ಚಾಮರಾಜನಗರ: ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ನಾಳೆ ಕರ್ನಾಟಕ ಪ್ರವೇಶಿಸಲಿದ್ದು, ಕಾಂಗ್ರೆಸ್ ನಾಯಕರಿಗೆ ಸ್ವಾಗತ ಕೋರಲು ಹಾಕಿದ್ದ ಫ್ಲೆಕ್ಸ್ ಗಳನ್ನು ಕಿಡಿಗೇಡಿಗಳು ರಾತ್ರೋರಾತ್ರಿ ಹರಿದು ಹಾಕಿದ್ದಾರೆ.
ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಚಿವ ಪುಟ್ಟರಂಗ ಶೆಟ್ಟಿ ಅವರು ಇರುವ ಫ್ಲೆಕ್ಸ್ಗಳನ್ನು ಕಿಡಿಗೇಡಿಗಳು ಹರಿದಿದ್ದಾರೆ.
ಕೇರಳದಲ್ಲಿ 'ಭಾರತ್ ಜೋಡೋ' ಅಭಿಯಾನ ಮುಗಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಚಾಮರಾಜನಗರದ ಗಡಿ ತಾಲೂಕು ಗುಂಡ್ಲುಪೇಟೆಯಿಂದ ಕರ್ನಾಟಕಕ್ಕೆ ಎಂಟ್ರಿ ಕೊಡಲಿದ್ದಾರೆ. ಅವರು ಆಗಮಿಸುವ ಮುನ್ನವೇ ರಾಹುಲ್ ಗಾಂಧಿ ಹಾಗೂ ಇತರ ನಾಯಕರ ಫ್ಲೆಕ್ಸ್ ಹಾನಿ ಮಾಡಿರುವ ಘಟನೆ ನಕಾರಾತ್ಮಕ ಸಂದೇಶ ರವಾನಿಸಿದೆ.
ಇದು ಬಿಜೆಪಿ ಪಕ್ಷದ ಕಾರ್ಯಕರ್ತರ ಕೈವಾಡ ಎಂದು ಈ ಭಾಗದ ಕಾಂಗ್ರೆಸ್ ಮುಖಂಡರು ಆರೋಪಿಸಿದರೆ, ರಾಜ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ನಲ್ಲಿ ಉಂಟಾದ ಗೊಂದಲವೇ ಇದಕ್ಕೆ ಕಾರಣ ಎಂದು ಕೇಸರಿ ಪಕ್ಷದ ಮುಖಂಡರು ಹೇಳುತ್ತಿದ್ದಾರೆ.
ಗುಂಡ್ಲುಪೇಟೆ-ಊಟಿ ರಸ್ತೆಯ ಹೋಟೆಲ್ ಸುರಭಿ ಬಳಿ ನಿರ್ಮಿಸಿದ್ದ ಫ್ಲೆಕ್ಸ್ಗಳಿಗೆ ಬ್ಲೇಡ್ಗಳನ್ನು ಬಳಸಿ ಹಾನಿ ಮಾಡಲಾಗಿದೆ.
Advertisement