ಬೆಂಗಳೂರು: ಡಿಸೆಂಬರ್ 10ರಂದು ನಡೆಯಲಿರುವ ವಿಧಾನಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರಬಲ ಅಭ್ಯರ್ಥಿಗಳ ಹುಡುಕಾಟ ನಡೆಸಿರುವ ಜೆಡಿಎಸ್ಗೆ ತುಮಕೂರು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಉತ್ಸುಕರಾಗಿರುವ ಯುವ ಕೆಎಎಸ್ ಅಧಿಕಾರಿಯೊಬ್ಬರು ಸಿಕ್ಕಿದ್ದಾರೆ.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ವಿಶೇಷ ಭೂಸ್ವಾಧೀನ ಅಧಿಕಾರಿ ಅನಿಲ್ ಕುಮಾರ್ ಆರ್ (41) ಎರಡು ತಿಂಗಳ ಹಿಂದೆಯೇ ಸ್ವಯಂ ನಿವೃತ್ತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದು, ನವೆಂಬರ್ 23 ರೊಳಗೆ ಸರ್ಕಾರವು ಈ ಅರ್ಜಿಯನ್ನು ಸ್ವೀಕರಿಸಿದ್ದೇ ಅದರೆ, ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕಂತಾಗುತ್ತದೆ.
ಒಂದು ವೇಳೆ ಸರ್ಕಾರ ಇದಕ್ಕೆ ಒಪ್ಪಿಗೆ ನೀಡದಿದ್ದಲ್ಲಿ ಪ್ರಾದೇಶಿಕ ಪಕ್ಷದಿಂದ ಜಿಪಂ ಮಾಜಿ ಸದಸ್ಯ ಹಾಗೂ ನಿವೃತ್ತ ಮುಖ್ಯ ಲೆಕ್ಕಾಧಿಕಾರಿ ರಾಮಾಂಜನಯ್ಯ ಅವರನ್ನು ಕಣಕ್ಕಿಳಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ತುಮಕೂರಿನ ಒಕ್ಕಲಿಗ ನಾಯಕ ಹಾಗೂ ಜೆಡಿಎಸ್ನ ಹಾಲಿ ಎಂಎಲ್ಸಿ ಬಿಇಎಂಎಲ್ ಕಾಂತರಾಜು 2023ರ ವಿಧಾನಸಭೆ ಚುನಾವಣೆಯಲ್ಲಿ ತುರುವೇಕೆರೆಯಿಂದ ಕಣಕ್ಕಿಳಿಯುವ ನಿಟ್ಟಿನಲ್ಲಿ ಕಾಂಗ್ರೆಸ್ ನತ್ತ ಮುಖ ಮಾಡಿರುವ ನಡುವಲ್ಲೇ ಈ ಬೆಳವಣಿಗೆಗಳು ಕಂಡು ಬಂದಿದೆ.
ತುಮಕೂರಿನಲ್ಲಿ ಎಸ್ಟಿ ನಾಯಕ ಸಮುದಾಯದ ಶಾಸಕ ಕೆ ಎನ್ ರಾಜಣ್ಣ ಅವರ ಪುತ್ರ ರಾಜೇಂದ್ರ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಮುಂದಾಗಿದ್ದು, ಕಾಂಗ್ರೆಸ್ ಸೋಲುವಂತೆ ಮಾಡುವ ಸಲುವಾಗಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಜೆಡಿಎಸ್ ತಂತ್ರ ರೂಪಿಸುತ್ತಿದೆ.
2019ರ ಲೋಕಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರ ಸೋಲಿಗೆ ನಾವೇ ಕಾರಣ ಎಂದು ಈ ಹಿಂದೆ ರಾಜಣ್ಣ ಅವರು ಹೇಳಿದ್ದರು.
ರಾಜಣ್ಣ ಅವರಂತೆ ಅನಿಲ್ ಕುಮಾರ್ ಕೂಡ ಎಸ್ಟಿ ನಾಯಕ ಸಮುದಾಯದಿಂದ ಬಂದವರಾಗಿದ್ದಾರೆ. ಅನಿಲ್ ಕುಮಾರ್ ಅವರಷ್ಟೇ ಅಲ್ಲದೆ ಅವರ ಇಬ್ಬರು ಸಹೋದರರು, ಸೋದರ ಮಾವ ಮತ್ತು ಸಹೋದರಿ ಕೂಡ ಕೆಎಎಸ್ ಅಧಿಕಾರಿಗಳಾಗಿದ್ದಾರೆ.
ಈ ಕುರಿತು 2008ನೇ ಬ್ಯಾಚ್ನ ಕೆಎಎಸ್ ಅಧಿಕಾರಿ ಅನಿಲ್ ಅವರನ್ನು ಸಂಪರ್ಕಿಸಿದಾಗ, "ನಾನು ಮತ್ತು ನನ್ನ ಕುಟುಂಬ ಒಟ್ಟಿಗೆ ಕುಳಿತು ಯಾರು ರಾಜಕೀಯ ಸೇರ್ಪಡೆಗೊಳ್ಳಬೇಕು ಎಂಬುದರ ಕುರಿತು ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ
Advertisement