ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷಗಳ ನಡುವಿನ ಆರೋಪ, ಪ್ರತ್ಯಾರೋಪ, ವಾಕ್ಸಮರ ತಾರಕಕ್ಕೇರಿದೆ. ಕರ್ನಾಟಕಕ್ಕೆ ಬಂದಾಗೆಲ್ಲಾ ಕುಟುಂಬ ರಾಜಕಾರಣ ಎಂದು ಟೀಕಿಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ವಿರುದ್ಧ ಜೆಡಿಎಸ್ ಹರಿಹಾಯ್ದಿದೆ.
ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿರುವ ಪಟ್ಟಿಯನ್ನು ಜೆಡಿಎಸ್ ಟ್ವೀಟ್ ಮಾಡಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರೇ ಕುಟುಂಬ ರಾಜಕಾರಣದ ಕೂಸು, ಅವರ ತಂದೆ ಮಾಜಿ ಸಿಎಂ ಆಗಿದ್ದವರು. ಬಿಎಸ್ ಯಡಿಯೂರಪ್ಪ ತನ್ನ ಪುತ್ರನಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದು, ಅವರ ಮತ್ತೋರ್ವ ಪುತ್ರ ಸಂಸದರಾಗಿದ್ದಾರೆ. ಶಾಸಕ ರವಿ ಸುಬ್ರಹ್ಮಣ್ಯ ಅವರಿಗೆ ಮತ್ತೆ ಟಿಕೆಟ್ ನೀಡಲಾಗಿದ್ದು, ಅವರ ಸೋದರನ ಮಗ ತೇಜಸ್ವಿ ಸೂರ್ಯ ಸಂಸದರಾಗಿದ್ದಾರೆ ಎಂದು ಟೀಕಿಸಿದೆ.
ಅದೇ ರೀತಿ ಶಾಸಕ ಜ್ಯೋತಿ ಗಣೇಶ್, ಜಾರಕಿಹೊಳಿ ಸಹೋದರರು, ಕತ್ತಿ ಕುಟುಂಬ, ರೆಡ್ಡಿ ಸಹೋದರರು, ಶಶಿಕಲಾ ಜೊಲ್ಲೆ, ಹರ್ಷವರ್ಧನ್, ಕುಮಾರ್ ಬಂಗಾರಪ್ಪ, ದತ್ತಾತ್ರೇಯ ಪಾಟೀಲ್, ಸುರೇಶ್ ಬಾಬು, ಶ್ರೀರಾಮುಲು, ಆನಂದ್ ಸಿಂಗ್ ಪುತ್ರ ಸೇರಿದಂತೆ ಹಲವು ಕುಟುಂಬ ರಾಜಕಾರಣದಿಂದ ಬಂದವರಿಗೆ ಟಿಕೆಟ್ ನೀಡಿರುವುದನ್ನು ಜೆಡಿಎಸ್ ಉಲ್ಲೇಖಿಸಿದೆ.
ಕರ್ನಾಟಕಕ್ಕೆ ಬಂದಾಗೆಲ್ಲಾ ಕುಟುಂಬ ರಾಜಕಾರಣ ಎಂದು ನಿರಂತರ ಬೊಬ್ಬಿರಿಯುವ ಅಮಿತ್ ಶಾ, ಪ್ರಧಾನಿ ಮೋದಿ,
ಹೇಳುವುದು ಒಂದು, ಮಾಡುವುದು ಒಂದು. ಬಿಜೆಪಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿರುವ ಪಟ್ಟಿ ನೀಡಿದ್ದೇವೆ, ಬಿಜೆಪಿ ನಾಯಕರು ನೈತಿಕತೆಯನ್ನು ಪ್ರಶ್ನಿಸಿಕೊಳ್ಳಲಿ ಎಂದು ಟೀಕಾ ಪ್ರಹಾರ ನಡೆಸಿದೆ.
Advertisement