ಪ್ರಿಯಾಂಕ್ ಖರ್ಗೆಗೆ ನೋಟಿಸ್: ಸರ್ಕಾರದ ವಿರುದ್ಧ ಡಿ.ಕೆ.ಶಿವಕುಮಾರ್ ಕಿಡಿ
ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಕುರಿತಾದ ತನಿಖೆಗೆ ಸಂಬಂಧಿಸಿದಂತೆ ಪ್ರಿಯಾಂಕ್ ಖರ್ಗೆಗೆ ಸಿಐಡಿ ನೋಟಿಸ್ ನೀಡಿದೆ. ಪೊಲೀಸರು ನೀಡಿರುವ ಈ ನೋಟಿಸ್ ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಿಟ್ಟಾಗಿದ್ದಾರೆ.
Published: 26th April 2022 08:29 AM | Last Updated: 26th April 2022 01:23 PM | A+A A-

ಡಿಕೆ.ಶಿವಕುಮಾರ್
ಬೆಂಗಳೂರು: ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಕುರಿತಾದ ತನಿಖೆಗೆ ಸಂಬಂಧಿಸಿದಂತೆ ಪ್ರಿಯಾಂಕ್ ಖರ್ಗೆಗೆ ಸಿಐಡಿ ನೋಟಿಸ್ ನೀಡಿದೆ. ಪೊಲೀಸರು ನೀಡಿರುವ ಈ ನೋಟಿಸ್ ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಿಟ್ಟಾಗಿದ್ದಾರೆ.
ಈ ಕುರಿತು ಸದಾಶಿವನಗರದಲ್ಲಿ ಮಾತನಾಡಿದ ಡಿಕೆಶಿ, ಮಾಹಿತಿ ನೀಡಿದವರಗೆ ನೋಟಿಸ್ ನೀಡ್ತಿರಾ? ದಾಖಲೆ ಬಹಿರಂಗ ಪಡೆಸಿದವರನ್ನು ಹೆದರಿಸ್ತಿರಾ? ಈ ಆಟ ನಡೆಯಲ್ಲ. ವಿಚಾರಣೆಗೆ ಹಾಜರಾಗದಂತೆ ಪಕ್ಷದಿಂದ ಸೂಚನೆ ನೀಡಿದ್ದೇವೆ. ಬರ್ಲಿ ನೋಡೋಣ ಏನಾಗತ್ತೆ ಅಂತ ರಾಜ್ಯ ಸರಕಾರದ ವಿರುದ್ಧ ಸವಾಲು ಹಾಕಿದರು.
ನಿನ್ನೆ ನೋಟಿಸ್ ನೀಡಿದ್ದ ಬಗ್ಗೆ ಪಕ್ಷದ ನಾಯಕರ ಜೊತೆಗೆ ಚರ್ಚೆ ಮಾಡಿಯೇ.. ವಿಚಾರಣೆಗೆ ಹಾಜರಾಗಬೇಡಿ ಅಂತ ಸೂಚಿಸಿದ್ದೇನೆ. ಆರೋಪಿ ಗೃಹ ಸಚಿವರ ಜೊತೆಗೆ ನಿಂತು ಪೋಟೋ ತೆಗೆದುಕೊಳ್ಳುತ್ತಾರೆ. ಹಲವು ಸಚಿವರ ಜೊತೆಗೆ ಅವರು ನಿಂತಿದ್ದಾರೆ. ಹಾರ ತುರಾಯಿ ಹಾಕಿಸಿಕೊಂಡು ಪೋಟೋ ಕೂಡ ತೆಗೆಸಿಕೊಳ್ತಾರೆ. ಆರೋಪಿ ಭ್ರಷ್ಟಾಚಾರದ ಅಂಗಡಿ ಓಪನ್ ಮಾಡಿಕೊಂಡಿದ್ದಾರೆ. ಅಂಗಡಿ ಓಪನ್ ಆಗಿದಕ್ಕೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೇರಿದಂತೆ ಎಲ್ಲರೂ ಅಂಗಡಿಗೆ ಹೋಗಿದ್ದಾರೆ. ವಿದ್ಯಾರ್ಥಿಗಳು ಹಾಗೂ ಯುವಕರ ಭವಿಷ್ಯ ದೃಷ್ಟಿಯಿಂದ ನಮ್ಮ ಹೋರಾಟ ನಡೆಯುತ್ತೆ ಎಂದು ತಿಳಿಸಿದರು.
ಇಂದು ಪ್ರಿಯಾಂಕ್ ಖರ್ಗೆಗೆ ನೋಟಿಸ್ ನೀಡಿದಕ್ಕೆ ದಲಿತ ಮುಖಂಡರು ಹೋರಾಟಕ್ಕೆ ಮುಂದಾಗಿದ್ರು. ನಾನೇ ಸದ್ಯ ಹೋರಾಟ ಬೇಡ ಅಂದಿದ್ದೇನೆ. ನಮ್ಮನ್ನು ಹೆದರಿಸಲು ಯಾರಿಂದಲೂ ಸಾಧ್ಯವಿಲ್ಲ. ಮಲ್ಲಿಕಾರ್ಜುನ ಖರ್ಗೆ ಮೂರು ತಿಂಗಳ ಹಿಂದೆ ಟ್ರಸ್ಟ್ ಒಂದರ ಅಧ್ಯಕ್ಷ ಆಗಿದ್ದಾರೆ. ಆಸ್ಕರ್ ನಿಧನದ ನಂತರ ತೆರವಾಗಿರುವ ಸ್ಥಾನಕ್ಕೆ ಟ್ರಸ್ಟಿಯಾಗಿದ್ದಾರೆ. ಅವರಿಗೆ ಇಡಿ ನೋಟಿಸ್ ಕೊಟ್ಟು ವಿಚಾರಣೆ ಮಾಡಲಾಗಿದೆ. ನಿಮ್ಮ ವಿರುದ್ಧ ಮಾತೇ ಆಡಬಾರದಾ? ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ. ಪ್ರಾಣ ಹೋದರು ನಾವು ಹೆದರಲ್ಲ ಎಂದು ಡಿಕೆಶಿ ಬಿಜೆಪಿಗೆ ತಿರುಗೇಟು ನೀಡಿದರು.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಹಗರಣ: ಸರ್ಕಾರದ ವಿರುದ್ಧ ಬಿಜೆಪಿ ಎಂಎಲ್ಸಿ ವಿಶ್ವನಾಥ್ ಟೀಕೆ
ತನಿಖೆಗೆ ಸಹಕಾರ ಮಾಡ್ತಿಲ್ಲ ಅನ್ನೋದು ತಪ್ಪು. ನಿಮ್ಮಿ ಮೂಗಿನ ನೇರಕ್ಕೆ ನಡೆದಿರುವ ಬೆಳವಣಿಗೆ ಗೊತ್ತಿಲ್ವಾ? ಮೊದಲು ವಿಚಾರಣೆ ಆಗಲಿ, ನಂತರ ತಕ್ಕ ಉತ್ತರ ಕೊಡ್ತೇವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ದಾಖಲೆ ನಮ್ಮ ಬಳಿ ಇದೆ. ಅದನ್ನು ಕೂಡ ಬಹಿರಂಗ ಪಡೆಸುತ್ತೇವೆ. ನಮ್ಮ ಬಳಿ ಇರುವ ದಾಖಲೆ ಹೋರಾಟಗಾರಿಂದಲೇ ಪಡೆದುಕೊಂಡಿದ್ದೇವೆ. ಸಿಐಡಿ ವಿಚಾರಣೆಗೆ ಹಾಜರಾಗದಂತೆ ಪ್ರಿಯಾಂಕ್ ಖರ್ಗೆಗೆ ಸೂಚಿಸಿದ್ದನ್ನು ಡಿ.ಕೆ ಶಿವಕುಮಾರ್ ಸಮರ್ಥಿಸಿಕೊಂಡರು.
ಈ ಹಿಂದೆ ಪರಿಷತ್ ಸದಸ್ಯ ವಿಶ್ವನಾಥ್ ಅವರು ಯಡಿಯೂರಪ್ಪ ಮೇಲೆ ಕಮಿಷನ್ ಆರೋಪ ಮಾಡಿದ್ರು. ಯಾಕೆ ಎಸಿಬಿ ಅವರು ಕೇಸ್ ರಿಜಿಸ್ಟರ್ ಮಾಡಿ ವಿಶ್ವನಾಥ್ ನೋಟಿಸ್ ಕೊಟ್ಟು ವಿಚಾರಣೆ ಮಾಡ್ಲಿಲ್ಲಾ? ಯತ್ನಾಳ್ ಹೇಳಿದ್ರು ಆಗ ಕೇಸ್ ರಿಜಿಸ್ಟರ್ ಮಾಡ್ಲಿಲ್ಲ? 2ಜಿ ಸ್ಕ್ಯಾಮ್ ನಡೆದಾಗ ಅವರಿಗೆಲ್ಲ ನೋಟಿಸ್ ಕೊಟ್ಟಿಲ್ಲ. ಹಾಗಾದರೆ ಆರೋಪಿ ಜೊತೆಗೆ ಇದ್ದವರಿಗೆಲ್ಲರಿಗೂ ನೋಟಿಸ್ ಕೊಡಬೇಕಿತ್ತು. ಹೋಮ್ ಮಿನಿಸ್ಟರ್ ಗೆ ನೋಟಿಸ್ ಕೊಡಬೇಕಿತ್ತು. ಪಕ್ಕದಲ್ಲಿ ಇಟ್ಕೊಂಡು ಪೋಟೋ ತಗೆದುಕೊಂಡಿದ್ದಕ್ಲೆ ನೋಟಿಸ್ ಕೊಡಬೇಕಿತ್ತು. ಜೊತೆಗೆ ಇದ್ದವರಿಗೆ ಎಲ್ಲರಿಗೂ ನೋಟಿಸ್ ಕೊಡಬೇಕಿತ್ತು ಎಂದು ಡಿಕೆಶಿ ಸವಾಲು ಹಾಕಿದರು.
ಮುಸ್ಲಿಂ ಸಮುದಾಯದ ವ್ಯಾಪಾರಿ ಗಳ ಚಿನ್ನದ ಅಂಗಡಿಯಿಂದ ಚಿನ್ನ ಖರೀದಿಸಬೇಡಿ ಎಂಬ ವಿಚಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಿಡಿಕಾರಿದರು. ಇವತ್ತು ಚಿನ್ನ ತಗೊಬೇಡ, ಚಿನ್ನದ ಅಂಗಡಿಗೆ ಹೋಗಬೇಡ ಅಂತ ಅದ್ಯಾರೋ ಬಿಜೆಪಿ ಕಾರ್ಯಕರ್ತರು ಅಂತಿದ್ದಾರೆ. ಏನ್ ಮಾಡ್ತಿದ್ದಾರೆ ಸಿಎಂ ಬೊಮ್ಮಾಯಿ? ಏನ್ ಮಾಡ್ತಿದ್ದಾರೆ ಗೃಹ ಸಚಿವರು? ಏನಾಗಬೇಡ ಆರ್ಥಿಕ ಭವಿಷ್ಯ? ಚಿನ್ನ ಖರೀದಿಗೆ, ಹೊಟೇಲ್ ಗೆ ಹೋಗೋದಕ್ಕೆ, ವ್ಯಾಪಾರ ಮಾಡೋದಕ್ಕೆ ಜಾತಿ ಬಣ್ಣ ಕಟ್ಟಿದ್ರೆ ಏನ್ ಆಗ್ಬೇಡಾ? ಏನ್ ಆಗ್ತಿದೆ ರಾಜ್ಯದಲ್ಲಿ? ವಿದ್ಯಾರ್ಥಿಗಳ, ಯುವಕರ ಭವಿಷ್ಯ ಏನ್ ಆಗ್ಬೇಡಾ ಡಿ.ಕೆ.ಶಿವಕುಮಾರ್ ಪ್ರಶ್ನೆ ಮಾಡಿದರು.