ಪ್ರಧಾನಿ ಮೋದಿ ಭದ್ರತಾ ಲೋಪ ವಿಚಾರ ಕುರಿತು ಬಿಜೆಪಿ ಜನರ ಹಾದಿ ತಪ್ಪಿಸುತ್ತಿದೆ: ಮಲ್ಲಿಕಾರ್ಜುನ ಖರ್ಗೆ
ಪಂಜಾಬ್ನಲ್ಲಿ ದಲಿತರ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಧಾನಿ ಮೋದಿಯವರ ಭದ್ರತಾ ಲೋಪ ವಿಚಾರವನ್ನು ರಾಜಕೀಯಗೊಳಿಸುತ್ತಿದೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಗುರುವಾರ ಆರೋಪಿಸಿದ್ದಾರೆ.
Published: 07th January 2022 11:35 AM | Last Updated: 07th January 2022 12:06 PM | A+A A-

ಮಲ್ಲಿಕಾರ್ಜುನ ಖರ್ಗೆ
ಬೆಂಗಳೂರು: ಪಂಜಾಬ್ನಲ್ಲಿ ದಲಿತರ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಧಾನಿ ಮೋದಿಯವರ ಭದ್ರತಾ ಲೋಪ ವಿಚಾರವನ್ನು ರಾಜಕೀಯಗೊಳಿಸುತ್ತಿದೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಗುರುವಾರ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ ಘಟನೆಯನ್ನು ದುರದೃಷ್ಟಕರ ಎಂದು ಬಣ್ಣಿಸಿದ ಖರ್ಗೆ ಅವರು, ಘಟನೆಗೆ ಎಸ್ಪಿಜಿ, ಐಬಿ ಮತ್ತು ಕೇಂದ್ರೀಯ ಏಜೆನ್ಸಿಗಳು ಹೊಣೆಯಾಗಿವ, ಆದರೆ ಪಂಜಾಬ್ ಸರ್ಕಾರವನ್ನು ದೂಷಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿಗೆ ಭದ್ರತಾ ಲೋಪ: ಗೃಹ ಸಚಿವಾಲಯದಿಂದ 3 ಸದಸ್ಯ ಸಮಿತಿ ರಚನೆ
ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಮತ್ತು ಅವರ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಸಲುವಾಗಿ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಹವಾಮಾನ ವೈಪರೀತ್ಯದ ಬಗ್ಗೆ ರಾಜ್ಯ ಸರ್ಕಾರವು ಪ್ರಧಾನಮಂತ್ರಿಗಳ ಕಚೇರಿಗೆ ಮೊದಲೇ ಮಾಹಿತಿ ನೀಡಿದ್ದರೂ, ಐಬಿ ನಿರ್ದೇಶಕರು ಕಾರ್ಯಕ್ರಮವನ್ನು ನಿಗದಿತವಾಗಿಯೇ ಮುಂದುವರಿಸಿದ್ದಾರೆ. ಕೊನೆ ಗಳಿಗೆಯಲ್ಲಿ ನಿರ್ಧಾರ ಬದಲಾಯಿಸಿ ರಸ್ತೆ ಮಾರ್ಗವಾಗಿ ತೆರಳಲು ನಿರ್ಧರಿಸಿದ್ದಾರೆ. 70,000 ಜನ ಸೇರುವ ನಿರೀಕ್ಷೆ ಹೊಂದಿದ್ದ ಪ್ರಧಾನಿ ಮೋದಿ 750 ಮಂದಿಯೂ ಸೇರದ ಹಿನ್ನೆಲೆಯಲ್ಲಿ ವಿಚಲಿತರಾಗಿ ಆ ಸಿಟ್ಟಿನಿಂದ ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸಿದ್ದಾರೆಂದು ತಿಳಿಸಿದ್ದಾರೆ.
ಬಳಿಕ ನಾನು ಜೀವಂತವಾಗಿ ವಿಮಾನ ನಿಲ್ದಾಣ ತಲುಪಿದ್ದಕ್ಕೆ ನಿಮ್ಮ ಮುಖ್ಯಮಂತ್ರಿಯವರಿಗೆ ಧನ್ಯವಾದ ತಿಳಿಸಿ ಎಂಬ ಮೋದಿಯವರ ಹೇಳಿಕೆ ಕುರಿತು ಮಾತನಾಡಿ, ಹಿಂದಿನ ಪ್ರಧಾನಿಗಳಿಗೆ ಹೋಲಿಸಿದರೆ ಮೋದಿಯವರು 10 ಪಟ್ಟು ಹೆಚ್ಚು ಭದ್ರತೆಯನ್ನು ಪಡೆದಿದ್ದಾರೆ. ದುರದೃಷ್ಟವಶಾತ್ ಇದೀಗ ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆಂದು ಹೇಳಿದ್ದಾರೆ.
ರೈತರ ಸಮಸ್ಯಗಳ ಕುರಿತು ಪಂಜಾಬ್ ಸರ್ಕಾರದಲ್ಲಿ ಅಸ್ಥಿರ ಪರಿಸ್ಥಿತಿ ಎದುರಾಗಿದೆ. ಇದರಿಂದಾಗಿ ಸ್ವಾಭಾವಿಕವಾಗಿಯೇ ಪ್ರಧಾನಿ ಮೋದಿಯವರು ಬಂದಾಗ ಕೆಲವರು ಮನವಿ ಪತ್ರ ಸಲ್ಲಿಸಲು ಸ್ಥಳಕ್ಕೆ ಬಂದಿರಬಹುದು, ಆದರೂ ಅವರನ್ನು ಸ್ಥಳ ಚದುರಿಸಲು ರಾಜ್ಯ ಸರ್ಕಾರ ಪ್ರಯತ್ನ ನಡೆಸಿತ್ತು. ಪ್ರಧಾನಿ ಬೆಂಗಾವಲು ವಾಹನದ ಬಳಿ ಯಾರೂ ಇರಲಿಲ್ಲ, ಆದರೂ ರಾಜ್ಯ ಸರ್ಕಾರವನ್ನು ದೂಷಿಸಲಾಗುತ್ತಿದೆ. ಪ್ರಧಾನಮಂತ್ರಿಗಳ ಕಚೇರಿ, ಸರ್ಕಾರ ಮತ್ತು ಬಿಜೆಪಿ ನಾಯಕರು ಈ ವಿಚಾರವನ್ನು ರಾಜಕೀಯಗೊಳಿಸಲು ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ಭದ್ರತಾ ಲೋಪ ‘ದೊಡ್ಡ ನಾಟಕ’: ನವಜೋತ್ ಸಿಂಗ್ ಸಿಧು
ಭದ್ರತಾ ಲೋಪ ವಿಚಾರವನ್ನು ಸರ್ಕಾರ ಲಘುವಾಗಿ ತೆಗೆದುಕೊಂಡಿಲ್ಲ. ಪಂಜಾಬ್ ಸರ್ಕಾರವು ಅದರ ತನಿಖೆಗಾಗಿ ಸಮಿತಿಯನ್ನು ರಚಿಸಿದೆ ಮತ್ತು ರಾಜ್ಯ ಸರ್ಕಾರದ ಕಡೆಯಿಂದ ಯಾವುದೇ ಭದ್ರತಾ ಲೋಪವಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಬೇಜವಾಬ್ದಾರಿ ಹೇಳಿಕೆ ನೀಡುವ ಮೂಲಕ ಪಂಜಾಬ್ ಜನತೆಗೆ ಅವಮಾನ ಮಾಡಬೇಡಿ ಎಂದು ಬಿಜೆಪಿ ನಾಯಕರಿಗೆ ತಿಳಿಸಿದ್ದಾರೆ.
ಇದೇ ವೇಳೆ ತಮ್ಮನ್ನು ಇಂಗ್ಲೀಷ್ ನಲ್ಲಿ ಮಾತನಾಡಲು ಒತ್ತಾಯಿಸಿದ ಪತ್ರಕರ್ತರಿಗೆ ಕನ್ನಡ ಕಲಿಯುವಂತೆ ಸಲಹೆ ನೀಡಿದ ಖರ್ಗೆ ಅವರು. “ನೀವು ತಮಿಳುನಾಡಿಗೆ ಹೋದಾಗ ಎಂಕೆ ಸ್ಟಾಲಿನ್ ಪತ್ರಿಕಾಗೋಷ್ಠಿಯಲ್ಲಿ ಇಂಗ್ಲಿಷ್ನಲ್ಲಿ ಮಾತನಾಡುತ್ತಾರೆಯೇ ಅಥವಾ ಪತ್ರಿಕಾಗೋಷ್ಠಿಯಲ್ಲಿ ಉದ್ಧವ್ ಠಾಕ್ರೆ ಇಂಗ್ಲಿಷ್ನಲ್ಲಿ ಮಾತನಾಡುತ್ತಾರೆಯೇ? (ಉದ್ಧವ್ ಠಾಕ್ರೆ) ಅವರು, ತಮಿಳು, ಮರಾಠಿ ಭಾಷೆಯಲ್ಲಿ ಮಾತನಾಡುತ್ತಾರೆ, ನೀವು ಅದನ್ನು ಒಪ್ಪಿಕೊಳ್ಳುತ್ತೀರಿ, ಆದರೆ ನಾನು ಕನ್ನಡದಲ್ಲಿ ಮಾತನಾಡುವಾಗ ಅದು ಕೂಡ ನನ್ನ ಹೈದರಾಬಾದ್-ಕರ್ನಾಟಕ ಕನ್ನಡದಲ್ಲಿ ಮಾತನಾಡಿದರೇಕೆ ನನ್ನನ್ನು ಇಂಗ್ಲಿಷ್ನಲ್ಲಿ ಮಾತನಾಡುವಂತ ಒತ್ತಾಯಿಸುತ್ತೀರಿ ಎಂದು ಪ್ರಶ್ನಿಸಿದರು.