ಹುಬ್ಬಳ್ಳಿ: ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದನ್ನು ಯಾರಾದರೂ ಸಾಬೀತುಪಡಿಸಿದ್ದೇ ಅದರೆ, ರಾಜಕೀಯದಿಂದಲೇ ನಿವೃತ್ತಿ ಪಡೆದುಕೊಳ್ಳುವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪುನರುಚ್ಛರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಭೇಟಿ ಮಾಡಿದ್ದೇನೆಂದು ಹೇಳಿರುವುದು ಸುಳ್ಳು ಸುದ್ದಿಯಾಗಿದೆ. ಯಡಿಯೂರಪ್ಪ ಅವರ ಹಾದಿ ಆರ್'ಎಸ್ಎಸ್ ಆಗಿದೆ. ಹೀಗಾಗಿ ಅವರೊಂದಿಗೆ ಕೈಜೋಡಿಸುವುದು ಅಸಾಧ್ಯ. ನನ್ನ ಇಡೀ ರಾಜಕೀಯ ಭವಿಷ್ಯವೇ ಆರ್'ಎಸ್ಎಸ್ ವಿರೋಧವಾಗಿದೆ. ಇಷ್ಟಕ್ಕೂ ಅಧಿಕಾರದಲ್ಲಿ ಯಾರೇ ಇರಲಿ ಅವರ ಮನೆ ಬಾಗಿಲು ನಾನು ತಟ್ಟುವುದಕ್ಕೆ ಹೋಗುವುದೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಯಾವಾಗಲೂ ಪ್ರಜಾಪ್ರಭುತ್ವಕ್ಕೆ ಬದ್ಧವಾಗಿದೆ, ಆದರೆ, ಬಿಜೆಪಿ ವಿರುದ್ಧವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆರ್ಎಸ್ಎಸ್ ಅನ್ನು ಹೊಗಳಿದ್ದಾರೆ. ಇದರಿಂದ ಅವರು ಅಧಿಕಾರವನ್ನು ಉಳಿಸಿಕೊಳ್ಳಬಹುದು ಎಂಬ ಚಿಂತನೆಯಲ್ಲಿದ್ದಾರೆಂದು ಹೇಳಿದ್ದಾರೆ.
ಇದೇ ವೇಳೆ ಚಾಣಕ್ಯ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲು ರಾಜ್ಯ ಸರ್ಕಾರವು ಬೆಂಗಳೂರು ವಿಮಾನ ನಿಲ್ದಾಣದ ಬಳಿ 116 ಎಕರೆ ಪ್ರಧಾನ ಭೂಮಿಯನ್ನು ಆರ್ಎಸ್ಎಸ್ಗೆ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.
ಇದಕ್ಕಾಗಿ ರೂ.1.5 ಕೋಟಿ ಬೆಲೆಗೆ ಕೆಐಎಡಿಬಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ. ಸಂಘಕ್ಕೆ ನೀಡಲು ಮುಂದಾಗಿರುವ ಭೂಮಿಯ ಬೆಲೆ ರೂ.1,000 ರೂ.ಗಳಿಗಿಂತ ಹೆಚ್ಚಾಗಿದೆ. ಆದರೆ, ಸರ್ಕಾರವು ಅದನ್ನು ಕೇವಲ ರೂ.50 ಕೋಟಿ ನೀಡುತ್ತಿದೆ ಎಂದಿದ್ದಾರೆ.
Advertisement