ತುಮಕೂರು: ಹಾನಗಲ್ ಹಾಗೂ ಸಿಂಧಗಿ ವಿಧಾನಸಭಾ ಉಪ ಚುನಾವಣೆಯಲ್ಲಿ ಸೋತಿರುವ ಜೆಡಿಎಸ್ ಡಿಸೆಂಬರ್ 10 ರಂದು ನಡೆಯಲಿರುವ ವಿಧಾನಪರಿಷತ್ ಚುನಾವಣೆಯಲ್ಲಿ ತನ್ನ ಮೂಲನೆಲೆಯಾದ ಹಳೆಯ ಮೈಸೂರು ವಲಯದಲ್ಲಿ ಏಳು ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ತನ್ನ ವರ್ಚಸ್ಸನ್ನು ವೃದ್ಧಿಸಿಕೊಳ್ಳಲು ಯತ್ನಿಸುತ್ತಿದೆ.
ಬೀದರ್, ವಿಜಯಪುರ ಮತ್ತು ಕಲಬುರಗಿ ಸ್ಥಾನಗಳಲ್ಲಿ ಸ್ಪರ್ಧಿಸಲು ಚಿಂತನೆ ನಡೆಸಿತ್ತಾದರೂ ಉಪ ಚುನಾವಣೆಯಲ್ಲಿ ಅಭ್ಯರ್ಥಿಗಳ ತೀವ್ರ ಹಿನ್ನೆಡೆಯಿಂದಾಗಿ ವಾಸ್ತವವಾಗಿ ಪಕ್ಷದ ಮೂಲನೆಲೆಯತ್ತ ಮುಖಂಡರು ಗಮನ ಹರಿಸಿದ್ದಾರೆ. ದಕ್ಷಿಣ ಕರ್ನಾಟಕಕ್ಕೆ ಸಿಮೀತವಾಗಿದ್ದ ಪಕ್ಷ ಉತ್ತರ ಕರ್ನಾಟಕ ಭಾಗದಲ್ಲಿ ಸ್ಪರ್ಧಿಸಿ ಆದರಿಂದ ಆದ ತಪ್ಪುಗಳ ಬಗ್ಗೆ ಸಾಕಷ್ಟು ಕಲಿತಿದೆ.
ಆದಾಗ್ಯೂ, ಮಂಡ್ಯ, ತುಮಕೂರು, ಕೋಲಾರ ಮತ್ತು ಮೈಸೂರಿನಲ್ಲಿ ಮರಳಿ ತನ್ನ ನಾಲ್ಕು ಸ್ಥಾನಗಳನ್ನು ಮರಳಿ ಪಡೆಯುವುದು ಜೆಡಿಎಸ್ ಗೆ ಅಷ್ಟು ಸುಲಭವಲ್ಲ. ಮಂಡ್ಯದಲ್ಲಿ ಅಪ್ಪಾಜಿಗೌಡ ಮತ್ತೆ ಸ್ಪರ್ಧಿಸಿದ್ದಾರೆ. ಮೈಸೂರಿನಲ್ಲಿ ಪಕ್ಷಕ್ಕೆ ದ್ರೋಹ ಬಗೆದು ಬಿಜೆಪಿಯೊಂದಿಗೆ ನಂಟು ಹೊಂದಿದ್ದಾರೆ ಎಂದು ಸಂದೇಶ್ ನಾಗರಾಜ್ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ.
ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗೂಳಿಗೌಡ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಬಿಜೆಪಿ ಸಚಿವ ಎಸ್ ಟಿ ಸೋಮಶೇಖರ್ ಅವರ ಬೆಂಬಲವಿದೆ. ಇಲ್ಲಿ ಜೆಡಿಎಸ್ ಅಭ್ಯರ್ಥಿ ಮೇಲೆ ಯಾವ ರೀತಿ ಪರಿಣಾಮ ಆಗುತ್ತದೆ ಎಂಬುದನ್ನು ಫಲಿತಾಂಶದವರೆಗೂ ಕಾದು ನೋಡಬೇಕಾಗಿದೆ.
ತುಮಕೂರಿನಿಂದ ಆರ್ ಅನಿಲ್ ಕುಮಾರ್, ಕೋಲಾರದಿಂದ ವಕ್ಕಲೇರಿ ರಾಮು ಮತ್ತು ಮೈಸೂರಿನಿಂದ ಸಿ.ಎನ್. ಮಂಜೇಗೌಡ, ಹಾಸನದಲ್ಲಿ ಡಾ. ಸೂರಜ್ ರೇವಣ್ಣ ಅವರನ್ನು ಜೆಡಿಎಸ್ ಕಣಕ್ಕಿಳಿಸಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಡಿಕೆ ಶಿವಕುಮಾರ್ ಅವರ ಸಂಬಂಧಿ ಎಸ್ ರವಿ ಸ್ಪರ್ಧಿಸಿರುವುದರಿಂದ ಜೆಡಿಎಸ್ ಅಭ್ಯರ್ಥಿ ರಮೇಶ್ ಗೌಡ ಗೆಲುವು ಅಷ್ಟು ಸುಲಭವಲ್ಲ, ಕೊಡಗಿನಲ್ಲಿ ಐಸಾಖ್ ಖಾನ್ ಜೆಡಿಎಸ್ ನಿಂದ ಸ್ಪರ್ಧಿಸಿದ್ದಾರೆ. ಹಾಸನ, ಮಂಡ್ಯ ಹಾಗೂ ತುಮಕೂರು ಸ್ಥಾನಗಳು ಪಕ್ಷಕ್ಕೆ ಪ್ರಮುಖವಾಗಿವೆ. ಆದ್ದರಿಂದ ಎಸ್ ಟಿ ನಾಯಕ ಸಮುದಾಯದ ಮಾಜಿ ಕೆಎಎಸ್ ಅಧಿಕಾರಿ ಅನಿಲ್ ಕುಮಾರ್ ಅವರನ್ನು ಜೆಡಿಎಸ್ ಕಣಕ್ಕಿಳಿಸಿದೆ. ಕಾಂಗ್ರೆಸ್ ಮುಖಂಡ ಕೆ.ಎನ್. ರಾಜಣ್ಣ ಅವರ ಮಗ ರಾಜೇಂದ್ರ ಕೂಡಾ ಎಸ್ ಟಿ ನಾಯಕ ಸಮುದಾಯದವರಾಗಿದ್ದಾರೆ. ಇವರನ್ನು ಸೋಲಿಸಲು ಜೆಡಿಎಸ್ ಎಲ್ಲಾ ರೀತಿಯ ಪ್ರಯತ್ನ ಮಾಡುವ ಸಾಧ್ಯತೆಯಿದೆ.
ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಇಂತಿದೆ:
ಮೈಸೂರು: ಸಿ.ಎನ್. ಮಂಜೇಗೌಡ
ಮಂಡ್ಯ- ಅಪ್ಪಾಜಿಗೌಡ
ಹಾಸನ- ಡಾ. ಸೂರಜ್ ರೇವಣ್ಣ
ತುಮಕೂರು- ಅನಿಲ್ ಕುಮಾರ್ ಆರ್.
ಕೋಲಾರ- ವಕ್ಕಲೇರಿ ರಾಮ್
ಕೊಡಗು- ಹೆಚ್ ಯು ಐಸಾಕ್ ಖಾನ್
ಬೆಂಗಳೂರು ಗ್ರಾಮಾಂತರ- ಹೆಚ್ ಎಂ. ರಮೇಶ್ ಗೌಡ
Advertisement