Live: ಆರ್ಎಸ್ಎಸ್ ಸಿದ್ಧಾಂತದ ವಿರುದ್ಧ ಭಾರತ್ ಜೋಡೋ ಯಾತ್ರೆ: ನಗಾರಿ ಬಾರಿಸುವ ಮೂಲಕ ಯಾತ್ರೆಗೆ ರಾಹುಲ್ ಗಾಂಧಿ ಚಾಲನೆ
ಗುಂಡ್ಲುಪೇಟೆ: ಭಾರತ್ ಜೋಡೋ ಯಾತ್ರೆ ಇನ್ನು ಕೆಲವೇ ಹೊತ್ತಿನಲ್ಲಿ ಕರ್ನಾಟಕದಲ್ಲಿ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಇಂದು ಶುಕ್ರವಾರ ರಾಜ್ಯ ಪ್ರವೇಶಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಬಂಡೀಪುರದ ಬಳಿ ಸಿದ್ದರಾಮಯ್ಯ ಅವರು ಬರ ಮಾಡಿಕೊಂಡರು.
ಈ ವೇಳೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ಮಾಜಿ ಸಚಿವರಾದ ಕೆ.ಜೆ. ಜಾರ್ಜ್, ಡಾ. ಎಚ್.ಸಿ. ಮಹಾದೇವಪ್ಪ, ವಿಧಾನ ಪರಿಷತ್ ನ ವಿರೋಧ ಪಕ್ಷದ ಮುಖ್ಯ ಸಚೇತಕ ಪ್ರಕಾಶ್ ರಾಥೋಡ್ ಹಾಜರಿದ್ದರು.
ರಾಜ್ಯದಲ್ಲಿ ಹೇಗಿರಲಿದೆ ಪಾದಯಾತ್ರೆ?: ರಾಹುಲ್ ಗಾಂಧಿ ನೇತೃತ್ವದ ಪಾದಯಾತ್ರೆ ನಡೆಯಲಿದ್ದು, 22 ದಿನ ಸಂಚರಿಸಲಿದೆ ಭಾರತ್ ಜೋಡೋ ಐಕ್ಯತಾ ಯಾತ್ರೆ, ಇಂದು ಗುಂಡ್ಲುಪೇಟೆಯಿಂದ ಪ್ರವೇಶ ಮಾಡಿ, ಏಳು ಜಿಲ್ಲೆಯಲ್ಲಿ ಯಾತ್ರೆ ಸಂಚಾರ ಮಾಡಲಿದೆ. ಅವು ಚಾಮರಾಜನಗರ, ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರು ಜಿಲ್ಲೆಗಳು.
ಒಟ್ಟು 511 ಕಿ.ಮೀ ರಾಹುಲ್ ಗಾಂಧಿ ಹಾಗೂ ಕೈ ನಾಯಕರು ಹೆಜ್ಜೆ ಹಾಕಲಿದ್ದು, ಇಂದು ಸ್ವಾಗತ ಸಮಾವೇಶದ ವೇದಿಕೆ ಮೇಲೆ 200ಕ್ಕೂ ಹೆಚ್ಚು ಆಸನಗಳ ವ್ಯವಸ್ಥೆ ಮಾಡಲಾಗಿದೆ. ಮೂರು ಸಾವಿರಕ್ಕೂ ಹೆಚ್ಚು ಆಸನಗಳ ವ್ಯವಸ್ಥೆ
ಭಾರತ್ ಜೋಡೋ ಯಾತ್ರೆಯಲ್ಲಿ ಶಿಸ್ತಿಗೆ ಮೊದಲ ಆದ್ಯತೆ ನೀಡಲಾಗಿದೆ. ಕಾರ್ಯಕ್ರಮದ ರೂಪುರೇಷೆಯನ್ನು ಸಂಪೂರ್ಣ ಶಿಸ್ತುಬದ್ಧವಾಗಿ ರೂಪಿಸಲಾಗಿದೆ. ರಾಹುಲ್ ಗಾಂಧಿ ಸ್ವಾಗತ, ಪಾದಯಾತ್ರಿಗಳಿಗೆ ಊಟೋಪಚಾರ, ಸ್ವಚ್ಛತೆವಿಚಾರವಾಗಿಯೂ ಶಿಸ್ತಿಗೆ ಆದ್ಯತೆ ನೀಡಲಾಗಿದೆ. 22 ದಿನಗಳ ಕಾಲ ಕಾರ್ಯಕ್ರಮದ ವೇಳಾಪಟ್ಟಿಯಲ್ಲೂ ಶಿಸ್ತು ಎದ್ದು ಕಾಣುತ್ತಿದೆ. ವ್ಯವಸ್ಥಿತವಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕೆಪಿಸಿಸಿ ತಯಾರಿ ನಡೆಸಿದೆ ಎಂದು ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ಇಂದು ಚಾಮರಾಜನಗರ ಜಿಲ್ಲೆಯಿಂದ ಊಟಿ-ಕಲ್ಲಿಕೋಟೆ ಜಂಕ್ಷನ್ ಬಳಿ ಯಾತ್ರೆ ಆರಂಭವಾಗಲಿದ್ದು 3 ಸಾವಿರದ 038 ಕಿಲೋ ಮೀಟರ್ ದೂರ ಕೈ ನಾಯಕರು ಸಂಚರಿಸಲಿದ್ದಾರೆ.
ಭರ್ಜರಿ ಊಟದ ವ್ಯವಸ್ಥೆ: ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್ ಸಮಾವೇಶ ಆಯೋಜಿಸಿದ್ದು ಸುಮಾರು 30 ಸಾವಿರ ಕಾರ್ಯಕರ್ತರಿಗೆ ಊಟದ ವ್ಯವಸ್ಥೆ ಮಾಡಿದೆ. ವೆಜ್ ಪಲಾವ್, ಅನ್ನ ಸಾಂಬಾರ್, ಜಿಲೇಬಿ, ಹಪ್ಪಳ, ಉಪ್ಪಿನಕಾಯಿ ಸಿದ್ಧವಾಗುತ್ತಿದೆ. ವಿಐಪಿ, ವಿವಿಐಪಿಗಳಿಗೆ ಇದರ ಜೊತೆಗೆ ಶ್ಯಾವಿಗೆ ಪಾಯಸ ಹಾಗೂ ಮುದ್ದೆ ಇರುತ್ತದೆ. ಗುಂಡ್ಲುಪೇಟೆ ಪಟ್ಟಣದ ವೀರನಪುರದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ 11ರಿಂದಲೇ ಊಟದ ಬಡಿಸುವ ಕೆಲಸ ಆರಂಭವಾಗಲಿದೆ.
ಅಂತಾರಾಜ್ಯ ಸಂಚಾರ ಮಾರ್ಗ ಬದಲಾವಣೆ:
ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ(Bharat Jodo Yatra) ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ಅಂತರರಾಜ್ಯ ಸಂಚಾರಕ್ಕೆ ಬದಲಿ ಮಾರ್ಗ ವ್ಯವಸ್ಥೆ ಮಡಲಾಗಿದೆ. ಚಾಮರಾಜನಗರ(Chamarajanagar) ಡಿಸಿ ಚಾರುಲತಾ ಸೋಮಲ್ ಅವರು ಮಾರ್ಗ ಬದಲಾಯಿಸಿ ಆದೇಶ ಹೊರಡಿಸಿದ್ದಾರೆ.
ಕೇರಳದ ಸುಲ್ತಾನ್ ಬತ್ತೇರಿಯಿಂದ ಮೂಲೆಹೊಳೆ ಮಾರ್ಗವಾಗಿ ಮೈಸೂರಿಗೆ ಹೋಗುವ ವಾಹನಗಳು ಗುಂಡ್ಲುಪೇಟೆಯ ಕಗ್ಗಳದಹುಂಡಿ ಗ್ರಾಮದ ಕ್ರಾಸ್ ಬಳಿಯಿಂದ ಚೆನ್ನಮಲ್ಲಿಪುರ-ಹೊಂಗಹಳ್ಳಿ-ಮೂಕಹಳ್ಳಿ-ಮುಂಟಿಪುರ-ಬರಗಿ-ದೇಶಿಪುರ-ಆಲತ್ತೂರು ಮಾರ್ಗವಾಗಿ ಮೈಸೂರಿಗೆ ತೆರಳಬೇಕು.
ಕೇರಳದ ಸುಲ್ತಾನ್ ಬತ್ತೇರಿಯಿಂದ ಮೂಲೆಹೊಳೆ ಮಾರ್ಗವಾಗಿ ಊಟಿಗೆ ತೆರಳುವ ವಾಹನಗಳು ಗುಂಡ್ಲುಪೇಟೆಯ ಕಗ್ಗಳದಹುಂಡಿ ಕ್ರಾಸ್ ಬಳಿಯಿಂದ ಬೇರಂಬಾಡಿ-ಬೀಚನಹಳ್ಳಿ-ಲಕ್ಕಿಪುರ-ದೇವರಹಳ್ಳಿ-ಹಂಗಳ ಮಾರ್ಗವಾಗಿ ಊಟಿಗೆ ತೆರಳಬೇಕು.
ಊಟಿ ಕಡೆಯಿಂದ ಮೈಸೂರಿಗೆ ಬರುವ ವಾಹನಗಳು ಹಂಗಳ-ಹಂಗಳಪುರ-ಶಿವಪುರ-ಕೋಡಹಳ್ಳಿ-ಅಣ್ಣೂರು ಕೇರಿ ಮೂಲಕ ಗುಂಡ್ಲುಪೇಟೆ ಕೋಡಹಳ್ಳಿ ಸರ್ಕಲ್ ಬಳಿ ಚಾಮರಾಜನಗರ ರಸ್ತೆ ಮೂಲಕ ಮೈಸೂರಿಗೆ ತೆರಳಬೇಕು.
ಇಂದಿನ ಕಾರ್ಯಕ್ರಮ ಏನೇನು?
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ಗುಂಡ್ಲುಪೇಟೆ ಪಟ್ಟಣದ ಅಂಬೇಡ್ಕರ್ ಭವನದ ಬಳಿ ಕಾಂಗ್ರೆಸ್(Congress) ರಾಜ್ಯ ನಾಯಕರು ರಾಹುಲ್ ಗಾಂಧಿಗೆ ಸ್ವಾಗತ ಕೋರುತ್ತಾರೆ. ಬಳಿಕ ವೇದಿಕೆ ಕಾರ್ಯಕ್ರಮ ಮುಗಿಸಿ ರಾಹುಲ್ ಗಾಂಧಿ ಅಂಬೇಡ್ಕರ್ ಭವನದಿಂದ ವೀರನಪುರ ಗೇಟ್ವರೆಗೂ 4 ಕಿಮೀ ಪಾದಯಾತ್ರೆ ನಡೆಸಲಿದ್ದಾರೆ.
ಬಿಗಿ ಪೊಲೀಸ್ ಭದ್ರತೆ: ಭಾರತ್ ಜೋಡೋ ಯಾತ್ರೆಗೆ ಮೂವರು ಎಸ್ಪಿ, ಎಂಟು ಜನ ಡಿವೈಎಸ್ಪಿ, 25 ಇನ್ಸ್ಪೆಕ್ಟರ್, 50 ಜನ ಸಬ್ ಇನ್ಸ್ಪೆಕ್ಟರ್, ಒಂದು ಸಾವಿರಕ್ಕೂ ಅಧಿಕ ಮಂದಿ ಪೇದೆ, ಕೆಎಸ್ಆರ್ಪಿ, 10ಕ್ಕೂ ಅಧಿಕ ಡಿಆರ್ ಸಿಬ್ಬಂದಿ ನಿಯೋಜಿಸಲಾಗಿದೆ. ಕಾನೂನು ಬಾಹಿರ ಕೃತ್ಯಕ್ಕೆ ಯಾರೇ ಮುಂದಾದರೂ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು, ಈಗಾಗಲೇ ಮುನ್ನೆಚ್ಚರಿಕೆ ಕ್ರಮವಾಗಿ ಮದ್ಯ ಮಾರಾಟ ನಿಷೇಧಿಸಲಾಗಿದೆ.