ಬೆಂಗಳೂರು: ಸಮಾಜದಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ತಿಗಳ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಸಮುದಾಯದ ಆರಾಧ್ಯ ದೈವ ಅಗ್ನಿ ಬನ್ನಿಗರಾಯ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದ ಅಮಾನಿಕೆರೆಯ ಗಾಜಿನಮನೆಯಲ್ಲಿ ಶುಕ್ರವಾರ ನಡೆದ ತಿಗಳ ಕ್ಷತ್ರಿಯ ಸಮಾಜದ ಜಾಗೃತಿ ಸಮಾವೇಶ ಹಾಗೂ ಗುರುವಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪ್ರತಿ ವರ್ಷವೂ ಸರ್ಕಾರದಿಂದಲೇ ಅಗ್ನಿಬನ್ನಿಗರಾಯ ಜಯಂತಿ ಆಚರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು, ಆದರೆ ಅಧಿಕೃತ ರಜೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.
ಏಪ್ರಿಲ್ 1 ರಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಇದೇ ರೀತಿ ಸಮುದಾಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಮುದಾಯ ಭವನ ನಿರ್ಮಾಣಕ್ಕೆ ವೈಯಕ್ತಿಕವಾಗಿ 25 ಲಕ್ಷ ರೂ. ಘೋಷಿಸಿದ್ದರು. ಬೊಮ್ಮಾಯಿ ಕೂಡ ಯಡಿಯೂರಪ್ಪನವರ ಹಾದಿಯಲ್ಲೇ ಸಾಗುತ್ತಿದ್ದಾರೆ
.
ಅಗ್ನಿಬನ್ನಿರಾಯ, ತಿಗಳರ ಇತಿಹಾಸ, ಪರಂಪರೆಯನ್ನು ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಹೆಚ್ಚಿನ ಅಧ್ಯಯನ ಕೈಗೊಳ್ಳಲು ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಸಂಶೋಧನಾ ಕೇಂದ್ರ ತೆರೆಯಲಾಗುವುದು. ತಿಗಳ ಸಮುದಾಯದ ಭವನಗಳಿಗೆ 5 ಕೋಟಿ ರೂ. ನೀಡಿದ್ದೇನೆ. ಸಮುದಾಯದ ಹಾಸ್ಟೆಲ್ಗಳ ನಿರ್ಮಾಣಕ್ಕೂ 4.45 ಕೋಟಿ ರೂ. ಘೋಷಿಸಿದ್ದಾರೆ. ಸಂವಿಧಾನವು ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಿದ್ದರೂ, ಅದರಿಂದ ಎಷ್ಟು ಮಂದಿ ಪ್ರಯೋಜನ ಪಡೆದರು ಎಂಬುದು ಇನ್ನೂ ಪ್ರಶ್ನೆಯಾಗಿದೆ. ನಿಮ್ಮ ಸಮುದಾಯವನ್ನು ಬಲಪಡಿಸುವವರಿಗೆ ನೀವು ಬೆಂಬಲ ನೀಡಬೇಕು ಎಂದು ಬೊಮ್ಮಾಯಿ ಹೇಳಿದರು.
ಹಳೆ ಮೈಸೂರು ಭಾಗ, ಬೆಂಗಳೂರು, ರಾಮನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಸಾಕಷ್ಟು ಜನಸಂಖ್ಯೆ ಹೊಂದಿರುವ ಸಮುದಾಯ ಸುಮಾರು 48 ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಮಾಜಿ ಶಾಸಕ ನೆ.ಲ ನರೇಂದ್ರಬಾಬು ಪ್ರತಿಪಾದಿಸಿದರು.
ನರೇಂದ್ರ ಬಾಬು ಅವರ ಪ್ರಸ್ತಾವನೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಬೆಂಗಳೂರಿನಲ್ಲಿ ಸಮುದಾಯಕ್ಕೆ 10 ಎಕರೆ ಭೂಮಿ ಮತ್ತು ಸಿಎ ನಿವೇಶನ ನೀಡುವುದಾಗಿ ಭರವಸೆ ನೀಡಿದರು. ಈಗ 2A ಮೀಸಲಾತಿ ಅಡಿಯಲ್ಲಿ ಬರುತ್ತದೆ, ಅದನ್ನು ವರ್ಗ-1 ಅಡಿಯಲ್ಲಿ ಸೇರಿಸಬೇಕು ಎಂಬ ಸಮುದಾಯದ ಬೇಡಿಕೆಗೆ ಅವರು ಪ್ರತಿಕ್ರಿಯೆ ನೀಡಲಿಲ್ಲ.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ಲೋಕಸಭೆ ಸದಸ್ಯ ಜಿ.ಎಸ್.ಬಸವರಾಜು, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಡಾ.ಸಿ.ಎಂ.ರಾಜೇಶ್ ಗೌಡ, ಮಸಾಲೆ ಜಯರಾಂ, ಬಿಬಿಎಂಪಿ ಟಿಕೆಟ್ ಆಕಾಂಕ್ಷಿ ಎ.ಎಚ್.ಬಸವರಾಜು ಸೇರಿದಂತೆ ಹಲವು ಬಿಜೆಪಿ ಮುಖಂಡರು ಭಾಗವಹಿಸಿದ್ದರು. ಧಾರ್ಮಿಕ ಮುಖಂಡರಾದ ಶ್ರೀ ಜ್ಞಾನಾನಂದಪುರಿ ಸ್ವಾಮಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
Advertisement