ಮೈಸೂರು: ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳನ್ನು ಸೋಲಿಸಲು ಪಕ್ಷದ ನಾಯಕರು ಒಗ್ಗಟ್ಟಾಗಬೇಕು ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಕರೆ ಗುರುವಾರ ನೀಡಿದರು.
ಅಲ್ಪಕಾಲದ ಅನಾರೋಗ್ಯದಿಂದ ಚೇತರಿಸಿಕೊಂಡಿರುವ ದೇವೇಗೌಡ ಅವರು, ಎರಡು ದಿನಗಳ ಮೈಸೂರಿನಲ್ಲಿ ನಡೆಯುತ್ತಿರುವ ಕಾರ್ಯಾಗಾರದಲ್ಲಿ ಪಾಲ್ಗೊಂಡರು.
ಈ ವೇಳೆ ಮಾತನಾಡಿದ ಅವರು, ಜೆಡಿಎಸ್ನಲ್ಲಿನ ಒಗ್ಗಟ್ಟು ಎರಡೂ ರಾಷ್ಟ್ರೀಯ ಪಕ್ಷಗಳಿಗೆ ವಿನಾಶ ತಂದೊಡ್ಡಲಿದೆ. ನನ್ನ ಮಗನನ್ನು ಮುಖ್ಯಮಂತ್ರಿ ಮಾಡಲು ಮಾತ್ರವಲ್ಲದೆ, ಪಕ್ಷವನ್ನು ಉಳಿಸಲು ಮುಂದಿನ ಚುನಾವಣೆ ವೇಳೆ ಸಕ್ರಿಯವಾಗಿ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದರು.
ಇದೇ ವೇಳೆ ಎಸ್ಸಿ/ಎಸ್ಟಿ ಮೀಸಲಾತಿ ಹೆಚ್ಚಳ ಕುರಿತು ಲಾಭ ಪಡೆದುಕೊಳ್ಳಲು ಯತ್ನಿಸುತ್ತಿರುವ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ವಿರುದ್ಧ ದೇವೇಗೌಡ ಅವರು ಕಿಡಿಕಾರಿದರು.
ಪ್ರತಿ ವರ್ಗವನ್ನೂ ಗುರುತಿಸಿದ ವ್ಯಕ್ತಿ ಇದ್ದರೆ ಅದು ನಾನು. ಇದು ಅಹಂಕಾರವಲ್ಲ. ಸತ್ಯ ಹೇಳಲು ಯಾರ ಮುಂದೆ ಬೇಕಾದರೂ ನಿಲ್ಲಬಲ್ಲೆ. ಯಾವ ಆತಂಕವೂ ನನಗಿಲ್ಲ. ಮುಸ್ಲಿಮರಿಗೆ ಮೀಸಲಾತಿ ಕೊಟ್ಟವರು ಕಾಂಗ್ರೆಸ್ಸೋ, ಬಿಜೆಪಿಯೋ? ಶಕ್ತಿ ಇದ್ದರೆ ಮುಂದೆ ಬರಲಿ. ಎಲ್ಲೇ ವೇದಿಕೆ ಸಿದ್ಧಪಡಿಸಿದರೂ ಬರುತ್ತೇನೆ ಎಂದು ಗುಡುಗಿದರು.
Advertisement