ಪಂಚರತ್ನ ಯಾತ್ರೆಯಲ್ಲಿ ಕುಮಾರಣ್ಣಂಗೆ ಜೈ ಅಂದ್ರೆ 500, ಕಳಶ ಹೊತ್ತ ಮಹಿಳೆಯರಿಗೆ 1000: ಅಲ್ಪಸಂಖ್ಯಾತರನ್ನು ಬಿಟ್ಟು 5 ಸಾವಿರ ಜನರನ್ನು ಸೇರಿಸಲಿ!
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಳ್ಳುವ ಜ.9ರ ಸಭೆಗೂ ಮುನ್ನ ಶಾಸಕ ಕೆ.ಆರ್.ರಮೇಶ್ ಕುಮಾರ್ ತಾಕತ್ತಿದ್ದರೆ ಕೋಲಾರ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರನ್ನು ಹೊರತುಪಡಿಸಿ ಐದು ಸಾವಿರ ಜನರನ್ನು ಸೇರಿಸಲಿ ನೋಡೋಣ ಎಂದು ಮಾಜಿ ಸಚಿವ ವರ್ತೂರು ಆರ್.ಪ್ರಕಾಶ್ ಸವಾಲು ಹಾಕಿದರು.
Published: 28th December 2022 08:42 AM | Last Updated: 28th December 2022 08:42 AM | A+A A-

ವರ್ತೂರು ಪ್ರಕಾಶ್
ಕೋಲಾರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಳ್ಳುವ ಜ.9ರ ಸಭೆಗೂ ಮುನ್ನ ಶಾಸಕ ಕೆ.ಆರ್.ರಮೇಶ್ ಕುಮಾರ್ ತಾಕತ್ತಿದ್ದರೆ ಕೋಲಾರ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರನ್ನು ಹೊರತುಪಡಿಸಿ ಐದು ಸಾವಿರ ಜನರನ್ನು ಸೇರಿಸಲಿ ನೋಡೋಣ ಎಂದು ಮಾಜಿ ಸಚಿವ ವರ್ತೂರು ಆರ್.ಪ್ರಕಾಶ್ ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ವರ್ತೂರು ಪ್ರಕಾಶ್, ಸಿದ್ದರಾಮಯ್ಯ ಅವರನ್ನು ಕೋಲಾರಕ್ಕೆ ಕರೆತರಲು ಸುಮಾರು 6 ತಿಂಗಳಿಂದ ಘಟಬಂಧನ್ ನಾಯಕರು ಪ್ರಯತ್ನ ಪಟ್ಟಿದ್ದಾರೆ. ಇದೀಗ ಸಿದ್ದರಾಮಯ್ಯರನ್ನು ಕೋಲಾರಕ್ಕೆ ಕರೆತರುವ ಮೂಲಕ ನನ್ನ ಗೆಲುವಿಗೆ ರಮೇಶ್ ಕುಮಾರ್ ಅವರೇ ಮೊದಲನೇ ಮೆಟ್ಟಿಲಾಗಿದ್ದಾರೆ ಎಂದಿದ್ದಾರೆ.
ಕಾಂಗ್ರೆಸ್ ತೊರೆದ 17 ಜನ ಸಚಿವರು ರಮೇಶ್ ಕುಮಾರ್ ಮತ್ತು ಸಿದ್ದರಾಮಯ್ಯ ಅವರನ್ನು ಅಡ್ರೆಸ್ ಇಲ್ಲದಂತೆ ಮಾಡಲು ಪ್ಲಾನ್ ಮಾಡಿದ್ದಾರೆ. 2018ರಲ್ಲಿ ನಾನೂ ಪಕ್ಷವನ್ನು ಕಟ್ಟಿದ್ದೆ. ಬೇರೆಯವರನ್ನು ಸೋಲಿಸಲು ಹೋಗಿ ನಾನೇ ಸೋತು ಹೋದೆ. ಈಗ ರಮೇಶ್ ಕುಮಾರ್ ಸಹ ಅದೇ ಕೆಲಸ ಮಾಡುತ್ತಿದ್ದಾರೆ. ಆದರೆ ಕಳೆದ ಬಾರಿ ಅವರು ನನ್ನನ್ನು ಸೋಲಿಸಲಿಲ್ಲ. ನನ್ನ ಕ್ಷೇತ್ರದಲ್ಲಿ ಸೋಲಲು ನಾನೇ ಕಾರಣ ಎಂದರು.
ರಮೇಶ್ ಕುಮಾರ್ ಅವರು ಕೋಲಾರ ಕ್ಷೇತ್ರಕ್ಕೆ ಸಿದ್ದರಾಮಯ್ಯರನ್ನು ಕರೆದು ಬಲಿ ಕೊಡುವ ಮುಂಚೆ ಐದು ಸಾವಿರ ಜನರನ್ನು ಸೇರಿಸಿ ಸಭೆ ಮಾಡಲಿ. ನಾನು ಸಭೆಗೆ ಬಂದು ಅಲ್ಲೇ ಪಕ್ಕದಲ್ಲಿ ಇರುತ್ತೇನೆ. ಅಲ್ಲದೆ ಸಿದ್ದರಾಮಯ್ಯಗೆ ಕೋಲಾರಕ್ಕೆ ಬರಲು ಇಷ್ಟ ಇಲ್ಲದಿದ್ದರೂ ಅವರನ್ನು ಕರೆತಂದು ಕುರುಬ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ.
ಇನ್ನು ಕೋಲಾರ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯದ 25 ಸಾವಿರ ಮತಗಳಿವೆ. ಸಿದ್ದರಾಮಯ್ಯ ಬಂದ್ರೆ ಅಲ್ಪಸಂಖ್ಯಾತರ ಮತ ಕಾಂಗ್ರೆಸ್ ಗೆ ಬರುತ್ತೆ. ಆದ್ರೆ ಹಿಂದೂ ಸಮಾಜದವರದ್ದು 1 ಲಕ್ಷ 80 ಸಾವಿರ ಮತದಾರರಿದ್ದಾರೆ. ಜನವರಿ 9 ರಂದು ಕೋಲಾರಕ್ಕೆ ಸಿದ್ದರಾಮಯ್ಯ ಬಂದ್ರೆ ಅಂದು ನಮ್ಮದೂ ಒಂದು ಕಾರ್ಯಕ್ರಮ ಇರುತ್ತೆ. ಅವರು ನೂರು ಜನರನ್ನು ಸೇರಿಸಿದರೆ ನಾವು ಐನೂರು ಜನರನ್ನು ಸೇರಿಸುತ್ತೇವೆ. ಧಮ್ಮು ತಾಕತ್ತು ಇದ್ರೆ ಚರ್ಚ್ ಗಳಲ್ಲಿ ಅಲ್ಲ, ಮೈದಾನದಲ್ಲಿ ಕಾರ್ಯಕ್ರಮ ಮಾಡಿ ತೋರಿಸಲಿ. ಆದ್ರೆ ಬೇರೆ ಕಡೆಯಿಂದ ಕರೆದುಕೊಂಡು ಶೋ ಕೊಡಬಾರದು ಎಂದರು
ಪಂಚರತ್ನ ಕಾರ್ಯಕ್ರಮಕ್ಕೆ ಕುಮಾರಸ್ವಾಮಿ ಬಂದಾಗ ಜೆಡಿಎಸ್ ಪಕ್ಷದವರು ಹಣ ಕೊಟ್ಟು ಜನರನ್ನು ಕರೆಸಿದ್ದರು. ಕುಮಾರಣ್ಣಗೆ ಜೈ ಅಂದ್ರೆ 500 ರೂಪಾಯಿ, ಕಳಶ ಹೊತ್ತ ಮಹಿಳೆಯರಿಗೆ 1 ಸಾವಿರ ರೂಪಾಯಿ ಕೊಟ್ಟಿದ್ದಾರೆ. ನಾಲ್ಕು ತಲೆಮಾರುಗಳಿಗೆ ಆಗುವಷ್ಟು ದುಡ್ಡು ಜೆಡಿಎಸ್ ಬಳಿ ಇದೆ. ಕಾಂಗ್ರೆಸ್ ಪಕ್ಷದವರಾಗಲಿ, ಜೆಡಿಎಸ್ ಪಕ್ಷದವರಾಗಲಿ ಒಂದು ರೂಪಾಯಿ ಹಣ ಕೊಡದೆ ಜನರನ್ನು ಸೇರಿಸಿ ಕಾರ್ಯಕ್ರಮ ಮಾಡಲಿ ನೋಡೋಣ. ಆದ್ರೆ ನಾನು ಯಾವುದೇ ಹಣ ಕೊಟ್ಟು ಕಾರ್ಯಕ್ರಮಗಳನ್ನು ಮಾಡುತ್ತಿಲ್ಲ. ನನ್ನ ಗೆಲುವಿಗಾಗಿ ಜನರೇ ಹಣ ಖರ್ಚು ಮಾಡಿ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.