ಗುಟ್ಟಿನಲ್ಲಿ ತಪ್ಪು ಮಾಡಿ ಗರತಿಯ ಸೋಗು ಹಾಕುವುದು! ಕಾಗೆ ಗಂಗಾ ಸ್ನಾನ ಮಾಡಿದರೆ ಬಿಳುಪಾಗುವುದೇ, ಕುಮಾರಸ್ವಾಮಿ?

ಮಾಜಿ ಸಿಎಂ ಕುಮಾರಸ್ವಾಮಿ ಕೆಪಿಎಸ್‌ಸಿಯನ್ನು ದುರ್ಬಳಕೆ ಮಾಡಿ ಬೇಕಾದವರಿಗೆ ಉದ್ಯೋಗ ನೀಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಎಚ್.ಡಿ ಕುಮಾರಸ್ವಾಮಿ
ಎಚ್.ಡಿ ಕುಮಾರಸ್ವಾಮಿ

ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ಕೆಪಿಎಸ್‌ಸಿಯನ್ನು ದುರ್ಬಳಕೆ ಮಾಡಿ ಬೇಕಾದವರಿಗೆ ಉದ್ಯೋಗ ನೀಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಆರ್‌ಎಸ್‌ಎಸ್‌ ಮೂಲದ ವ್ಯಕ್ತಿಗಳನ್ನೇ ಸರ್ಕಾರ ಅಧಿಕಾರಿಗಳನ್ನಾಗಿ ಮಾಡುತ್ತಿದೆ ಎಂಬ ಕುಮಾರಸ್ವಾಮಿ ಆರೋಪಗಳಿಗೆ ಬಿಜೆಪಿ ಇಂದು ಸರಣಿ ಟ್ವೀಟ್‌ ಮಾಡಿ ತಿರುಗೇಟು ನೀಡಿದೆ.

ಕೆಪಿಎಸ್‌ಸಿ ದುರ್ಬಳಕೆ ಮಾಡಿಕೊಂಡಿದ್ದು ಅಪರಾಧವಲ್ಲವೇ?‌  ಸಾಮಾಜಿಕ ಸಂಘಟನೆಯೊಂದರ ಕುರಿತು ಸಲ್ಲದ ಅಪವಾದ ಮಾಡುವ ಹೆಚ್​​ಡಿಕೆ ಅವರು ಅಧಿಕಾರದಲ್ಲಿದ್ದಾಗ ಕರ್ನಾಟಕ ಲೋಕಸೇವಾ ಆಯೋಗವನ್ನು ದುರ್ಬಳಕೆ  ಮಾಡಿಕೊಂಡಿದ್ದು ಅಪರಾಧವಲ್ಲವೇ?‌. ಹೆಚ್ ಎನ್ ಕೃಷ್ಣ ಕಾಲದಲ್ಲಿ ಕೆಪಿಎಸ್‌ಸಿ ನೇಮಕದ ಅಂತಿಮ ಆದೇಶ ಸಿದ್ದವಾಗುತ್ತಿದ್ದದ್ದೇ ಪದ್ಮನಾಭನಗರದಲ್ಲಿ ಎಂಬ ಆರೋಪ ಇದ್ದಿದ್ದು ಸುಳ್ಳೇ? ಎಂದು ಪ್ರಶ್ನಿಸಿದೆ. ಸಂವಿಧಾನಬದ್ಧ ಸ್ವಾಯತ್ತ ಸಂಸ್ಥೆಗಳ ದುರ್ಬಳಕೆ ಮಾಡಿದ್ಯಾರು?ಕೆಪಿಎಸ್‌ಸಿಯನ್ನು ದುರ್ಬಳಕೆ ಮಾಡಿಕೊಂಡ ಕುಮಾರಸ್ವಾಮಿ ಅವರು ತಮಗೆ ಬೇಕಾದ ವ್ಯಕ್ತಿಗಳ, ಕುಟುಂಬದ ಸದಸ್ಯರಿಗೆ ಅಕ್ರಮವಾಗಿ ಸರ್ಕಾರಿ ನೌಕರಿ ಕೊಡಿಸಿದ್ದರು. ಕುಮಾರಸ್ವಾಮಿ ಅವರೇ, ಇವರಿಗೆಲ್ಲ ನೀವು ತರಬೇತಿ ನೀಡಿದ್ದೆಲ್ಲಿ? ಪದ್ಮನಾಭ ನಗರದಲ್ಲೋ, ಕೇತಗಾನ ಹಳ್ಳಿಯ ತೋಟದ ಮನೆಯಲ್ಲೋ? ಎಂದು ಪ್ರಶ್ನಿಸಿದೆ.

ತಮಗೆ ಬೇಕಾದ ವ್ಯಕ್ತಿಯ ಕುಟುಂಬದವರಿಗೆ ಹೆಚ್ ಎನ್ ಕೃಷ್ಣ ಮೂಲಕ ಕ್ಲಾಸ್ ಒನ್ ಅಧಿಕಾರಿ ಹುದ್ದೆ ಕೊಡಿಸಿದ್ದೆ ಎಂಬ ನಿಮ್ಮ ಹೇಳಿಕೆಗೆ ರಾಜ್ಯವೇ ಸಾಕ್ಷಿಯಾಗಿದೆ. ಹಾಗಾದರೆ, ಸಂವಿಧಾನಬದ್ಧ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಿದ್ದು ಯಾರು?. ಕುಮಾರಸ್ವಾಮಿಯೋ ಅಥವಾ ಸಾಮಾಜಿಕ ಸಂಘಟನೆಯೋ? ಎಂದು ಆರ್‌ಎಸ್‌ಎಸ್ ವಿರುದ್ಧದ ಹೇಳಿಕೆಗೆ ತಿರುಗೇಟು ನೀಡಿದೆ ಬಿಜೆಪಿ.ಸ್ವಜನ 'ಪಕ್ಷ'ಪಾತ ಧೋರಣೆ ಅನಾವರಣಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ತಮಗೆ ಬೇಕಾದವರಿಗೆ ಸರ್ಕಾರಿ ಹುದ್ದೆ ಕೊಡಿಸಿದ್ದು ಕನ್ನಡಿಗರಿಗೆ ಮಾಡಿದ ಮೋಸವಲ್ಲವೇ? ಇದರಿಂದಲೇ‌ ನಿಮ್ಮ ಸ್ವಜನ 'ಪಕ್ಷ'ಪಾತ ಧೋರಣೆ ಅನಾವರಣವಾಗಿದೆ. ಸರ್ಕಾರಿ ಕೆಲಸ ನೀಡುವಲ್ಲಿಯೂ ಅಕ್ರಮ ಮಾಡಿದ ನೀವು ರಾಜ್ಯದ ಜನರಲ್ಲಿ ಬಹಿರಂಗ ಕ್ಷಮೆಯಾಚಿಸಬೇಕು. ವೃದ್ಧನಾರಿ ಪತಿವ್ರತಾಕುಮಾರಸ್ವಾಮಿ ಅವರೇ, "ವೃದ್ಧನಾರಿ ಪತಿವ್ರತಾ" ಎಂಬ ಮಾತು ಗೊತ್ತೇ ? ನಿಮ್ಮ ಸ್ಥಿತಿಯೂ
ಹಾಗಾಗಿದೆ. ಅವಕಾಶ ಸಿಕ್ಕಾಗಲೆಲ್ಲ ಗುಟ್ಟಿನಲ್ಲಿ ತಪ್ಪು ಮಾಡುವುದು, ಬಳಿಕ ಗರತಿಯ  ಸೋಗು ಹಾಕುವುದು ನಿಮ್ಮ ಹಳೇ ಚಾಳಿ. ಕೆಪಿಎಸ್‌ಸಿ ಕರ್ಮಕಾಂಡದ ರೂವಾರಿಯಾಗಿರುವ ನೀವು. ಈಗ ಊರಿಗೆ ಉಪದೇಶ ಕೊಡುವಂತಾಗಿರುವುದೇ ಕಾಲದ ಚೋದ್ಯ ಎಂದು ವ್ಯಂಗ್ಯವಾಡಿದೆ.ಘಾತುಕತನವನು ಬಿಡದೆ ನಿರಂತರ ಗೀತೆಯನೋದಿದೊಡೇನು ಫಲ?‌ ಕಾಗೆ ಗಂಗಾ ಸ್ನಾನ ಮಾಡಿದರೆ ಬಿಳುಪಾಗುವುದೇ, ಕುಮಾರಸ್ವಾಮಿ? ಎಂದು ಲೇವಡಿ ಮಾಡಿದೆ.

ಉಪ್ಪಿಲ್ಲದಿರುವಾಗ ಸೊಪ್ಪಿನ ಚಿಂತೆ. ಸೊಪ್ಪು ಸಿಕ್ಕಾಗ ಉಪ್ಪರಿಗೆ ಚಿಂತೆ. ಉಪ್ಪರಿಗೆ ಸಿಕ್ಕಾಗ ಕೊಪ್ಪರಿಗೆ ಚಿಂತೆ. ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರಿಗಾಗಿಯೇ ಬರೆದಂತಿದೆ ಈ ಕವಿ ವಾಕ್ಯ. ಸದಾ ವೈರುಧ್ಯದ ಗಣಿಯಂತಿರುವ ಕುಮಾರಸ್ವಾಮಿಯವರೇ, ಬಿಡುವಿನ ಸಂದರ್ಭದಲ್ಲಿ ಆತ್ಮಶೋಧಕ್ಕೂ ಒಂದಿಷ್ಟು ಸಮಯ ಮೀಸಲಿಡಿ ಎಂದು ಬಿಜೆಪಿ ಟ್ವೀಟ್ ಮೂಲಕ ಟಾಂಗ್ ನೀಡಿದೆ‌.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com