ಬೆಂಗಳೂರು: ಹಣದುಬ್ಬರ, ನಿರುದ್ಯೋಗ, ಸಂಬಳ ಕಡಿತ ಮತ್ತು ಮಿತಿಮೀರಿದ ಭ್ರಷ್ಟಾಚಾರ ಇವೇ ಮುಂತಾದ ಸಮಸ್ಯೆಗಳಿಂದ ಕಂಗಾಲಾಗಿರುವ ಕನ್ನಡಿಗರಿಗೆ 'ವಿದ್ಯುತ್ ಬರೆ' ಹಾಕಲು ರಾಜ್ಯ ಸರ್ಕಾರ ಸಜ್ಜಾಗಿದೆ ಎಂದು ತಿಳಿಸಿರುವ ಜೆಡಿಎಸ್, ಡಬಲ್ ಎಂಜಿನ್ ಬಿಜೆಪಿಯವರೆ, ಕನ್ನಡಿಗರನ್ನು ಮುಳುಗಿಸುವವರೆಗೂ ಸಮಾಧಾನ ಇಲ್ಲವೆ? ಎಂದು ಪ್ರಶ್ನಿಸಿದೆ.
ಈ ಕುರಿತ ಮಾಧ್ಯಮವೊಂದರ ವರದಿಯೊಂದನ್ನು ಟ್ವೀಟ್ ಮಾಡಿರುವ ಜೆಡಿಎಸ್, ದರ ಏರಿಕೆಯ ನಿರ್ಧಾರ ಸ್ವತಃ ಸರ್ಕಾರದ್ದೆ. ಹಣದುಬ್ಬರದ ಆಘಾತದಿಂದ ರಾಜ್ಯದ ಜನತೆ ತತ್ತರಿಸಿದ್ದಾರೆ. ಇಂತಹ ಸಂದಿಗ್ಧ ಕಾಲದಲ್ಲಿ ಈ ಜನದ್ರೋಹಿ ನಿರ್ಧಾರಕ್ಕೆ ಬರಲು ನಿಮ್ಮಂತಹ ಕಠೋರ ಹೃದಯಿಗಳಿಗೆ ಮಾತ್ರ ಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಈ ನಿರ್ಧಾರದಿಂದ ನಿಗದಿತ ಶುಲ್ಕವೂ ಹೆಚ್ಚಾಗಲಿದೆ. ಇದರಿಂದಾಗಿ, ಹೊಟೇಲ್, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (ಎಂಎಸ್ಎಂಇ) ತತ್ತರಿಸಿಹೋಗುತ್ತವೆ. ಈಗಾಗಲೇ ಕೇಂದ್ರ ಬಿಜೆಪಿ ಸರ್ಕಾರದ ಆರ್ಥಿಕ ನೀತಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಈ ಉದ್ಯಮಗಳು ಬಲವಂತವಾಗಿ ಮುಚ್ಚುವ ಹಂತಕ್ಕೆ ಬಂದಿವೆ ಎಂದು ತಿಳಿಸಿದೆ.
ರಾಜ್ಯ ಬಿಜೆಪಿಯವರೆ, ಹಣದುಬ್ಬರ ಸಮಸ್ಯೆ ಮತ್ತೆ ಹೆಚ್ಚಾಗಿ, ಕಣ್ಣೀರಿನಲ್ಲಿ ರಾಜ್ಯದ ಜನರು ಕೈತೊಳೆದುಕೊಳ್ಳುವ ಸ್ಥಿತಿಗೆ ತಳ್ಳುತ್ತಿದ್ದೀರಿ. ಇದು ಕ್ರೌರ್ಯದ ಪರಮಾವಧಿ. ಜನರ ನೆಮ್ಮದಿ, ದುಡಿಮೆ, ಆದಾಯ ಎಲ್ಲವನ್ನೂ ಕಿತ್ತುತಿನ್ನುವ ನಿಮಗೆ ಕನ್ನಡಿಗರು ಸರಿಯಾದ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದೆ.
Advertisement