ವಿಧಾನ ಪರಿಷತ್ ಸದಸ್ಯರಿಗೆ ಬೀಳ್ಕೊಡುಗೆ: ಮೇಲ್ಮನೆ ಅಗತ್ಯತೆ ಬಗ್ಗೆ ಸಿಂಹಾವಲೋಕನ ಅಗತ್ಯವೆಂದ ಸಿಎಂ ಬೊಮ್ಮಾಯಿ
ವಿಧಾನ ಪರಿಷತ್ ಅಗತ್ಯತೆ ಹಾಗೂ ವಿಧಾನ ಪರಿಷತ್ ಸದಸ್ಯರ ಕಾರ್ಯಗಳ ಬಗ್ಗೆ ಸಿಂಹಾವಲೋಕನ ಮಾಡುವ ಆಗತ್ಯ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಅಭಿಪ್ರಾಯಪಟ್ಟಿದ್ದಾರೆ.
Published: 05th January 2022 03:01 PM | Last Updated: 05th January 2022 03:37 PM | A+A A-

ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು: ವಿಧಾನ ಪರಿಷತ್ ಅಗತ್ಯತೆ ಹಾಗೂ ವಿಧಾನ ಪರಿಷತ್ ಸದಸ್ಯರ ಕಾರ್ಯಗಳ ಬಗ್ಗೆ ಸಿಂಹಾವಲೋಕನ ಮಾಡುವ ಆಗತ್ಯ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಅಭಿಪ್ರಾಯಪಟ್ಟಿದ್ದಾರೆ.
ಇಂದು ವಿಕಾಸಸೌಧದಲ್ಲಿ ನಡೆದ ನಿವೃತ್ತ ಮೇಲ್ಮನೆ ಸದಸ್ಯರ ಬೀಳ್ಕೊಡುಗೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಿಎಂ ಬೊಮ್ಮಾಯಿ, ವಿಧಾನ ಪರಿಷತ್ ಡ್ಯೂಯಲ್ ಕ್ಯಾಮೆರಾ ಸಿಸ್ಟಮ್ನಂತೆ. ವಿಧಾನ ಪರಿಷತ್ ಗೆ ದಿವ್ಯ ಪರಂಪರೆ ಇದೆ. ಮಹತ್ವದ ಚರ್ಚೆ ಆಗಿದೆ. ಈ ಬಾರಿ ಸದನದಲ್ಲಿ 7-8 ದಿನಗಳು ವಿಶ್ವವಿದ್ಯಾಲಯದ ಬಿಲ್ ಬಗ್ಗೆ ಚರ್ಚೆ, ಹಲವಾರು ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆದಿವೆ ಎಂದರು.
ಇದನ್ನು ಓದಿ: ಬೆಳಗಾವಿ ಅಧಿವೇಶನದಲ್ಲಿ ಎಸ್ಆರ್ ಪಾಟೀಲ್ ವಿದಾಯ ಭಾಷಣ; 2 ದಶಕಗಳ ನಂತರ ಮೇಲ್ಮನೆಯಿಂದ ಹೊರನಡೆದ ಮುತ್ಸದ್ದಿ
ವಿವಿಧ ಕ್ಷೇತ್ರದ ಪ್ರಮುಖರು ವಿಧಾನ ಪರಿಷತ್ ಗೆ ಆಯ್ಕೆಯಾಗಿ ಬಂದು ತಮ್ಮ ಅನುಭವಗಳನ್ನು ಇಲ್ಲಿ ಧಾರೆ ಎರೆಯುತ್ತಾರೆ. ಹಲವಾರು ಸಂಧರ್ಭದಲ್ಲಿ ವಿಧಾನ ಪರಿಷತ್ ಬೇಕೇ? ಎಂಬುದರ ಬಗ್ಗೆ ಚರ್ಚೆ ಆಗುತ್ತದೆ. ರಾಜಕಾರಣಕ್ಕೆ ನಿವೃತ್ತಿ, ವಿದ್ಯಾರ್ಹತೆ ಇಲ್ಲ. ಇಂದು ನಿವೃತ್ತರಾಗ್ತಿರುವವರನ್ನು ನಿವೃತ್ತಿ ಎಂದು ಪರಿಗಣಿಸಲಾಗದು. ರಾಜಕಾರಣದಲ್ಲಿ ರಿಲವೆಂಟ್ ಆಗಿರುವುದು ಮುಖ್ಯ. ಕ್ರಿಯಾಶೀಲತೆಯಿಂದ ಮಾತ್ರ ರಾಜಕಾರಣದಲ್ಲಿ ಬೇರೆಬೇರೆ ಆಯಾಮಗಳಿಂದ ಪುನರಾಯ್ಕೆ ಆಗಲು ಸಾಧ್ಯವಿದೆ. ವಿಧಾನ ಪರಿಷತ್ನಲ್ಲಿ ವಿಧಾನ ಸಭೆಗೆ ಆಯ್ಕೆ ಆಗುವಂತೆ ಜನರ ಹೃದಯದಲ್ಲಿ ಸ್ಥಾನ ಗಳಿಸುವುದೂ ಕೂಡ ಅಷ್ಟೇ ಮುಖ್ಯವಾಗಿದೆ ಎಂದು ಸಿಎಂ ಮಾರ್ಮಿಕವಾಗಿ ನುಡಿದರು.
ನಾನೂ ಕೂಡ ವಿಧಾನ ಪರಿಷತ್ ಸದಸ್ಯನಾಗಿದ್ದವನು. ನಾವು ಹೋದಾಗ ಹಂಗೆ ಹೋಗಿದ್ದು, ಈ ರೀತಿ ಕಾರ್ಯಕ್ರಮ ಮಾಡಿರಲಿಲ್ಲ. ಆಗಿನ ಸಭಾಪತಿಯವರಿಗೆ ಈ ರೀತಿ ಬೀಳ್ಕೊಡುಗೆ ಕಾರ್ಯಕ್ರಮ ಮಾಡಬೇಕು ಎಂದೆನಿಸಿರಲಿಲ್ಲ ಎಂದು ಸೂಚ್ಯವಾಗಿ ಸಿಎಂ ಹೇಳಿದರು.
ಇದನ್ನು ಓದಿ: 'ಚಿಂತಕರ ಚಾವಡಿ' ಪರಿಷತ್ ಈಗ 'ಉಳ್ಳವರ ಮನೆ'; ಮೇಲ್ಮನೆ ಘನತೆ, ಪಾವಿತ್ರ್ಯತೆ ಕಳೆದುಹೋಗುತ್ತಿದೆ: ರಘು ಆಚಾರ್
ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ ಆಯ್ಕೆಯಾಗಿದ್ದ 25 ಸದಸ್ಯರ ಅವಧಿ ಪೂರ್ಣಗೊಂಡ ಹಿನ್ನಲೆಯಲ್ಲಿ ಅವರುಗಳನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರಿಂದು ಬೀಳ್ಕೊಟ್ಟರು.
ವಿಕಾಸ ಸೌಧದಲ್ಲಿ ನಡೆದ ಸಮಾರಂಭದಲ್ಲಿ ಸರ್ಕಾರಿ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಠ, ವಿಪಕ್ಷ ಮುಖ್ಯ ಸಚೇತಕ ನಾರಾಯಣ ಸ್ವಾಮಿ, ಆಡಳಿತ ಪಕ್ಷ ಬಿಜೆಪಿಯ ಮಹಾಂತೇಶ್ ಕವಟಗಿಮಠ ಮತ್ತು ಸುನೀಲ್ ಸುಬ್ರಮಣಿ, ವಿಪಕ್ಷ ಕಾಂಗ್ರೆಸ್ ನಾಯಕ ಎಸ್.ಆರ್.ಪಾಟೀಲ್,ಮಾಜಿ ಸಭಾಪತಿ ಪ್ರತಾಪ ಚಂದ್ರ ಶೆಟ್ಟಿ,ಸದಸ್ಯರಾದ ವಿಜಯ್ ಸಿಂಗ್, ಶ್ರೀಕಾಂತ್ ಘೋಟ್ನೇಕರ್, ಬಸವರಾಜ ಪಾಟೀಲ್ ಇಟಗಿ,ಕೆ. ಸಿ. ಕೊಂಡಯ್ಯ, ರಘು ಆಚಾರ್.ಆರ್, ಪ್ರಸನ್ನಕುಮಾರ್, ಪ್ರತಾಪ ಚಂದ್ರ ಶೆಟ್ಟಿ, ಎಂ.ಎ. ಗೋಪಾಲಸ್ವಾಮಿ,ಎಂ ನಾರಾಯಣಸ್ವಾಮಿ, ಆರ್. ಧರ್ಮಸೇನ ಹಾಗೂ ಜೆಡಿಎಸ್ನ ಕಾಂತರಾಜ್, ಅಪ್ಪಾಜಿ ಗೌಡ, ಸಂದೇಶ್ ನಾಗರಾಜ್, ಪಕ್ಷೇತರ ವಿವೇಕ್ ರಾವ್ ಪಾಟೀಲ್ರನ್ನು ಬೀಳ್ಕೊಡಲಾಯಿತು.