ಯಾವನ್ರೀ ಗೃಹ ಸಚಿವ ದೇವೇಗೌಡರ ಕುಟುಂಬವನ್ನು ಪೇಟಿಎಂ ಅಂತಾನೆ; ನೀವು ಬಾಯಿಗೆ ಬಂದಂತೆ ಬೊಗಳಿದ್ದೀರಿ: ಸದನದಲ್ಲಿ ಎಚ್ ಡಿಕೆ- ಮಾಧುಸ್ವಾಮಿ ವಾರ್!
ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತು ಮುಂದುವರೆಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಯಾವನ್ರೀ ಗೃಹ ಸಚಿವ ಮಂಡ್ಯಕ್ಕೆ ಬಂದು ದೇವೇಗೌಡರ ಕುಟುಂಬ ಎಟಿಎಂ ಇದ್ದಂತೆ ಎಂದು ಹೇಳಿಕೆ ನೀಡುತ್ತಾನೆ.
Published: 17th February 2023 10:08 AM | Last Updated: 17th February 2023 01:06 PM | A+A A-

ಜೆ.ಸಿ ಮಾಧುಸ್ವಾಮಿ
ಬೆಂಗಳೂರು: ದೇವೇಗೌಡರ ಕುಟುಂಬ ಎಟಿಎಂ ಇದ್ದಂತೆ ಎಂದಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸುತ್ತಿದ್ದ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರ ಧೋರಣೆಯಿಂದ ಕ್ರುದ್ಧರಾದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ನೀವು ಏನೇನು ಬೊಗಳಿದ್ದೀರಿ ನಾವು ಹೇಳಬೇಕಾ ಎಂದು ಪ್ರಶ್ನಿಸಿದ್ದು ಸದನದಲ್ಲಿ ಕೋಲಾಹಲಕರ ಸನ್ನಿವೇಶ ಸೃಷ್ಟಿಸಿತು.
ಗುರುವಾರ ಭೋಜನ ವಿರಾಮದ ಬಳಿಕ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತು ಮುಂದುವರೆಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಯಾವನ್ರೀ ಗೃಹ ಸಚಿವ ಮಂಡ್ಯಕ್ಕೆ ಬಂದು ದೇವೇಗೌಡರ ಕುಟುಂಬ ಎಟಿಎಂ ಇದ್ದಂತೆ ಎಂದು ಹೇಳಿಕೆ ನೀಡುತ್ತಾನೆ. ಏನು ದಾಖಲೆ ಇದೆ ನಿಮ್ಮ ಹತ್ರ ನಮ್ಮ ದೇವೇಗೌಡರ ಕುಟುಂಬವನ್ನು ಎಟಿಎಂ ಎಂದು ಕರೆಯಲು, ನನ್ನ ಬಗ್ಗೆ ಬೇಕಾದರೆ ಮಾತನಾಡಲಿ, ಸಹಿಸಿಕೊಳ್ಳುತ್ತೇನೆ. ಚುನಾವಣೆ ಸಂದರ್ಭದಲ್ಲಿ ನಾಲ್ಕು ಜನರ ಬಳಿ ಹಣ ತಂದಿದ್ದೇನೆ. ಆದರೆ, ದೇವೇಗೌಡರು ಎಂದೂ ಹಣ, ಅಧಿಕಾರದ ಹಿಂದೆ ಹೋದವರಲ್ಲ, ಭ್ರಷ್ಟಾಚಾರ ನಡೆಸಿದವರಲ್ಲ.
ಅಂತಹವರ ಬಗ್ಗೆ ಇಂತಹ ಆರೋಪ ಮಾಡುವುದಕ್ಕೆ ಏನು ದಾಖಲೆ ಇದೆ? ಒಬ್ಬ ಗೃಹ ಸಚಿವ ಆದವರಿಗೆ ಇತಿಮಿತಿ ಇಲ್ಲವಾ? ಯಾವ ನೈತಿಕತೆ ಇದೆ ಈ ರೀತಿ ಮಾತನಾಡಲು ಎಂದು ಕೋಪೋದ್ರಿಕ್ತರಾಗಿ ಏರುಧ್ವನಿಯಲ್ಲಿ ಕಿಡಿ ಕಾರಿದರು. ಈ ವೇಳೆ ಮಧ್ಯಪ್ರವೇಶಿಸಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಸದನದ ಹೊರಗೆ ಯಾರೋ ಎಲ್ಲೋ ಮಾತನಾಡಿದ್ದನ್ನೆಲ್ಲಾ ಇಲ್ಲಿ ಪ್ರಸ್ತಾಪಿಸುತ್ತಿದ್ದೀರಿ. ಹೊರಗಡೆ ನೀವು ಏನು ಬೇಕಾದರೂ ಮಾತನಾಡಬಹುದಾ? ಏನು ಬೊಗಳಿದ್ದೀರಿ ಎಂದು ನಾವು ಹೇಳಬೇಕಾ ಎಂದು ತಿರುಗೇಟು ನೀಡಿದರು. ಇದಕ್ಕೆ ಜೆಡಿಎಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ‘ಬೊಗಳಿದ್ದೀರಿ’ ಎಂಬ ಪದವನ್ನು ಕಡತದಿಂದ ತೆಗೆಯಬೇಕೆಂದು ಆಗ್ರಹಿಸಿ ಬಾವಿಗಿಳಿದು ಧರಣಿ ನಡೆಸಿದರು.
ಇದನ್ನೂ ಓದಿ: ನಿಮ್ಮ ಹಗಲುಗನಸು ನನಸಾಗಲು ಇದು ಬಿಹಾರ, ಉತ್ತರ ಪ್ರದೇಶವಲ್ಲ: ಅಮಿತ್ ಶಾಗೆ ಕುಮಾರಸ್ವಾಮಿ ವಾರ್ನಿಂಗ್
ಕೊನೆಗೆ ತಮ್ಮ ನಾಯಕ ಕುಮಾರಸ್ವಾಮಿ ಅವರ ಸೂಚನೆ ಮೇರೆಗೆ ಬಾವಿಯಿಂದ ಹಿಂತಿರುಗಿದರು. ಸ್ಪೀಕರ್ ಸ್ಥಾನದಲ್ಲಿದ್ದ ಕುಮಾರ ಬಂಗಾರಪ್ಪ ಅವರು ಬೊಗಳು ಪದ ಅಸಂವಿಧಾನಿಕವೇ ಎಂಬುದನ್ನು ಪರಿಶೀಲಿಸಿ ಕಡತದಿಂದ ತೆಗೆಯುವ ಬಗ್ಗೆ ಸ್ಪೀಕರ್ ನಿರ್ಧರಿಸುತ್ತಾರೆ ಎಂದರು. ಈಗ ಸದನದಲ್ಲಿ ನಿಮ್ಮ ಪಕ್ಷದ ನಾಯಕರೇ ಮಾತನಾಡುತ್ತಿದ್ದು, ಅವರ ಸಮಯ ಹಾಳು ಮಾಡಬೇಡಿ ಎಂದು ಮನವಿ ಮಾಡಿದರು. ಆದರೂ, ಜೆಡಿಎಸ್ ಸದಸ್ಯರು ಧರಣಿ ಮುಂದುವರೆಸಿದರು. ಕೊನೆಗೆ ತಮ್ಮ ನಾಯಕ ಕುಮಾರಸ್ವಾಮಿ ಅವರ ಸೂಚನೆ ಮೇರೆಗೆ ಬಾವಿಯಿಂದ ಹಿಂತಿರುಗಿದರು.