ಬೆಂಗಳೂರು: ಕೋವಿಡ್-19 ಪರಿಹಾರ ಕಾರ್ಯದಲ್ಲಿ ಮುಂಚೂಣಿಯಲ್ಲಿರುವ ಭಾರತೀಯ ಯುವ ಕಾಂಗ್ರೆಸ್(ಐವೈಸಿ) ಅಧ್ಯಕ್ಷ ಶ್ರೀನಿವಾಸ್ ಬಿ.ವಿ ಅವರನ್ನು ದೆಹಲಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದನ್ನು ಖಂಡಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೇಂದ್ರ ಸರ್ಕಾರ ಯುವ ಚಳುವಳಿಯನ್ನು ಅಸ್ಥಿರಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ.
"ಯುವ ಚಳುವಳಿಯ ದೈತ್ಯರಲ್ಲಿ ಶ್ರೀನಿವಾಸ್ ಸಹ ಒಬ್ಬರು ಎಂದು ದೆಹಲಿ ಪೊಲೀಸರು ಮತ್ತು ಕೇಂದ್ರ ಸರ್ಕಾರ ತಿಳಿದುಕೊಳ್ಳಬೇಕು. ಯಾವುದೇ ರಾಜಕೀಯ ಶಕ್ತಿಯಿಲ್ಲದೆ ರಾಷ್ಟ್ರಕ್ಕೆ ಅವರ ಕೊಡುಗೆ ಮತ್ತು ಸೇವೆಯನ್ನು ಇಡೀ ದೇಶ ಮತ್ತು ವಿಶ್ವ ಮಾಧ್ಯಮಗಳು ಶ್ಲಾಘಿಸುತ್ತಿವೆ" ಎಂದು ಶಿವಕುಮಾರ್ ಹೇಳಿದರು.
ಈ ಸಂಬಂಧ ವೀಡಿಯೊ ಹೇಳಿಕೆ ಬಿಡುಗಡೆ ಮಾಡಿರುವ ಡಿಕೆಶಿ, ಶ್ರೀನಿವಾಸ್ ಅವರು ಕರ್ನಾಟಕಕ್ಕೆ ಸೇರಿದವರಾಗಿರುವುದರಿಂದ ನಾವು ಹೆಮ್ಮೆಪಡುತ್ತೇವೆ ಮತ್ತು ಅವರು ವೈಯಕ್ತಿಕವಾಗಿ ತಮಗೆ ಗೊತ್ತು ಎಂದು ಹೇಳಿದ್ದಾರೆ.
"ಅವರು (ಶ್ರೀನಿವಾಸ್) ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲ, ರಾಷ್ಟ್ರಕ್ಕೆ ದೊಡ್ಡ ಆಸ್ತಿ. ಕೇಂದ್ರ ಸರ್ಕಾರದ ಮನೋಭಾವವನ್ನು ನಾನು ಖಂಡಿಸುತ್ತೇನೆ, ಅವರು ಯುವ ಚಳುವಳಿಯನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಡಿ ಕೆ ಶಿವಕುಮಾರ್ ಆರೋಪಿಸಿದ್ದಾರೆ.
ಯುವಕರು ಶ್ರೀನಿವಾಸ್ ಅವರ ಪರವಾಗಿ ನಿಲ್ಲಬೇಕು, ಅವರು ಯಾವುದೇ ರಾಜಕೀಯ ಕಾರ್ಯಗಳಲ್ಲಿ ತೊಡಗಿಲ್ಲ, ಆದರೆ ಮಾನವೀಯತೆಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಶಿವಕುಮಾರ್ ಹೇಳಿದ್ದಾರೆ.
ಕೋವಿಡ್ ಸಮಯದಲ್ಲಿ ಜನರಿಗೆ ನೆರವು ನೀಡುವ ಮೂಲಕ ಗಮನ ಸೆಳೆದಿದ್ದ ಭಾರತೀಯ ಯುವ ಕಾಂಗ್ರೆಸ್(ಐವೈಸಿ) ಅಧ್ಯಕ್ಷ ಶ್ರೀನಿವಾಸ್ ಬಿ.ವಿ. ಅವರನ್ನು ಶುಕ್ರವಾರ ದೆಹಲಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು.
Advertisement