
ನಾಗೇಶ್
ಬೆಂಗಳೂರು: ಬಿಜೆಪಿ ಜೊತೆ ಕೈಜೋಡಿಸಿದ್ದ ಮುಳಬಾಗಿಲು ಪಕ್ಷೇತರ ಶಾಸಕ ಎಚ್.ನಾಗೇಶ್ ಈಗ ಮತ್ತೆ ಕಾಂಗ್ರೆಸ್ ಕದ ತಟ್ಟುತ್ತಿದ್ದಾರೆ ಎಂಬ ಅನುಮಾನ ರಾಜಕೀಯ ವಲಯದಲ್ಲಿ ಮೂಡಲು ಆರಂಭವಾಗಿದೆ.
ಬಿಎಸ್ವೈ ಸರಕಾರದಲ್ಲಿ ಸಚಿವರಾಗಿದ್ದ ಎಚ್.ನಾಗೇಶ್, ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವುದು ಅನುಮಾನಕ್ಕೆ ಕಾರಣವಾಗಿದೆ. ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಜೊತೆ ಎಚ್.ನಾಗೇಶ್, ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಆಗಮಿಸಿದ್ದರು. ಕಾಂಗ್ರೆಸ್ ಸೇರ್ಪಡೆಯಾಗುವ ಬಗ್ಗೆ ಮಾತುಕತೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಇದನ್ನು ಓದಿ: ನಾಳೆ ಸಿಎಂ ಬೊಮ್ಮಾಯಿ ದೆಹಲಿಗೆ ಪ್ರಯಾಣ: ಸಂಪುಟ ವಿಸ್ತರಣೆ ಅನಿಶ್ಚಿತತೆಗೆ ತೆರೆ ಬೀಳುವ ಸಾಧ್ಯತೆ
ಸಿದ್ದರಾಮಯ್ಯ ಭೇಟಿ ಬಳಿಕ ಮಾತನಾಡಿದ ಎಚ್.ನಾಗೇಶ್, ವರುಣಾ ಕ್ಷೇತ್ರದ ಕೆಲಸದ ನಿಮಿತ್ತ ಬಂದಿದ್ದೆ. ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಬಂದಿದ್ದೆ. ನಮ್ಮ ಸಂಬಂಧಿಯೊಬ್ಬರ ಕೆಲಸ ಆಗುವುದಿತ್ತು. ಹಾಗಾಗಿ ಅವರ ಮಗನ ಭೇಟಿಗೆ ಬಂದೆ. ಆದರೆ ಅವರಿಲ್ಲ ಹೋಗ್ತಿದ್ದೇನೆ ಎಂದು ತಿಳಿಸಿದರು.
ನಾನು ಬಿಜೆಪಿ ಜೊತೆಯೇ ಗುರ್ತಿಸಿಕೊಂಡಿದ್ದೇನೆ. ಆದರೆ ಮುಂದೆ ಟಿಕೆಟ್ ಕೊಡಬೇಕಲ್ವೇ?. ನೋಡೋಣ ಇನ್ನೂ ಚುನಾವಣೆಗೆ ಸಮಯವಿದೆ, ಕ್ಷೇತ್ರದ ಜನ ಏನ್ ಹೇಳ್ತಾರೆ ಅದರಂತೆ ಮಾಡ್ತೇನೆ ಎಂದು ಕಾಂಗ್ರೆಸ್ ಸೇರ್ಪಡೆ ಬಗ್ಗೆ ನಾಗೇಶ್ ಧ್ವಂದ್ವ ಹೇಳಿಕೆ ನೀಡಿದರು.
ಸಿದ್ದರಾಮಯ್ಯ ಅವರು ಪ್ರತಿಪಕ್ಷದ ನಾಯಕರು.. ಹಾಗಾಗಿ ಅವರಿಗೆ ಗೌರವ ಕೊಡಲು ಬಂದೆ. ಬಂಗಾರಪೇಟೆ ಶಾಸಕರು ನಮ್ಮವರೇ. ಹಾಗಾಗಿ ಅವರ ಜೊತೆ ಇಲ್ಲಿಗೆ ಬಂದೆ ಎಂದರು.
ಸಚಿವ ಸ್ಥಾನದಿಂದ ಕೈಬಿಟ್ಟ ಕುರಿತು ಪ್ರತಿಕ್ರಿಯಿಸಿದ ನಾಗೇಶ್, ಆಗ ಮುಂದೆ ಕೊಡ್ತೇವೆ ಎಂದು ಭರವಸೆ ಕೊಟ್ಟಿದ್ದರು. ಈಗ ಆ ಸಮಯ ಬಂದಿದೆ. ಏನು ಮಾಡ್ತಾರೆ ನೋಡೋಣ. ಸಚಿವ ಸ್ಥಾನ ಕೊಟ್ಟರೆ ಯಾರಿಗೆ ಬೇಡ ಹೇಳಿ. ನಾನು ಕಾಂಗ್ರೆಸ್ ಸೇರುವ ಬಗ್ಗೆ ಇನ್ನು ಚರ್ಚಿಸಿಲ್ಲ. ಕ್ಷೇತ್ರದ ಜನರು ಏನು ಹೇಳ್ತಾರೆ ಆಮೇಲೆ ನಿರ್ಧರಿಸೋಣ ಎಂದು ಎಚ್.ನಾಗೇಶ್ ತಿಳಿಸಿದರು.
ಬಳಿಕ ಮಾತನಾಡಿದ ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ, ನಾಗೇಶ್ ಅವರು ನಮ್ಮ ಸಂಬಂಧಿಕರು. ನನ್ನ ಜೊತೆ ಅವರು ಬರಲಿಲ್ಲ. ಇಲ್ಲಿ ಇಬ್ಬರೂ ಭೇಟಿಯಾದೆವು. ಅವರು ಸಿದ್ದರಾಮಯ್ಯ ಮಗನನ್ನ ನೋಡೋಕೆ ಬಂದ್ರು. ಕಾಂಗ್ರೆಸ್ ಸೇರುವ ಬಗ್ಗೆ ಏನೂ ಪ್ರತಿಕ್ರಿಯಿಸದೆ ನಗುತ್ತಲೇ ನಾರಾಯಣಸ್ವಾಮಿ ಹೊರಟ ಹೋದರು.