ಬೆಂಗಳೂರು: ಇತ್ತೀಚಿಗೆ ಒಡಿಶಾದ ಬಾಲಾಸೋರ್ ನಲ್ಲಿ ಸಂಭವಿಸಿದ ತ್ರಿವಳಿ ರೈಲು ದುರಂತಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜ್ಯದ ನಾಲ್ವರು ಸಂಸದರು ಪತ್ರ ಬರೆದಿದ್ದಾರೆ.
ರಾಜ್ಯದ ಬಿಜೆಪಿ ಸಂಸದರಾದ ಡಿ.ವಿ. ಸದಾನಂದಗೌಡ, ತೇಜಸ್ವಿ ಸೂರ್ಯ, ಎಸ್ ಮುನಿಸ್ವಾಮಿ ಹಾಗೂ ಪಿ. ಸಿ. ಮೋಹನ್ ಅವರು ಖರ್ಗೆ ಅವರಿಗೆ ಪತ್ರ ಬರೆದಿದ್ದು, ಬಿಜೆಪಿ ಸರ್ಕಾರ ರೈಲ್ವೆಯನ್ನು ನಿರ್ಲಕ್ಷಿಸಿಲ್ಲ, ಕಳೆದ 9 ವರ್ಷಗಳಲ್ಲಿ ಸುಮಾರು 4.58 ಲಕ್ಷ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ ಎಂದು ಹೇಳಿದ್ದಾರೆ.
ಪ್ರಸ್ತುತ ಸುಮಾರು 1.52 ಲಕ್ಷ ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಹೀಗೆ 10 ವರ್ಷಗಳಲ್ಲಿ 6.1 ಲಕ್ಷಕ್ಕೂ ಹೆಚ್ಚು ಯುವ ಜನತೆಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಇದು ಯುಪಿಎ ಅವಧಿಯಲ್ಲಿ ಮಾಡಿಕೊಳ್ಳಲಾದ 4.11 ಲಕ್ಷಕ್ಕಿಂತ ಶೇ.50 ರಷ್ಟು ಹೆಚ್ಚಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಾಜಿ ರೈಲ್ವೆ ಸಚಿವರಾಗಿ 2004 ಮತ್ತು 2014 ರ ನಡುವೆ ನೀವು ಕಾರ್ಯ ನಿರ್ವಹಿಸಿದ್ದರಿಂದ ಪರಿಸ್ಥಿತಿ ಕುರಿತು ವಿವೇಚನೆಯುಕ್ತ ಮಾಹಿತಿ ನೀಡುವಿರೆಂದು ನಿರೀಕ್ಷಿಸಿದ್ದೇವು. ಆದರೆ, ನೀವು ಬೇರೆ ರೀತಿಯಲ್ಲಿ ಸಲಹೆ ನೀಡಿದ್ದೀರಿ ಎಂದಿದ್ದಾರೆ.
ಫೆಬ್ರವರಿ 2023 ರಲ್ಲಿ ಕರ್ನಾಟಕದ ಹೊಸದುರ್ಗದ ಬಳಿ ಎರಡು ರೈಲುಗಳು ಒಂದೇ ಮಾರ್ಗದಲ್ಲಿ ಬಂದ ನಂತರ ದೊಡ್ಡ ದುರಂತವನ್ನು ತಪ್ಪಿಸಲಾಯಿತು, ಘಟನೆಯನ್ನು ರೈಲ್ವೆಯು ಕೂಲಂಕಷವಾಗಿ ತನಿಖೆ ಮಾಡಿದೆ ಎಂದು ಸಂಸದರು ಪತ್ರದಲ್ಲಿ ವಿವರಿಸಿದ್ದಾರೆ.
Advertisement