಾದ ಕುಡುಕನಾಗಲಿಲ್ಲವೇ, ಅದೇ ರೀತಿ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಆರ್ ಬೊಮ್ಮಾಯಿಯವರ ಸದ್ಗುಣಗಳು ಅವರ ಪುತ್ರ ಇಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಬರುತ್ತದೆ, ಬರಬಹುದು ಎಂದು ಹೇಳಲು ಆಗುತ್ತದೆಯೇ,ತಂದೆಯ ಗುಣ ಮಕ್ಕಳಿಗೆ ಬರುವುದಿಲ್ಲ, ಅದು ವಂಶವಾಹಿನಿಯಲ್ಲ ಎಂದು ಹೇಳಿ ಸುದ್ದಿ ಮಾಡಿದ್ದರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ.
ಇದಕ್ಕೆ ರಾಜ್ಯ ಬಿಜೆಪಿ ಟ್ವೀಟ್ ಗಳ ಮೂಲಕ ಮಾಜಿ ಸಿಎಂಗೆ ತಿರುಗೇಟು ನೀಡಿದೆ, ನಿಮ್ಮ ಗುಣಗಳು ನಿಮ್ಮ ಮಗ ಡಾ ಯತೀಂದ್ರ ಅವರಿಗೆ ಎಷ್ಟು ಬಂದಿವೆ, ಸಾಮಾನ್ಯವಾಗಿ ತಂದೆಯಿಂದ ಮಗನಿಗೆ ವಂಶವಾಹಿನಿ ರೂಪದಲ್ಲಿ ಬರುವುದು ಕಾಯಿಲೆ ಮಾತ್ರ. ಸಂಸ್ಕಾರ, ಗುಣ, ಸಾಮರ್ಥ್ಯ ಅವರವರ ಗಳಿಕೆ ಎಂಬುದನ್ನು ಅರ್ಥ ಮಾಡಿಕೊಳ್ಳಿ ಸಿದ್ದರಾಮಯ್ಯನವರೇ ಎಂದು ಹೇಳಿದೆ.
ಅಲ್ಲದೆ ಸಿದ್ದರಾಮಯ್ಯನವರ ಹಿರಿಯ ದಿವಂಗತ ಪುತ್ರ ರಾಕೇಶ್ ಸಿದ್ದರಾಮಯ್ಯನವರ ವಿಚಾರವನ್ನು ಕೂಡ ಬಿಜೆಪಿ ತಂದಿದೆ. ನಿಮ್ಮ ಮಗ ವಿಪರೀತ ಕುಡಿಯುವ ಅಭ್ಯಾಸ ಹೊಂದಿದ್ದರು ಎಂದು ಹೇಳುತ್ತಾರೆ, ಕುಡಿದ ಮತ್ತಿನಲ್ಲಿ ಹಿರಿಯ ನಾಗರಿಕರ ಮೇಲೆ ದೌರ್ಜನ್ಯವೆಸಗಿದ್ದರು ಎಂದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು, ನಿಜವೇ, ಹಾಗಾದರೆ ಅದನ್ನು ಅಪ್ಪನಾದ ನಿಮ್ಮ ಗುಣಗಳಿಗೆ ಹೋಲಿಸಲು ಸಾಧ್ಯವೇ ಎಂದು ಪ್ರಶ್ನಿಸಿದೆ.
ಅಲ್ಲದೆ ನೀವು ಯಾವ ಗಾಂಧಿ ಬಗ್ಗೆ ಹೇಳಿದ್ದು ಇಂದಿರಾ ಗಾಂಧಿ ಪುತ್ರನ ಬಗ್ಗೆಯೇ, ಅಥವಾ ಸೋನಿಯಾ ಗಾಂಧಿ ಪುತ್ರನ ಬಗ್ಗೆಯೇ ಎಂದು ಕುಟುಕಿದೆ.
Advertisement