ಪ್ರಜಾಧ್ವನಿ ಯಾತ್ರೆ ಎರಡನೇ ಹಂತದ ನಂತರ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ; ಹಾಲಿ ಶಾಸಕರಿಗೆ ಮಣೆ!
ಮೊದಲ ಪಟ್ಟಿಯಲ್ಲಿ ಸುಮಾರು 120 ಅಭ್ಯರ್ಥಿಗಳ ಹೆಸರು ಪ್ರಕಟವಾಗಲಿದೆ ಎಂದು ಮೂಲಗಳು ತಿಳಿಸಿವೆ. ಆಡಳಿತ ಪಕ್ಷವು ತನ್ನ ಹಾಲಿ ಶಾಸಕರಿಗೆ ಟಿಕೆಟ್ ಖಚಿತಪಡಿಸುವ ಮೂಲಕ ಸೇಫ್ ಗೇಮ್ ಆಡುತ್ತಿರುವ ಹಿನ್ನೆಲೆಯಲ್ಲಿ, ವಿರೋಧ ಪಕ್ಷ ಕಾಂಗ್ರೆಸ್ ಹಾಲಿ ಶಾಸಕರನ್ನು ಕೈಬಿಡಲು ಸಿದ್ಧವಾಗಿಲ್ಲ ಎಂದು ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ.
Published: 30th January 2023 11:13 AM | Last Updated: 30th January 2023 05:22 PM | A+A A-

ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್
ಬೆಂಗಳೂರು: ವಿಧಾನಸಭೆ ಚುನಾವಣೆಗೆ ಮುನ್ನ ಕರ್ನಾಟಕದಲ್ಲಿ ಪ್ರಜಾಧ್ವನಿ ಬಸ್ ಯಾತ್ರೆಯ ಮೊದಲ ಹಂತವನ್ನು ಮುಗಿಸಿರುವ ಕಾಂಗ್ರೆಸ್ ತನ್ನ ಎರಡನೇ ಹಂತದ ಯಾತ್ರೆಯ ನಂತರವೇ ಅಂದರೆ ಫೆಬ್ರವರಿ 9ರ ನಂತರ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸುವ ಸಾಧ್ಯತೆಯಿದೆ.
ಎಲ್ಲಾ ಜಿಲ್ಲೆಗಳು ಈಗಾಗಲೇ ಅಭ್ಯರ್ಥಿಗಳ ಪಟ್ಟಿಯನ್ನು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ತಲುಪಿಸಿವೆ. ಆದರೆ ಎರಡನೇ ಹಂತವನ್ನು ಪ್ರಾರಂಭಿಸುವ ಮೊದಲು, ಶಿವಕುಮಾರ್, ಸಿಎಲ್ಪಿ ನಾಯಕ ಸಿದ್ದರಾಮಯ್ಯ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತು ಕೆಸಿ ವೇಣುಗೋಪಾಲ್ ಸೇರಿದಂತೆ 36 ಸದಸ್ಯರ ಚುನಾವಣಾ ಸಮಿತಿ ಫೆಬ್ರವರಿ 2 ರಂದು ಟಿಕೆಟ್ ಅಂತಿಮಗೊಳಿಸಲು ಚರ್ಚೆ ನಡೆಸಲಿದೆ. ಸುಮಾರು 70 ಹಾಲಿ ಶಾಸಕರು ಹಾಗೂ 2018ರ ವಿಧಾನಸಭೆ ಚುನಾವಣೆಯಲ್ಲಿ ಸೋತ 50 ಮಂದಿ ನಾಯಕರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ.
ಮೊದಲ ಪಟ್ಟಿಯಲ್ಲಿ ಸುಮಾರು 120 ಅಭ್ಯರ್ಥಿಗಳ ಹೆಸರು ಪ್ರಕಟವಾಗಲಿದೆ ಎಂದು ಮೂಲಗಳು ತಿಳಿಸಿವೆ. ಆಡಳಿತ ಪಕ್ಷವು ತನ್ನ ಹಾಲಿ ಶಾಸಕರಿಗೆ ಟಿಕೆಟ್ ಖಚಿತಪಡಿಸುವ ಮೂಲಕ ಸೇಫ್ ಗೇಮ್ ಆಡುತ್ತಿರುವ ಹಿನ್ನೆಲೆಯಲ್ಲಿ, ವಿರೋಧ ಪಕ್ಷ ಕಾಂಗ್ರೆಸ್ ಹಾಲಿ ಶಾಸಕರನ್ನು ಕೈಬಿಡಲು ಸಿದ್ಧವಾಗಿಲ್ಲ ಎಂದು ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: INTERVIEW: ಸಿಎಂ ಆಗುವ ಬಯಕೆ ಇದೆ, ನಾನೇಕೆ ಮುಖ್ಯಮಂತ್ರಿಯಾಗಬಾರದು?: ಡಾ ಜಿ ಪರಮೇಶ್ವರ್
ಉಳಿದ 124 ವಿಧಾನಸಭಾ ಸ್ಥಾನಗಳಿಗೆ ಹಂತ ಹಂತವಾಗಿ ಘೋಷಣೆಯಾಗಲಿದ್ದು, ಫೆಬ್ರವರಿ ಅಂತ್ಯದ ವೇಳೆಗೆ ಸಂಪೂರ್ಣ ಪಟ್ಟಿ ಹೊರಬೀಳಲಿದೆ. ಮಾರ್ಚ್ ಮೊದಲ ವಾರದಲ್ಲಿ ಚುನಾವಣಾ ಆಯೋಗವು ಚುನಾವಣಾ ಅಧಿಸೂಚನೆಯನ್ನು ಹೊರಡಿಸುವ ಸಾಧ್ಯತೆಯಿರುವುದರಿಂದ, ಕೆಲವು ನಿರ್ಣಾಯಕ ಕ್ಷೇತ್ರಗಳನ್ನು ಹೊರತುಪಡಿಸಿ, ಕೊನೆಯ ಕ್ಷಣದಲ್ಲಿ ಇತರ ಪಕ್ಷಗಳ ನಾಯಕರು ಕಾಂಗ್ರೆಸ್ ಸೇರುವ ಸಾಧ್ಯತೆಯಿರುವ ಕೆಲವು ಕ್ಷೇತ್ರಗಳನ್ನು ಹೊರತುಪಡಿಸಿ ಟಿಕೆಟ್ಗಳನ್ನು ಅಂತಿಮಗೊಳಿಸಲಾಗುತ್ತದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಟಿಕೆಟ್ ಅಂತಿಮಗೊಳಿಸಲಿದ್ದಾರೆ.
ಶಿವಕುಮಾರ್, ಸಿದ್ದರಾಮಯ್ಯ ಅಲ್ಲದೆ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ, ಮಾಜಿ ಸಚಿವರಾದ ಕೆ.ಜೆ.ಜಾರ್ಜ್, ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ, ಎಚ್.ಆಂಜನೇಯ, ಕೆ.ಎಚ್.ಮುನಿಯಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಧ್ರುವನಾರಾಯಣ, ಸಲೀಂ ಅಹಮದ್ ಸೇರಿದಂತೆ ಹಿರಿಯ ನಾಯಕರೂ ಆಯ್ಕೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಿದ್ದಾರೆ.