ಕನ್ನಡದ ಹಿರಿಯ ಹಾಸ್ಯ ನಟ ಟೆನಿಸ್‌ ಕೃಷ್ಣ ಆಮ್‌ ಆದ್ಮಿ ಪಕ್ಷಕ್ಕೆ ಸೇರ್ಪಡೆ!

ಕನ್ನಡದ ಖ್ಯಾತ ಹಾಸ್ಯನಟ ಟೆನ್ನಿಸ್‌ ಕೃಷ್ಣರವರು ಆಮ್‌ ಆದ್ಮಿ ಪಾರ್ಟಿಗೆ ಗುರುವಾರ ಸೇರ್ಪಡೆಯಾದರು. ಹೊಟೇಲ್‌ ಪರಾಗ್‌ನಲ್ಲಿ ನಡೆದ ಸಮಾರಂಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾದ ಪೃಥ್ವಿ ರೆಡ್ಡಿಯವರು ಕೃಷ್ಣರವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಟೆನಿಸ್ ಕೃಷ್ಣ ಎಎಪಿ ಸೇರ್ಪಡೆ
ಟೆನಿಸ್ ಕೃಷ್ಣ ಎಎಪಿ ಸೇರ್ಪಡೆ

ಬೆಂಗಳೂರು: ಕನ್ನಡದ ಖ್ಯಾತ ಹಾಸ್ಯನಟ ಟೆನ್ನಿಸ್‌ ಕೃಷ್ಣರವರು ಆಮ್‌ ಆದ್ಮಿ ಪಾರ್ಟಿಗೆ ಗುರುವಾರ ಸೇರ್ಪಡೆಯಾದರು. ಹೊಟೇಲ್‌ ಪರಾಗ್‌ನಲ್ಲಿ ನಡೆದ ಸಮಾರಂಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾದ ಪೃಥ್ವಿ ರೆಡ್ಡಿಯವರು ಕೃಷ್ಣರವರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಎಎಪಿ ಸೇರ್ಪಡೆ ಬಳಿಕ ಮಾತನಾಡಿದ ಟೆನ್ನಿಸ್‌ ಕೃಷ್ಣ, 'ದೇಶದ ರಾಜಕೀಯದಲ್ಲಿ ಬದಲಾವಣೆ ತರುವ ಪ್ರಯತ್ನದಲ್ಲಿ ಆಮ್‌ ಆದ್ಮಿ ಪಾರ್ಟಿ ಯಶಸ್ವಿಯಾಗುತ್ತಿದೆ. ದೆಹಲಿಯಲ್ಲಿ ಶಿಕ್ಷಣ, ಆರೋಗ್ಯ, ಕ್ರೀಡೆ ಮುಂತಾದ ಕ್ಷೇತ್ರಗಳಲ್ಲಿ ಸಾಧಿಸಿ ತೋರಿಸಿರುವ ಎಎಪಿಯು ಈಗ ಪಂಜಾಬ್‌ನಲ್ಲೂ ಮೋಡಿ ಮಾಡುತ್ತಿದೆ. ಭ್ರಷ್ಟ ಪಕ್ಷಗಳನ್ನು ಬದಿಗೊತ್ತಿ ದೇಶವನ್ನು ಕಾಪಾಡಲು ಎಎಪಿಯಿಂದ ಮಾತ್ರ ಸಾಧ್ಯ. ಸಾಮಾನ್ಯ ಜನರ ಬಗ್ಗೆ ಅಪಾರ ಕಾಳಜಿಯುಳ್ಳ ಆಮ್‌ ಆದ್ಮಿ ಪಾರ್ಟಿಯ ಮೂಲಕ ರಾಜಕೀಯ ಪ್ರವೇಶಿಸುತ್ತಿರುವುದಕ್ಕೆ ಹೆಮ್ಮೆಯಾಗುತ್ತಿದೆ. ಎಎಪಿಯನ್ನು ಬಳಸಿಕೊಂಡು ದೇಶದ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯ ಪ್ರವೇಶಿಸಬೇಕು' ಎಂದು ಹೇಳಿದರು.

ಆಮ್‌ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಮಾತನಾಡಿ, 'ಕರ್ನಾಟಕದಲ್ಲಿ ಆಮ್‌ ಆದ್ಮಿ ಪಾರ್ಟಿಯು ಭದ್ರವಾಗಿ ಬೇರೂರುತ್ತಿದೆ. ಸಿನಿಮಾ ಸಾಧಕರು, ದಕ್ಷ ಅಧಿಕಾರಿಗಳು, ರೈತ ನಾಯಕರು, ಸಮಾಜಸೇವಕರು, ವಕೀಲರು, ಉಪನ್ಯಾಸಕರು ಮುಂತಾದ ವಿವಿಧ ಕ್ಷೇತ್ರದ ಗಣ್ಯರು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ದೇಶಕ್ಕೆ ಆಮ್‌ ಆದ್ಮಿ ಪಾರ್ಟಿಯೊಂದೇ ಆಶಾಕಿರಣ ಎಂಬುದು ಯುವಜನತೆಗೆ ಮನವರಿಕೆಯಾಗುತ್ತಿದೆ. ಜನಪ್ರಿಯ ನಟರಾದ ಟೆನಿಸ್ ಕೃಷ್ಣರವರ ಸೇರ್ಪಡೆಯಿಂದ ಪಕ್ಷಕ್ಕೆ ಇನ್ನಷ್ಟು ಬಲ ಬಂದಿದೆ. ಸ್ವಚ್ಛ ರಾಜಕೀಯ ಹಾಗೂ ಪಾರದರ್ಶಕ ಆಡಳಿತವೇ ನಮ್ಮೆಲ್ಲರ ಧ್ಯೇಯವಾಗಿದ್ದು, ಇದನ್ನು ಸಾಧಿಸಲು ಒಗ್ಗಟ್ಟಿನಿಂದ ಶ್ರಮಿಸಲಿದ್ದೇವೆ' ಎಂದು ಹೇಳಿದರು.

ಎಎಪಿಯ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಮಾತನಾಡಿ, 'ಟೆನಿಸ್‌ ಕೃಷ್ಣರವರ ತಂದೆಯವರು ಕೆಂಗಲ್‌ ಹನುಮಂತಯ್ಯ, ವೀರೇಂದ್ರ ಹೆಗ್ಗಡೆ ಸೇರಿದಂತೆ ಅನೇಕ ಗಣ್ಯರಿಗೆ ಟೆನಿಸ್‌ ತರಬೇತಿ ನೀಡಿದವರು. ಕೃಷ್ಣರವರು ಕೂಡ ತಂದೆಯ ಹಾದಿಯಲ್ಲೇ ಸಾಗಿ ಟೆನಿಸ್‌ ತರಬೇತಿ ನೀಡಿ, ಟೆನಿಸ್‌ ಕೃಷ್ಣ ಎಂದೇ ಮನೆಮಾತಾಗಿದ್ದಾರೆ. ಕನ್ನಡದ 650ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಾಸ್ಯನಟರಾಗಿ ನಗಿಸುವ ಮೂಲಕ ಕನ್ನಡಿಗರ ಆಯುಸ್ಸು ಹೆಚ್ಚಿಸಿದ್ದಾರೆ.

ಡಾ. ರಾಜ್‌ಕುಮಾರ್‌, ವಿಷ್ಣುವರ್ಧನ್‌, ಶಂಕರ್‌ನಾಗ್‌ ಮುಂತಾದ ಮೇರುನಟರ ಜೊತೆ ಅಭಿನಯಿಸಿದ ಕೃಷ್ಣರವರು ಇಂದು ಆಮ್‌ ಆದ್ಮಿ ಪಾರ್ಟಿ ಸೇರುತ್ತಿರುವುದು ಪಕ್ಷಕ್ಕೆ ಹೆಮ್ಮೆಯ ವಿಚಾರ' ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಪಕ್ಷದ ಮುಖಂಡರುಗಳಾದ ಸಂಚಿತ್ ಸೆಹ್ವಾನಿ, ಪುರುಷೋತ್ತಮ್, ಸುರೇಶ್ ರಾಥೋಡ್, ಉಷಾ ಮೋಹನ್, ಚನ್ನಪ್ಪಗೌಡ ನೆಲ್ಲೂರು, ಜ್ಯೋತಿಷ್ ಕುಮಾರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com