ಬೆಂಗಳೂರು: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ನಡುವಣ ಟೀಕಾ ಸಮರ ಜೋರಾಗಿ ನಡೆಯುತ್ತಿದೆ. ಕಾಂಗ್ರೆಸ್ ಬಸ್ ಯಾತ್ರೆ ಕುರಿತು ಕಾರ್ಟೂನ್ ಮೂಲಕ ಬಿಜೆಪಿ ವ್ಯಂಗ್ಯವಾಡಿದೆ.
ಕಾಂಗ್ರೆಸ್ ಎರಡು ಸ್ಟೇರಿಂಗ್ನ ಬಸ್ ಯಾತ್ರೆಗೆ ಅಣಿಯಾಗುತ್ತಿದೆ. ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಎರಡೂ ಸ್ಟೇರಿಂಗ್ ಕಿತ್ತುಕೊಂಡು, ಖರ್ಗೆ ಅವರನ್ನು ಮೂಲೆಗೆ ತಳ್ಳಿರೋದು ನೋಡಿದ್ರೆ ಈ ಬಸ್ ಯಾತ್ರೆ ಪಂಕ್ಚರ್ ಆಗೋದು ಗ್ಯಾರಂಟಿ ಎಂದು ಟಕ್ಕರ್ ನೀಡಿದೆ.
ರಾಹುಲ್ ಗಾಂಧಿ ಸ್ಟೇಜ್ ಮೇಲೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರನ್ನು ತಬ್ಬಿಕೊಳ್ಳುವಂತೆ ಮಾಡಿದರೂ ಕೆಳಗಿಳಿದು ಮತ್ತದೇ ಕಿತ್ತಾಟ ಶುರು ಮಾಡುವುದನ್ನು ನೋಡಿ, ಬೇಸತ್ತು ಖರ್ಗೆ ಅವರನ್ನು ಡ್ಯಾಮೇಜ್ ಕಂಟ್ರೋಲ್ ಮಾಡಲು ಬಿಟ್ಟರು, ಸೋಜಿಗವೆಂದರೆ ಖರ್ಗೆಯವರೇ ಮತ್ತೊಂದು ಗುಂಪಿನ ನಾಯಕ! ಇಬ್ಬರು ನಾಯಕರನ್ನು ದಿಲ್ಲಿಗೆ ಕರೆದು ಸಮಾಧಾನ ಮಾಡುವಷ್ಟರಲ್ಲಿ ಈಗ ಉಭಯ ನಾಯಕರ ಬಣಗಳು ಕಿತ್ತಾಟ ಶುರು ಮಾಡಿಕೊಂಡಿರುವುದು ಎಐಸಿಸಿಗೆ ತಲೆ ಬಿಸಿ ಶುರುವಾಗಿದೆ. ಇದು ಕಪ್ಪೆಗಳನ್ನು ಹಿಡಿದು ಕೊಳಗ ತುಂಬಿದಂತಾಗಿದ್ದು, ಇವರ ಜಗಳವನ್ನೇ ಸುಧಾರಿಸುತ್ತಿದ್ದರೆ ಚುನಾವಣೆಗೆ ಹೊರಡುವುದು ಯಾವಾಗ ಎಂಬಂತಾಗಿದೆ! ಎಂದು ವಾಗ್ದಾಳಿ ನಡೆಸಿದೆ.
ಕಾಂಗ್ರೆಸ್ಗೆ "ಪವರ್ ಕ್ಯಾನ್ಸರ್" ಶುರುವಾಗಿದೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಇಬ್ಬರೂ ಒಬ್ಬರಿಗಿಂತ ಇನ್ನೊಬ್ಬರು ಪವರ್ಫುಲ್ ಎಂದು ತೋರಿಸಿಕೊಳ್ಳುವ, ಹಾಗೇ ಮುಖ್ಯಮಂತ್ರಿ ಅಭ್ಯರ್ಥಿ ನಾನೇ ಎಂಬ ಸಂದೇಶ ರವಾನಿಸುವುದರಲ್ಲೇ ತಮ್ಮ ಶಕ್ತಿ ವ್ಯಯಿಸುತ್ತಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.
Advertisement