ಬಿಜೆಪಿಯಲ್ಲಿ ಸಿಎಂಗಳು ಇಸ್ಪಿಟ್ ಎಲೆಗಳಂತೆ ಉದುರುತ್ತಿರುತ್ತಾರೆ: ಎಚ್.ಸಿ.ಮಹದೇವಪ್ಪ ವ್ಯಂಗ್ಯ
ಬಿಜೆಪಿಯಲ್ಲಿ ಸಿಎಂ ಗಳು ಇಸ್ಪಿಟ್ ಎಲೆಗಳಂತೆ ಒಂದಾದಮೇಲೆ ಒಂದರಂತೆ ಬದಲಾಗುತ್ತಿರುತ್ತಾರೆ ಎಂದು ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ವ್ಯಂಗ್ಯವಾಡಿದರು.
Published: 30th November 2021 09:22 AM | Last Updated: 30th November 2021 01:47 PM | A+A A-

ಎಚ್.ಸಿ ಮಹದೇವಪ್ಪ
ಚಾಮರಾಜನಗರ : ಬಿಜೆಪಿಯಲ್ಲಿ ಸಿಎಂ ಗಳು ಇಸ್ಪಿಟ್ ಎಲೆಗಳಂತೆ ಒಂದಾದಮೇಲೆ ಒಂದರಂತೆ ಬದಲಾಗುತ್ತಿರುತ್ತಾರೆ ಎಂದು ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ವ್ಯಂಗ್ಯವಾಡಿದರು.
ಚಾಮರಾಜನಗರದಲ್ಲಿ ಮಾತನಾಡಿದ ಅವರು, ಕಣ್ಣು ಮಿಟುಕಿಸುವುದರೊಳಗಾಗಿ ಮುಖ್ಯಮಂತ್ರಿಗಳನ್ನು ಬಿಜೆಪಿ ಬದಲಾಯಿಸಿ ಬಿಡುತ್ತದೆ ಎಂದು ಹೇಳಿದರು.
ಆದಷ್ಟು ಬೇಗ ಮುರುಗೇಶ್ ನಿರಾಣಿ ರಾಜ್ಯದ ಮುಖ್ಯಮಂತ್ರಿ ಆಗಲಿದ್ದಾರೆ ಎನ್ನುವ ಸಚಿವ ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಎಚ್.ಸಿ.ಮಹದೇವಪ್ಪ, ಹಿಂದೆ ಇದ್ದ ಬಿಜೆಪಿ ಹಾಗೂ ಈಗ ಇರುವ ಬಿಜೆಪಿ ಸರ್ಕಾರ ಯಾವ ಸಂದರ್ಭದಲ್ಲೂ ಜನರ ಆದೇಶವನ್ನು ಪಡೆದು ಅಧಿಕಾರಕ್ಕೆ ಬಂದಿಲ್ಲ.
ಇದನ್ನೂ ಓದಿ: ಇನ್ನಷ್ಟು ಕಾಂಗ್ರೆಸ್ ನಾಯಕರು ಬಿಜೆಪಿ ಸೇರಲಿದ್ದಾರೆ: ಮುನಿರತ್ನ
ವಾಮಮಾರ್ಗದ ಮೂಲಕ ಬೇರೆ ಪಕ್ಷದ ಶಾಸಕರನ್ನು ಅಧಿಕಾರ ಮತ್ತು ಹಣದ ಮುಖಾಂತರ ಕೊಂಡುಕೊಂಡು ಸರ್ಕಾರ ರಚನೆ ಮಾಡಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದರು. ಈ ಸರ್ಕಾರಕ್ಕೆ ಸ್ಥಿರತೆ ಇರಲಿದೆಯಾ, ಹೀಗಾಗಿ ಸಹಜವಾಗಿ ಇಸ್ಪಿಟ್ ಎಲೆಯಂತೆ ಒಂದಾದ ಮೇಲೊಂದರಂತೆ ಬದಲಾಗುತ್ತಿರುತ್ತಾರೆ. ಅಂತಿಮವಾಗಿ ನಷ್ಟವಾಗೋದು ರಾಜ್ಯಕ್ಕೆ, ಇದರಿಂದ ತೊಂದರೆ ಅನುಭವಿಸುವವರು ಜನರು, ಇದು ಜನರಿಗೆ ಅರ್ಥವಾದಕೂಡಲೇ ಅವರನ್ನು ಕೆಳಗಿಳಿಸಲಿದ್ದಾರೆ ಎಂದರು.
ಬಿಜೆಪಿ ಮೊದಲಿನಿಂದಲೂ ಆರ್ಎಸ್ಎಸ್ ಹಿಡಿತದಲ್ಲಿ ಕೆಲಸ ಮಾಡುತ್ತಿದೆ. ಸಂವಿಧಾನದ ಮೇಲೆ ನಂಬಿಕೆ ಇಲ್ಲದ ಆರ್ಎಸ್ಎಸ್, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುತ್ತಿದೆ ಎಂದು ಮಹದೇವಪ್ಪ ತೀವ್ರ ವಾಗ್ದಾಳಿ ನಡೆಸಿದರು.