ಕಾಂಗ್ರೆಸ್ ಮುಳುಗುತ್ತಿರುವ ಹಡಗು, ನಾನ್ಯಾಕೆ ಬೇರೆಯವರ ಮನೆ ಕದ ತಟ್ಟಲಿ; ಮೋಟಮ್ಮಗೆ ಅರಳು-ಮರಳು; ಎಂ.ಪಿ.ಕೆ ತಿರುಗೇಟು

ದೇಶ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು, ನಾನ್ಯಾಕೆ ಕಾಂಗ್ರೆಸ್ ಪಕ್ಷದ ಮನೆ ಬಾಗಿಲು ತಟ್ಟಲಿ ಎಂದು ಮಾಜಿ ಸಚಿವೆ ಮೋಟಮ್ಮ ನವರಿಗೆ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಮೋಟಮ್ಮ
ಮೋಟಮ್ಮ

ಬೆಂಗಳೂರು: ದೇಶ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು, ನಾನ್ಯಾಕೆ ಕಾಂಗ್ರೆಸ್ ಪಕ್ಷದ ಮನೆ ಬಾಗಿಲು ತಟ್ಟಲಿ ಎಂದು ಮಾಜಿ ಸಚಿವೆ ಮೋಟಮ್ಮ ನವರಿಗೆ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾಂಗ್ರೆಸ್ ಹಾಗೂ ಇತರ ಪಕ್ಷಗಳ ನಾಯಕರು ಪಕ್ಷ ಸೇರುತ್ತೇನೆಂದು ನನ್ನ ಹೆಸರು ಜಪಿಸಿದರೆ ಅದಕ್ಕೆ ನಾನು ಕಾರಣಕರ್ತನಲ್ಲ, ಹೊಣೆಗಾರನ್ನೂ ಅಲ್ಲ. ಭಾರತೀಯ ಜನತಾ ಪಾರ್ಟಿ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದೆ, ಗೌರವಿಸಿದೆ, ಸನ್ಮಾನಿಸಿದೆ. ಬಿಜೆಪಿಯಲ್ಲಿ ಮೂರು ಬಾರಿ ಶಾಸಕನಾಗಿದ್ದೇನೆ. ಇದು ಪಕ್ಷ ಕೊಟ್ಟ ಗೌರವವಾಗಿದ್ದು, ಇದನ್ನು ಅರ್ಥಮಾಡಿಕೊಳ್ಳದ ಮೋಟಮ್ಮನವರು ಅರ್ಥಹೀನ ಹೇಳಿಕೆ ನೀಡಿರುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ತಿಳಿಸಿದ್ದಾರೆ.

ಇನ್ನೇನು ಕೆಲ ದಿನಗಳಲ್ಲಿ ರಾಜ್ಯ ಸರ್ಕಾರದ ಮಂತ್ರಿಮಂಡಲ ರಚನೆ ಯಾಗಲಿದ್ದು, ನನಗೆ ಆಗದ ಕಾಣದ ಕೈಗಳು ನಿಮ್ಮ ಸಣ್ಣತನದ ಹೇಳಿಕೆಗಳಿಗೆ ಪ್ರಚೋದನೆ ನೀಡುವ ಮೂಲಕ ಸಚಿವ ಸ್ಥಾನ ತಪ್ಪಿಸುವ ಪ್ರಯತ್ನ ನಡೆಸಿದ್ದರೆ ಅಸಾಧ್ಯವಾದದು ಎಂದು ತಿರುಗೇಟು ನೀಡಿದ್ದಾರೆ.

ಮಂತ್ರಿಮಂಡಲದ ರಚನೆಯ ಸಂದರ್ಭದಲ್ಲಿ ಇಲ್ಲಸಲ್ಲದ ಹೇಳಿಕೆಗಳನ್ನು ನಿಮ್ಮ ಮುಖಾಂತರ ಕೊಡಿಸುತ್ತಿದ್ದಾರೆ. ನಿಮ್ಮ ವ್ಯಕ್ತಿತ್ವಕ್ಕೆ ಇದು ಶೋಭೆ ತರುವುದಿಲ್ಲ, ನೀವು ನಿಜವಾದ ಜನಪರ ನಾಯಕಿಯಾಗಿದ್ದರೆ ನನ್ನ ವಿರುದ್ಧ ಚುನಾವಣೆ ಸ್ಪರ್ಧಿಸಿ ಗೆಲ್ಲಿ, ಆಗ ಇದಕ್ಕೆಲ್ಲ ಉತ್ತರ ಸಿಕ್ಕಂತಾಗುತ್ತದೆ. ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಸಂಪೂರ್ಣ ಮತದಾರರು ಹಾಗೂ ನನ್ನೆಲ್ಲ ನಾಯಕರು, ಕಾರ್ಯಕರ್ತ ಮಿತ್ರರ ಆಶೀರ್ವಾದ ಸದಾ ನನ್ನ ಮೇಲೆ ಇರುವುದು ನಿಮಗೆ ಸಹಿಸಿಕೊಳ್ಳಲು ಆಗುವುದಿಲ್ಲ. ನಿಮ್ಮ ಉದ್ದೇಶಪೂರ್ವಕ ಹೇಳಿಕೆಗಳಿಂದ ತಕ್ಷಣವೇ ಹಿಂದೆ ಸರಿಯುವುದು ಇನ್ನೂ ಶೋಭೆ ತರಲಿದೆ ಎಂದು ಹೇಳಿದ್ದಾರೆ.

ಮಾಜಿ ಸಚಿವೆ ಮೋಟಮ್ಮ ನಿನ್ನೆ ಮಾಧ್ಯಮದವರ ಜತೆ ಮಾತನಾಡಿ, ಪಕ್ಷದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರಿಗೆ ಟಿಕೇಟ್ ನೀಡುವುದನ್ನು ವಿರೋದಿಸುತ್ತೇನೆ. ಅವರು ಪಕ್ಷಕ್ಕೆ ಬಂದರೆ ಸರಿ ಇರುವುದಿಲ್ಲ. ಅವರಿಗೆ ಕೊಡುವ ಬದಲು ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಟಿಕೇಟ್ ನೀಡಿ ಎಂದು ಹೇಳಿಕೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com