ಮಾಜಿ ಸಿಎಂ ಬಿಎಸ್ ವೈ ವರ್ಚಸ್ಸು, ಜೆಡಿಎಸ್ ಅಲ್ಪಸಂಖ್ಯಾತ ಅಭ್ಯರ್ಥಿ, ಉಪ ಚುನಾವಣೆಯಲ್ಲಿ ಬಿಜೆಪಿಗೆ ವರ: ಆಂತರಿಕ ಸಮೀಕ್ಷೆ

ಅಕ್ಟೋಬರ್ 30ರಂದು ನಡೆಯಲಿರುವ ಹಾನಗಲ್ ಮತ್ತು ಸಿಂದಗಿ ಕ್ಷೇತ್ರಗಳ ಉಪ ಚುನಾವಣೆಗೆ ಮುನ್ನ ನಡೆಸಲಾಗಿರುವ ಆಂತರಿಕ ಸಮೀಕ್ಷೆ ಪ್ರಕಾರ, ಬಿಜೆಪಿ ವಿರೋಧ ಪಕ್ಷಗಳಿಗಿಂತ ಮುಂದಿದೆ. ಉಪ ಚುನಾವಣಾ ಫಲಿತಾಂಶ ಬಿಜೆಪಿ ಪರವಾಗಿ ಸಿಗುತ್ತದೆ ಎಂದು ಹೇಳಲಾಗುತ್ತಿದೆ.
ಸಿಂದಗಿಯಲ್ಲಿ ರಮೇಶ್ ಬೂಸನೂರ ಪರ ಪ್ರಚಾರ ನಡೆಸಿದ ಬಿಜೆಪಿ ಶಾಸಕ ಎ ಎ ಪಾಟೀಲ್
ಸಿಂದಗಿಯಲ್ಲಿ ರಮೇಶ್ ಬೂಸನೂರ ಪರ ಪ್ರಚಾರ ನಡೆಸಿದ ಬಿಜೆಪಿ ಶಾಸಕ ಎ ಎ ಪಾಟೀಲ್

ಬೆಂಗಳೂರು: ಅಕ್ಟೋಬರ್ 30ರಂದು ನಡೆಯಲಿರುವ ಹಾನಗಲ್ ಮತ್ತು ಸಿಂದಗಿ ಕ್ಷೇತ್ರಗಳ ಉಪ ಚುನಾವಣೆಗೆ ಮುನ್ನ ನಡೆಸಲಾಗಿರುವ ಆಂತರಿಕ ಸಮೀಕ್ಷೆ ಪ್ರಕಾರ, ಬಿಜೆಪಿ ವಿರೋಧ ಪಕ್ಷಗಳಿಗಿಂತ ಮುಂದಿದೆ. ಉಪ ಚುನಾವಣಾ ಫಲಿತಾಂಶ ಬಿಜೆಪಿ ಪರವಾಗಿ ಸಿಗುತ್ತದೆ ಎಂದು ಹೇಳಲಾಗುತ್ತಿದೆ.

ಎರಡೂ ಕ್ಷೇತ್ರಗಳಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಪ್ರಚಾರ ಮಾಡುವುದರಿಂದ ಅವರ ಚರಿಷ್ಮಾದಿಂದ ಬಿಜೆಪಿ ಪರವಾಗಿ ಮತಗಳು ಒಲಿದರೆ ಜೆಡಿಎಸ್ ಅಭ್ಯರ್ಥಿಗಳಿಗೆ ಅಲ್ಪಸಂಖ್ಯಾತ ಮತಗಳು ಸ್ವಲ್ಪ ಮಟ್ಟಿಗೆ ಒಲವಾಗಬಹುದು ಎಂದು ಹೇಳಲಾಗುತ್ತಿದೆ.

ಮೊನ್ನೆ ಮಂಗಳವಾರ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಪಕ್ಷದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಉಪ ಚುನಾವಣೆಗೆ ಕಾರ್ಯತಂತ್ರ ರೂಪಿಸಲು ಸಭೆ ನಡೆಸಿದ್ದರು. ಬೊಮ್ಮಾಯಿ ಮತ್ತು ಯಡಿಯೂರಪ್ಪನವರ ಹೊರತಾಗಿ ಹಿರಿಯ ನಾಯಕರು ಮತ್ತು ಸಂಪುಟ ಸಚಿವರು ಕೂಡ ಎರಡೂ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ.

ಪಕ್ಷದ ಭವಿಷ್ಯಕ್ಕೆ ಒತ್ತು ನೀಡಲು ಬೊಮ್ಮಾಯಿಯವರು ಬಂಡಾಯ ನಾಯಕ ಚನ್ನಪ್ಪ ಆರ್ ಬಳ್ಳಾರಿಯವರು ಮನವೊಲಿಸಿದ್ದು ಅವರು ನಿನ್ನೆ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ. ಇನ್ನು ಹಾನಗಲ್ ಕ್ಷೇತ್ರದಲ್ಲಿನ ಗೆಲುವು ಮುಖ್ಯಮಂತ್ರಿ ಬೊಮ್ಮಾಯಿಯವರ ತವರು ಜಿಲ್ಲೆಯಲ್ಲಿ ಬರುವುದರಿಂದ ಅವರಿಗೆ ಪ್ರತಿಷ್ಠೆಯ ವಿಷಯವಾಗಿದೆ.

ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಮೊನ್ನೆ ಮಂಗಳವಾರ ಸಿಂದಗಿ ಕ್ಷೇತ್ರದ ಪಕ್ಷದ ಅಭ್ಯರ್ಥಿ ನಜಿಯಾ ಶಕೀಲ್ ಅಹ್ಮದ್ ಅಂಗಡಿ ಪರ ಪ್ರಚಾರ ಕಾರ್ಯ ಆರಂಭಿಸಿದರು. ಸಿಂದಗಿ ಕ್ಷೇತ್ರದಲ್ಲಿ ಈ ಹಿಂದೆ ಜೆಡಿಎಸ್ ನ ಎಂ ಸಿ ಮನಗೂಳಿ ಶಾಸಕರಾಗಿದ್ದರು. ಈ ವರ್ಷದ ಆರಂಭದಲ್ಲಿ ಅವರು ತೀರಿಕೊಂಡ ನಂತರ ಉಪ ಚುನಾವಣೆ ಅನಿವಾರ್ಯವಾಯಿತು. ಅಶೋಕ್ ಮನಗುಳಿಯವರ ಪುತ್ರ ಎಂ ಸಿ ಮನಗುಳಿಯವರನ್ನು ಪಕ್ಷಕ್ಕೆ ಕರೆದುಕೊಂಡು ಉಪ ಚುನಾವಣೆಗೆ ನಿಲ್ಲಿಸಿರುವುದರಿಂದ ಜೆಡಿಎಸ್ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಬೇಕೆಂದು ಅಂದುಕೊಂಡಿದೆ. ಹಾನಗಲ್ ನಲ್ಲಿ ಜೆಡಿಎಸ್ ಹಿರಿಯ ನಾಯಕ ಹೆಚ್ ಡಿ ಕುಮಾರಸ್ವಾಮಿ ನಿಯಾಜ್ ಶೇಖ್ ಪರ ಪ್ರಚಾರ ನಡೆಸಲಿದ್ದಾರೆ.

ಮಾಜಿ ಸಿಎಂ ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡಿರುವ ನಾಯಕರು, ಯಡಿಯೂರಪ್ಪನವರು ಹಾನಗಲ್ ಮತ್ತು ಸಿಂದಗಿ ಎರಡೂ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ ಎಂದು ಹೇಳಿದ್ದಾರೆ. ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಿಜೆಪಿ ವಿರುದ್ಧ ಕಠಿಣ ಸ್ಪರ್ಧೆ ನೀಡಲು ಸಜ್ಜಾಗಿದೆ. ಬಿಜೆಪಿಯ ಅಭ್ಯರ್ಥಿ ಶಿವರಾಜ್ ಸಜ್ಜನರ್ ಮಾಜಿ ಶಾಸಕ ಉದಾಸಿ ಅವರ ಬೆಂಬಲಿಗರಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com