ಮೈಸೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಿ.ಎಸ್.ಯಡಿಯೂರಪ್ಪ ಅವರು, ಇದೀಗ 2023ರ ವಿಧಾನಸಭಾ ಚುನಾವಣೆ ಹಾಗೂ ಪಂಚಾಯತ್ ರಾಜ್ ಚುನಾವಣೆಗೆ ಪಕ್ಷದ ಬಲ ಹೆಚ್ಚಿಸಲು ಮುಂದಾಗಿದ್ದಾರೆ.
ಗಣೇಶ ಚತುರ್ಥಿಯ ನಂತರ (ಸೆಪ್ಟೆಂಬರ್ 10) ಪ್ರತಿ ಜಿಲ್ಲೆಗೆ ಭೇಟಿ ನೀಡಿ ಪಕ್ಷವನ್ನು ಬಲಪಡಿಸುವುದಾಗಿ ಯಡಿಯೂರಪ್ಪ ಅವರು ಹೇಳಿದ್ದಾರೆ.
ಈ ಮೂಲಕ ಎಲ್'ಕೆ ಅಡ್ವಾಣಿ ಹಾಗೂ ಮುರಳೀ ಮನೋಹರ್ ಜೋಶಿಯವರಂತೆ ಪಕ್ಷದ ಮಾರ್ಗದರ್ಶಕ ಮಂಡಳಿಗೆ ಸೇರ್ಪಡೆಗೊಳ್ಳುವುದಿಲ್ಲ ಎಂಬ ಸಂದೇಶವನ್ನು ಪಕ್ಷದ ಹೈಕಮಾಂಡ್'ಗೆ ರವಾನಿಸಿದ್ದಾರೆ.
ನಿನ್ನೆಯಷ್ಟೇ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಬಿಜೆಪಿಯನ್ನು ಬಲಪಡಿಸಲು ರಾಜ್ಯದಾದ್ಯಂತ ಪ್ರವಾಸ ನಡೆಸುತ್ತೇನೆ. ನನ್ನ ಮುಂದಿನ ಯೋಜನೆಯನ್ನು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ಪಕ್ಷವನ್ನು ಬಲಪಡಿಸಲು ರಾಜ್ಯದಾದ್ಯಂತ ಪ್ರವಾಸ ಮಾಡುತ್ತೇನೆ. ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲೇಬೇಕು. 130–135 ಸ್ಥಾನಗಳನ್ನು ಗೆಲ್ಲಲೇಬೇಕು. ಅದಕ್ಕಾಗಿ ಪ್ರಯತ್ನ ನಡೆಸುತ್ತೇನೆಂದು ಹೇಳಿದ್ದರು.
ಇದೇ ವೇಳೆ ಸಂಪುಟ ರಚನೆ ವೇಳೆ ಮಧ್ಯಪ್ರವೇಶ ಮಾಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ ಅವರು, ಹೈಕಮಾಂಡ್ ನಿರ್ದೇಶನದಂತೆ ಸಂಪುಟ ರಚನೆ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸ್ವತಂತ್ರರಾಗಿದ್ದಾರೆ. ರಾಜ್ಯದ ಆಡಳಿತ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ. ಮುಂದಿನ ವಾರ ಹೊಸ ಸಚಿವರು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆಂದು ತಿಳಿಸಿದ್ದಾರೆ.
ಬಿಎಸ್'ವೈಗೆ ಅದ್ಧೂರಿ ಸ್ವಾಗತ
ಈ ನಡುವೆ ಬೊಮ್ಮಲಾಪುರಕ್ಕೆ ಭೇಟಿ ನೀಡಿದ ಯಡಿಯೂರಪ್ಪ ಅವರಿಗೆ ನೂರಾರು ಜನರು ಅದ್ಧೂರಿ ಸ್ವಾಗತಯಾಗಿ ಸ್ವಾಗತ ಮಾಡಿದರು.
ಡಿ ದೇವರಾಜ ಅರಸು ಸ್ಟೇಡಿಯಂಗೆ ಯಡಿಯೂರಪ್ಪ ಅವರು ಆಗಮಿಸುತ್ತಿದ್ದಂತೆಯೇ ಸ್ಥಳದಲ್ಲಿ ನೆರೆದಿದ್ದ ಜನರು ರಾಜಾಹುಲಿ ಎಂಬ ಘೋಷಣೆಗಳನ್ನು ಕೂಗಿದರು.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೀವ್ರ ನೊಂದಿದ್ದ ಯಡಿಯೂರಪ್ಪ ಅವರ ಅಭಿಮಾನಿ ರವಿ ಎಂಬುವವರು ಕೆಲ ದಿನಗಳ ಹಿಂದಷ್ಟೇ ಆತ್ಮಹತ್ಯೆಗೆ ಶರಣಾಗಿದ್ದರು.
ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬೊಮ್ಮಲಾಪುರ ಗ್ರಾಮದ ರವಿ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವರ ಹೇಳಿದ್ದರು. ಬಳಿಕ ಕುಟುಂಬಕ್ಕೆ ರೂ.5 ಲಕ್ಷ ಪರಿಹಾರವನ್ನು ನೀಡಿದ್ದರು.
Advertisement