ನನ್ನ ಇಲಾಖೆಯಲ್ಲಿ ಬೇರೆಯವರ ಹಸ್ತಕ್ಷೇಪ ಸಹಿಸಲ್ಲ; ನನ್ನ ಅಧಿಕಾರವನ್ನು ಮಗ ಚಲಾಯಿಸಬಾರದು: ಯೋಗೇಶ್ವರ್ ಟಾಂಗ್

ನನ್ನ ಇಲಾಖೆಯಲ್ಲಿ ಮತ್ತೊಬ್ಬ ವ್ಯಕ್ತಿಯ ಹಸ್ತಕ್ಷೇಪವನ್ನು ನಾನು ಸಹಿಸುವುದಿಲ್ಲ, ನನ್ನ ಅಧಿಕಾರವನ್ನು ಮಗ ಚಲಾಯಿಸಬಾರದು ಎಂದು ಪ್ರವಾಸೋದ್ಯಮ ಸಚಿವ ಸಿಪಿ ಯೋಗೇಶ್ವರ್ ಕಿಡಿಕಾರಿದ್ದಾರೆ.
ಸಿಪಿ ಯೋಗೇಶ್ವರ್
ಸಿಪಿ ಯೋಗೇಶ್ವರ್

ಬೆಂಗಳೂರು: ನನ್ನ ಇಲಾಖೆಯಲ್ಲಿ ಮತ್ತೊಬ್ಬ ವ್ಯಕ್ತಿಯ ಹಸ್ತಕ್ಷೇಪವನ್ನು ನಾನು ಸಹಿಸುವುದಿಲ್ಲ, ನನ್ನ ಅಧಿಕಾರವನ್ನು ಮಗ ಚಲಾಯಿಸಬಾರದು ಎಂದು ಪ್ರವಾಸೋದ್ಯಮ ಸಚಿವ ಸಿಪಿ ಯೋಗೇಶ್ವರ್ ಕಿಡಿಕಾರಿದ್ದಾರೆ.

ಬಿಜೆಪಿ ಬಿಜೆಪಿಯಾಗಿ ಉಳಿದಿಲ್ಲ,ಕಾಂಗ್ರೆಸ್ ,ಜೆಡಿಎಸ್ ಜೊತೆ ಬಿಜೆಪಿಗೆ ಹೊಂದಾಣಿಕೆಯಿದೆ ಎಂದು ಸ್ವಪಕ್ಷದ ವಿರುದ್ಧವೇ ಸಚಿವ ಸಿ.ಪಿ.ಯೋಗೇಶ್ವರ್ ಬೇಸರ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ದೆಹಲಿ ಭೇಟಿ ವಿಚಾರವಾಗಿ ಮಾತನಾಡಿದ ಸಿ.ಪಿ.ಯೋಗೇಶ್ವರ್, ಮುಖ್ಯಮಂತ್ರಿಗಳ ಬದಲಾವಣೆ ನನ್ನ ಮೂಲ ಉದ್ದೇಶ ಅಲ್ಲ. ಅಷ್ಟೊಂದು ಶಕ್ತಿ ನನಗೂ ಇಲ್ಲ. ಆ ಅಭಿಪ್ರಾಯವೂ ನನಗೆ ಇಲ್ಲ. ದೆಹಲಿಗೆ ಹೋಗುತ್ತಿರುತ್ತೇನೆ, ಬರುತ್ತಿರುತ್ತೇನೆ. ಎಲ್ಲವನ್ನೂ ಮಾಧ್ಯಮಗಳ ಮುಂದೆ ಹೇಳುವುದಕ್ಕೆ ಆಗುವುದಿಲ್ಲ. ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ. ನನ್ನ ದೆಹಲಿ ಭೇಟಿ ಏಕೆ ಇಷ್ಟೊಂದು ಸುದ್ದಿಯಾಯಿತೋ ಗೊತ್ತಿಲ್ಲ. ನಾನು ಬೆಳಗ್ಗೆ ಹೋದೆ ಸಂಜೆ ಬಂದೆ. ಅದೂ ಕೂಡ ವೈಯಕ್ತಿಕ ಕೆಲಸಕ್ಕೆ ಹೋಗಿದ್ದೆ. ಆದರೆ ಅರವಿಂದ ಬೆಲ್ಲದ್ ಏಕೆ ದೆಹಲಿಗೆ ಹೋಗಿದ್ದಾರೆಯೋ ಗೊತ್ತಿಲ್ಲ. ಆದರೆ ನನ್ನ ವಿಚಾರ ಎಲ್ಲಿ ಹೇಳಬೇಕೋ ಅಲ್ಲಿ ಹೇಳುತ್ತೇನೆ. ವರಿಷ್ಠರ ಮುಂದೆ ನನ್ನ ನೋವು ತೋಡಿಕೊಳುತ್ತೇನೆ ಎಂದರು.

ನನ್ನ ಅಧಿಕಾರದಲ್ಲಿ ನನ್ನ ಮಗ ಮೂಗು ತೂರಿಸುವುದು ಸರಿಯಲ್ಲ. ಆದರೆ ರಾಜ್ಯದಲ್ಲಿ ಇದೇ‌ ನಡೆಯುತ್ತಿರುವುದು ಎಂದು‌ ಸಿಎಂ ಬಿ.ವೈ. ವಿಜಯೇಂದ್ರ ಸರ್ಕಾರದಲ್ಲಿ‌ ಹಸ್ತಕ್ಷೇಪ ಬಗ್ಗೆ ಪರೋಕ್ಷವಾಗಿ ಆಕ್ಷೇಪ ವ್ಯಕ್ತಪಡಿಸಿದರು.

ಪಕ್ಷದ ಕೆಲವು ಸ್ನೇಹಿತರು ನನ್ನ ಬಗ್ಗೆ ಮಾತನಾಡುತ್ತಿರುವುದು ಗೊತ್ತು. ಅದನ್ನು ಯಾರು ಮಾತನಾಡಿಸುತ್ತಿರುವುದು ಎನ್ನುವುದು ಗೊತ್ತು.ಯಾರ ಕುಮ್ಮಕ್ಕಿದೆ ಎನ್ನುವುದೂ ಗೊತ್ತು.

ನಾನೊಬ್ಬ ಸಚಿವ. ಕೆಲವು ವಿಚಾರ ಹಂಚಿಕೊಳ್ಳುವುದನ್ನು‌ ಆಗುವುದಿಲ್ಲ. ನನ್ನ ಸಚಿವಗಿರಿಯನ್ನು ನನ್ನ ಮಗ ಚಲಾಯಿಸಿದರೆ ನಾನು ಒಪ್ಪುವುದಿಲ್ಲ. ನನ್ನ ಅಧಿಕಾರದಲ್ಲಿ ಬೇರೆಯವರು ಮೂಗು ತೂರಿಸುವುದು ಇಷ್ಟವಿಲ್ಲ. ಇದನ್ನು ನಾನು ಸೂಕ್ಷ್ಮವಾಗಿ ಹೇಳಿದೀನಿ, ಅರ್ಥ ಮಾಡಿಕೊಳ್ಳಬೇಕು. ಇದು ಶುದ್ಧ ಬಿಜೆಪಿ ಸರ್ಕಾರ ಆಗಿ ಉಳಿದಿಲ್ಲ. ಮೂರು ಗುಂಪಿನ ಸರ್ಕಾರ ಆಗಿದೆ.ಮೂರು ರಾಜಕೀಯ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿವೆ. ವಿರೋಧ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡಿದೆ ನಮ್ಮ ಸರ್ಕಾರ ಎಂದು ಸಿ.ಪಿ.ಯೋಗೆಶ್ವರ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com