ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ಪಕ್ಷದ ಏಜೆಂಟ್, ಕೂಡಲೇ ಪಕ್ಷದಿಂದ ಉಚ್ಛಾಟಿಸಬೇಕು: ಎಂ.ಪಿ.ರೇಣುಕಾಚಾರ್ಯ
ಸಿಎಂ ಬಿಎಸ್ ಯಡಿಯೂರಪ್ಪ ನಾಯಕತ್ವದ ಬಗ್ಗೆ ಪ್ರಶ್ನೆ ಮಾಡುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ಪಕ್ಷದ ಏಜೆಂಟ್ ಆಗಿದ್ದು, ಅವರು ಹೇಳಿದಂತೆ ಮಾತನಾಡುತ್ತಿದ್ದಾರೆ. ಇವರನ್ನು ಕೂಡಲೇ ಪಕ್ಷದಿಂದ ಉಚ್ಛಾಟಿಸಬೇಕು ಎಂದು ಬಿಜೆಪಿ ನಾಯಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
Published: 21st March 2021 11:56 PM | Last Updated: 21st March 2021 11:56 PM | A+A A-

ರೇಣುಕಾಚಾರ್ಯ-ಬಸನಗೌಡ ಪಾಟೀಲ್ ಯತ್ನಾಳ್
ದಾವಣಗೆರೆ: ಸಿಎಂ ಬಿಎಸ್ ಯಡಿಯೂರಪ್ಪ ನಾಯಕತ್ವದ ಬಗ್ಗೆ ಪ್ರಶ್ನೆ ಮಾಡುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ಪಕ್ಷದ ಏಜೆಂಟ್ ಆಗಿದ್ದು, ಅವರು ಹೇಳಿದಂತೆ ಮಾತನಾಡುತ್ತಿದ್ದಾರೆ. ಇವರನ್ನು ಕೂಡಲೇ ಪಕ್ಷದಿಂದ ಉಚ್ಛಾಟಿಸಬೇಕು ಎಂದು ಬಿಜೆಪಿ ನಾಯಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಯತ್ನಾಳ್ ಹೇಳಿಕೆ ನೀಡಿದ ಬೆನ್ನಲ್ಲೇ ಅವರ ವಿರುದ್ಧ ವಾಗ್ದಾಳಿ ನಡೆಸಿದ ಎಂ.ಪಿ.ರೇಣುಕಾಚಾರ್ಯ, 'ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ರನ್ನು ಬಿಜೆಪಿಯಿಂದ ಉಚ್ಚಾಟಿಸಬೇಕು. ಮೊನ್ನೆ ಈ ಬಗ್ಗೆ 25ಕ್ಕೂ ಹೆಚ್ಚು ಶಾಸಕರು ಚರ್ಚೆ ನಡೆಸಿದ್ದೇವೆ. ಸೋಮವಾರ ಶಾಸಕ ಯತ್ನಾಳ್ಗೆ ತಕ್ಕ ಉತ್ತರ ನೀಡುತ್ತೇವೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.
'ಯತ್ನಾಳ್ ಒಬ್ಬ ಕಾಂಗ್ರೆಸ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ನೀಡುವುದು ಸರಿಯಲ್ಲ. ಸಿಎಂ ವಿರುದ್ಧ ಹೇಳಿಕೆ ನೀಡುವ ಮೂಲಕ ಯತ್ನಾಳ್ ಸಿಎಂ ಆಗುವ ಹಗಲು ಗನಸು ಕಾಣುತ್ತಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ನೀನು ಕೂಡ ಭ್ರಷ್ಟ. ವಿಜಯಪುರದಲ್ಲಿ ಮಗನ ಮೂಲಕ ಭ್ರಷ್ಟಾಚಾರ ಮಾಡುತ್ತಿರುವೆ. ಈಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಗೆದ್ದು ಬಾ. ಆಗ ಸಿಎಂ ಆಗುವ ಬಗ್ಗೆ ಮಾತಾಡು ಎಂದು ಯತ್ನಾಳ್ಗೆ ರೇಣುಕಾಚಾರ್ಯ ಸವಾಲು ಹಾಕಿದ್ದಾರೆ. ಸಿಎಂ ಬಿಎಸ್ ವೈ ವಿರುದ್ಧ ನೀಡುವ ಹೇಳಿಕೆಗಳನ್ನು ಸಹಿಸಲು ಆಗಲ್ಲ. ನಿನಗೆ ತಾಕತ್ತಿದ್ದರೆ ಸಿಎಂ ಬದಲಾವಣೆ ಮಾಡಿ ತೋರಿಸು ಎಂದು ರೇಣುಕಾಚಾರ್ಯ ಸವಾಲು ಹಾಕಿದ್ದಾರೆ.
ಯತ್ನಾಳ್ ಹೇಳಿದ್ದೇನು?
5 ರಾಜ್ಯಗಳ ಚುನಾವಣೆ ಬಳಿಕ ಯಾರ ಮಾತು ಮೇಲಾಗುತ್ತೆ ಅನ್ನೋದು ಗೊತ್ತಾಗುತ್ತೆ. ಮುಖ್ಯಮಂತ್ರಿಗಳ ಬದಲಾವಣೆ ನೂರಕ್ಕೆ ನೂರರಷ್ಟೂ ಖಚಿತ. ಈ ಸಿಎಂರನ್ನು ಇಟ್ಟುಕೊಂಡು ಚುನಾವಣೆಗೆ ಹೋದರೆ ಅಷ್ಟೆ. ಈ ವಿಚಾರ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿಗಳಿಗೆ ಗೊತ್ತು. ರಾಜ್ಯದಲ್ಲಿ ಸಿಎಂ ಬದಲಾವಣೆಯಾಗಲೇಬೇಕು. ಬಿಜೆಪಿ ಉಳಿಯಬೇಕೆಂದರೆ ಸಿಎಂ ಬದಲಾವಣೆ ಅವಶ್ಯಕ ಎಂದು ವಿಜಯಪುರದಲ್ಲಿ ಸಿಎಂ ಬದಲಾವಣೆ ಬಗ್ಗೆ ಯತ್ನಾಳ್ ಹೇಳಿಕೆ ನೀಡಿದ್ದರು.