ಭೌದ್ದಿಕ ದಿವಾಳಿತನ, ಕಾಂಗ್ರೆಸ್ ನಾಯಕತ್ವದ ದುರಹಂಕಾರದಿಂದ ಹಿರಿಯರು ಪಕ್ಷ ತೊರೆಯುವಂತಾಗಿದೆ: ಜೋಶಿ

ಕಾಂಗ್ರೆಸ್ ಪಕ್ಷದಲ್ಲಿನ ನಾಯಕತ್ವ, ದುರಹಂಕಾರ ಮತ್ತು ಭೌದ್ದಿಕ ದಿವಾಳಿಕೋರತನದ ವಿರುದ್ಧ ಅಲ್ಲಿನ ಹಿರಿಯರು ಪಕ್ಷ ತೊರೆಯುವಂತಾಗಿದೆ.
ಪ್ರಹ್ಲಾದ್ ಜೋಶಿ
ಪ್ರಹ್ಲಾದ್ ಜೋಶಿ

ಧಾರವಾಡ: ಕಾಂಗ್ರೆಸ್ ಪಕ್ಷದಲ್ಲಿನ ನಾಯಕತ್ವ, ದುರಹಂಕಾರ ಮತ್ತು ಭೌದ್ದಿಕ ದಿವಾಳಿಕೋರತನದ ವಿರುದ್ಧ ಅಲ್ಲಿನ ಹಿರಿಯರು ಪಕ್ಷ ತೊರೆಯುವಂತಾಗಿದೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದ ಗುಲಾಬ್ ನಬೀ ಅಜಾದ್ ಈಗ ಪಕ್ಷ ತೊರೆದಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕಿಸಿದರು.

ಧಾರವಾಡದಲ್ಲಿ ಮಾತನಾಡಿದ ಅವರು, ಈ ಹಿಂದೆಯೂ ಸಾಕಷ್ಟು ಹಿರಿಯ ನಾಯಕರು ಪಕ್ಷದ ದುರಾಡಳಿತದಿಂದ ಮನನೊಂದು ಹೊರ ಬಂದಿದ್ದಾರೆ, ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಅನುಭವಿಸಿ ಈಗ ತೊರೆದಿದ್ದಾರೆ ಎಂಬಂತೆ ಸಾಕಷ್ಟು ಪ್ರತಿಕ್ರಿಯೆ ಬಂದಿವೆ. ಪಕ್ಷದಲ್ಲಿ ಸ್ಥಾನಮಾನ ಕೊಟ್ಟಿದ್ದೀರಾ ಅಂದರೆ ಆ ಸ್ಥಾನಮಾನ ಅವಧಿ ಮುಗಿದ ಬಳಿಕವೂ ಯಾವುದೇ ವ್ಯಕ್ತಿಯಾದರೂ ಸರಿಯೇ ಅವರ ಘನತೆ, ಗೌರವಕ್ಕೆ ತಕ್ಕಂತೆ ನಡೆದುಕೊಳ್ಳಬೇಕು. ಅಲ್ಲಿನ ನಾಯಕರು, ಅಧ್ಯಕ್ಷರು ಆ ರೀತಿ ನಡೆದುಕೊಳ್ಳಬೇಕು. ಆದರೆ ಕಾಂಗ್ರೆಸ್ ಪಕ್ಷದಲ್ಲಿ ದುರಹಂಕಾರ ನಡೆಯಿಂದ ಮನನೊಂದು ಪಕ್ಷ ತೊರೆದಿದ್ದಾರೆ ಎಂದರು.

ಚಿತ್ರದುರ್ಗದ ಮುರುಘಾ ಶರಣರ ವಿರುದ್ದ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪದಡಿ ದೂರು ದಾಖಲಿಸಿದ್ದು, ಈಗಾಗಲೇ ತನಿಖೆ ಕೂಡ ಆರಂಭಗೊಂಡಿದೆ. ಹೀಗಾಗಿ ಈ ಬಗ್ಗೆ ಹೆಚ್ಚು ಮಾತನಾಡುವ ಅಗತ್ಯವಿಲ್ಲ. ನಾಡಿನ ಪ್ರತಿಷ್ಠಿತ ಶ್ರೀಗಳು ಅವರಾಗಿದ್ದು, ಹೀಗಾಗಿ ಸೂಕ್ತವಾದ ನ್ಯಾಯಯುತ ತನಿಖೆ ಆಗಲಿ ಎಂದು ಸಚಿವ ಪ್ರಹ್ಲಾದ ಜೋಶಿ ಪ್ರತಿಕ್ರಿಯೆ ನೀಡಿದರು.

ಎಲ್‌ಅಂಡ್‌ಟಿ ಮತ್ತು ಎಚ್‌ಡಿಎಂಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ, ಪ್ರತಿ ಪ್ರದೇಶದಲ್ಲಿ ಸಾರ್ವಜನಿಕರ ಅಗತ್ಯಕ್ಕೆ ಅನುಗುಣವಾಗಿ ಕುಡಿಯುವ ನೀರು ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಹೊಸ ಸಿಬ್ಬಂದಿ ನೇಮಕ ಮಾಡಿ ಕಾಮಗಾರಿ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com