ಬೆಂಗಳೂರು: ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಶಿವಮೊಗ್ಗಕ್ಕೆ ಪ್ರಯಾಣ ಮಾಡಬೇಕಿತ್ತು. ಆದರೆ, ಇದ್ದಕ್ಕಿದ್ದಂತೆ ಶಿವಮೊಗ್ಗ ಭೇಟಿಯನ್ನು ಕೊನೆ ಕ್ಷಣದಲ್ಲಿ ರದ್ದುಗೊಳಿಸಿದ ಡಿಕೆಶಿ, ತಮ್ಮ ವಕೀಲರೊಂದಿಗೆ ನ್ಯಾಯಾಲಯಕ್ಕೆ ತೆರಳಿದ್ದಾರೆ.
ಇದಕ್ಕೂ ಮುನ್ನ ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಡಿ ಕೆ ಶಿವಕುಮಾರ್, ನಾನು ಸಿದ್ದರಾಮಯ್ಯ ಅವ್ರು ಒಟ್ಟಿಗೆ ಶಿವಮೊಗ್ಗಕ್ಕೆ ತೆರಳಬೇಕಿತ್ತು. ಕೋರ್ಟ್ ಗೆ ತೆರಳಬೇಕಿರುವ ಕಾರಣ ರದ್ದುಗೊಳಿಸಿದ್ದೇನೆ. ಜೊತೆಗೆ ನಮ್ಮ ಕ್ಷೇತ್ರದಲ್ಲಿ ಆತ್ಮೀಯರೊಬ್ಬರು ತೀರಿಕೊಂಡಿದ್ದಾರೆ. ಮಧ್ಯಾಹ್ನ ನಂತರ ಅಲ್ಲಿಗೆ ತೆರಳುತ್ತೇನೆ ಎಂದು ಹೇಳಿದರು.
ಬಿಜೆಪಿಯವರು ನಮಗೆ ತುಂಬಾ ಕಿರುಕುಳ ಕೊಡುತ್ತಿದ್ದಾರೆ. ಯಾಕೆ ನಮ್ಮ ನಾಯಕರುಗಳಿಗೆ ಈ ರೀತಿ ಕಿರುಕುಳ ಕೊಡುತ್ತಿದ್ದಾರೋ ಗೊತ್ತಿಲ್ಲ. ಅದೆಲ್ಲಾ ಮಾತನಾಡಬೇಕು. ಬೇರೆ ಬೇರೆ ವಿಚಾರಗಳ ಬಗ್ಗೆ ಚರ್ಚೆ ಮಾಡುವುದು ಇದೆ. ಆದ್ದರಿಂದ ಶಿವಮೊಗ್ಗಕ್ಕೆ ಹೋಗಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷರು ತಿಳಿಸಿದರು.
ಬಳಿಕ, ಕರ್ನಾಟಕದಲ್ಲಿ ಬುಲ್ಡೋಜರ್ ಮಾಡಲು ಸಾಧ್ಯವಿಲ್ಲ ಎಂದ ಅವರು, ಉತ್ತರ ಪ್ರದೇಶದಲ್ಲಿ ಮಾಡಿದರು ಅಂತ ಇಲ್ಲಿ ಮಾಡಲು ಆಗುವುದಿಲ್ಲ. ಇಲ್ಲಿ ಕಾನೂನು ಇದೆ. ಚಿಕ್ಕಮಗಳೂರಿನಲ್ಲಿ ಬುಲ್ಡೋಜರ್ ಮಾಡಲು ಮುಂದಾದರೆ ನಾವು ಹೋಗಿ ಅಲ್ಲೆ ಮಲಗುತ್ತೇವೆ. ಇವರು ಉದ್ದೇಶಪೂರ್ವಕವಾಗಿ ಅಲ್ಪಸಂಖ್ಯಾತರನ್ನ ಟಾರ್ಗೆಟ್ ಮಾಡುತ್ತಿದ್ದಾರೆ. ಹೆದರಿಸಬೇಕು ಬೆದರಿಸಬೇಕು ಅಂತ ಸುಮ್ಮನೆ ಕಿರುಕುಳ ಕೊಡ್ತಿದಾರೆ. ಎಲ್ಲಾ ಜಾತಿ ಮೇಲೆ ಮಾಡೋಕೆ ಹೊರಟಿದ್ದಾರೆ. ಅದಕ್ಕೆಲ್ಲ ಇಲ್ಲಿ ಅವಕಾಶ ಇಲ್ಲಾ ಎಂದು ಹೇಳಿದರು.
Advertisement