ಜೆಡಿಎಸ್ಗೆ ಇದು ಮಾಡು ಇಲ್ಲವೇ ಮಡಿ ಚುನಾವಣೆ; 'ಕುಟುಂಬ ಕೇಂದ್ರಿತ' ಎಂಬ ಬಿರುದಿನಿಂದ ಹೊರಬರುವುದೇ?
ಜೆಡಿಎಸ್ ಈ ಭಾರಿ ಪೂರ್ಣ ಪ್ರಮಾಣದ ಸರ್ಕಾರ ರಚಿಸಬೇಕೆಂಬ ಇಂಗಿತ ವ್ಯಕ್ತಪಡಸಿದ್ದು, ಅದಕ್ಕಾಗಿ ಶತಾಯಗತಾಯ ಪ್ರಯತ್ನ ನಡೆಸುತ್ತಿದೆ. ರಾಜ್ಯದಲ್ಲಿ ಈಗ ಪಕ್ಷವು ಮಾಡು ಇಲ್ಲವೇ ಮಡಿ ಸನ್ನಿವೇಶವನ್ನು ಎದುರಿಸುತ್ತಿದೆ. ಏಕೆಂದರೆ, ಜೆಡಿಎಸ್ ರಾಜ್ಯದಲ್ಲಿ ಗೆಲ್ಲುವ ಸ್ಥಾನಗಳ ಸಂಖ್ಯೆಯು ಪಕ್ಷದ ಭವಿಷ್ಯದ ಹಾದಿಯನ್ನು ನಿರ್ಧರಿಸುತ್ತದೆ.
Published: 01st May 2023 07:53 AM | Last Updated: 02nd May 2023 06:53 PM | A+A A-

ಜೆಡಿಎಸ್
ಬೆಂಗಳೂರು: ಜೆಡಿಎಸ್ ಈ ಭಾರಿ ಪೂರ್ಣ ಪ್ರಮಾಣದ ಸರ್ಕಾರ ರಚಿಸಬೇಕೆಂಬ ಇಂಗಿತ ವ್ಯಕ್ತಪಡಸಿದ್ದು, ಅದಕ್ಕಾಗಿ ಶತಾಯಗತಾಯ ಪ್ರಯತ್ನ ನಡೆಸುತ್ತಿದೆ. ರಾಜ್ಯದಲ್ಲಿ ಈಗ ಪಕ್ಷವು ಮಾಡು ಇಲ್ಲವೇ ಮಡಿ ಸನ್ನಿವೇಶವನ್ನು ಎದುರಿಸುತ್ತಿದೆ. ಏಕೆಂದರೆ, ಜೆಡಿಎಸ್ ರಾಜ್ಯದಲ್ಲಿ ಗೆಲ್ಲುವ ಸ್ಥಾನಗಳ ಸಂಖ್ಯೆಯು ಪಕ್ಷದ ಭವಿಷ್ಯದ ಹಾದಿಯನ್ನು ನಿರ್ಧರಿಸುತ್ತದೆ.
2018ರ ಚುನಾವಣೆಯಲ್ಲಿ 37 ಸ್ಥಾನಗಳನ್ನು ಗೆದ್ದು ಕಾಂಗ್ರೆಸ್ ಜೊತೆ ಸಮ್ಮಿಶ್ರ ಸರ್ಕಾರ ರಚಿಸಿದ ಜೆಡಿಎಸ್, ತನ್ನ ಶಾಸಕರ ಪಕ್ಷಾಂತರದಿಂದಾಗಿ ಅಧಿಕಾರವನ್ನು ಕಳೆದುಕೊಂಡಿತು ಮತ್ತು ಈಗ ಶಾಸಕರ ಸಂಖ್ಯೆ 29ಕ್ಕೆ ಇಳಿದಿದೆ. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜೆಡಿಎಸ್ ತನ್ನ ಭದ್ರಕೋಟೆ ಎನಿಸಿಕೊಂಡಿರುವ ಹಳೇ ಮೈಸೂರು ಭಾಗದಲ್ಲಿ ತನ್ನ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಶತಾಯ ಗತಾಯ ಪ್ರಯತ್ನಿಸುತ್ತಿದ್ದು, ಉತ್ತರ ಮತ್ತು ಮಧ್ಯ ಕರ್ನಾಟಕದಲ್ಲಿ ಸಾಧ್ಯವಾದಷ್ಟು ಸೀಟು ಗೆಲ್ಲಲು ರಣತಂತ್ರ ರೂಪಿಸುತ್ತಿದೆ.
ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿನ ಭಿನ್ನಮತದ ಲಾಭ ಪಡೆದು ಆಕಾಂಕ್ಷಿಗಳನ್ನು ಜೆಡಿಎಸ್ಗೆ ಸೆಳೆಯುವ ಮೂಲಕ ಹಲವು ಸ್ಥಾನಗಳಲ್ಲಿ ಅಭ್ಯರ್ಥಿಗಳಿಲ್ಲದ ಬಿಕ್ಕಟ್ಟನ್ನು ಪಕ್ಷವು ಸ್ವಲ್ಪ ಮಟ್ಟಿಗೆ ನಿವಾರಿಸಿದೆ. ಈ ಕಸರತ್ತು ಪಕ್ಷವು ರೇಸ್ನಲ್ಲಿ ಉಳಿಯಲು ಸಹಕಾರಿಯಾಗಲಿದೆ ಎಂದು ಪಕ್ಷದ ಮುಖಂಡರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: 50 ಕ್ಷೇತ್ರ ಕಸಿಯಲು 'ದಳಪತಿ'ಗಳ ಪ್ಲಾನ್: ಕಾಂಗ್ರೆಸ್-ಬಿಜೆಪಿ ತ್ಯಜಿಸಿದವರಿಗೆ ಮಣೆ; ಅತಂತ್ರ ಜನಾದೇಶದ ನಿರೀಕ್ಷೆಯಲ್ಲಿ ಜೆಡಿಎಸ್
ಬಿಜೆಪಿ ಅಥವಾ ಕಾಂಗ್ರೆಸ್ ಮೇಲೆ ಅವಲಂಬಿತವಾಗಿರುವುದರಿಂದ ಜೆಡಿಎಸ್ ಸ್ವತಂತ್ರವಾಗಿ ಸರ್ಕಾರ ರಚಿಸುವುದಿಲ್ಲ ಎಂಬ ಗ್ರಹಿಕೆ ಪ್ರತಿಕೂಲ ಪರಿಣಾಮ ಬೀರಬಹುದು. ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಹಾಸನ ಟಿಕೆಟ್ಗೆ ಕುಟುಂಬದ ಸದಸ್ಯರ ಬದಲಿಗೆ ಕಾರ್ಯಕರ್ತರಿಗೆ ಟಿಕೆಟ್ ನೀಡುವ ಮೂಲಕ ಪಕ್ಷವು ತನ್ನ ಕಾರ್ಯಕರ್ತರನ್ನು ಗೌರವಿಸುತ್ತದೆ ಎಂಬ ಸಂದೇಶವನ್ನು ರವಾನಿಸಲು ಪ್ರಯತ್ನಿಸಿದರೂ, ಪಕ್ಷವು ಕುಟುಂಬ ಕೇಂದ್ರಿತವಾಗಿದೆ ಎಂಬ ಜನರಲ್ಲಿ ಬೇರೂರಿರುವ ನಂಬಿಕೆಯನ್ನು ಅಳಿಸುವುದು ಅಷ್ಟು ಸುಲಭವಲ್ಲ.
ಮುಖ್ಯಮಂತ್ರಿಯಾದ ಮೊದಲ ಅವಧಿಯಲ್ಲೇ ‘ಜನಪರ’ ಮತ್ತು ‘ಬಡವರ ಪರ’ ಸಿಎಂ ಎಂಬ ಹೆಸರನ್ನು ಗಳಿಸಿದ್ದ ಕುಮಾರಸ್ವಾಮಿ ಅವರು 14 ತಿಂಗಳ ಎರಡನೇ ಅವಧಿಯಲ್ಲೂ ಅಂಥದ್ದೇ ಮಾತನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಪಕ್ಷವು ಅವರ ಜನಪ್ರಿಯತೆ ಮತ್ತು ವರ್ಚಸ್ಸಿನ ಮೇಲೆ ಹೆಚ್ಚು ಅವಲಂಬಿತವಾಗಿರುವ ಕಾರಣ, ಇದರ ಪರಿಣಾಮ ಏನೆಂಬುದು ಮೇ 13 ರಂದು ಮಾತ್ರವೇ ತಿಳಿಯಲಿದೆ.
ಇದನ್ನೂ ಓದಿ: ಮೋದಿ ಪ್ರಚಾರ ಅಸೆಂಬ್ಲಿ ಚುನಾವಣೆ ಮೇಲೆ ಹೆಚ್ಚು ಪರಿಣಾಮ ಬೀರದು: ಹೆಚ್ ಡಿ ದೇವೇಗೌಡ (ಸಂದರ್ಶನ)
ಅಲ್ಲದೆ, ಪಕ್ಷವು ತನ್ನ ಮಹತ್ವಾಕಾಂಕ್ಷೆಯ ‘ಪಂಚರತ್ನ’ ಕಾರ್ಯಕ್ರಮವನ್ನು ಪ್ರಚಾರ ಮಾಡಿದೆ. ಇದು ಆರೋಗ್ಯ, ಶಿಕ್ಷಣ ಮತ್ತು ಉದ್ಯೋಗದಂತಹ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವುದಾಗಿ ಮತದಾರರಿಗೆ ಭರವಸೆ ನೀಡುತ್ತದೆ. ಆದರೆ, ಮತದಾರರು ಈ ಭರವಸೆಗಳನ್ನು ಎಷ್ಟು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
ಜೆಡಿಎಸ್ ಬಲಗಳು
ಒಕ್ಕಲಿಗರು, ರೈತ ಸಮುದಾಯದ ಬೆಂಬಲ ಪಕ್ಷಕ್ಕಿದೆ
ನಾಯಕತ್ವ ಮತ್ತು ಸಿಎಂ ಅಭ್ಯರ್ಥಿಯ ಗೊಂದಲವಿಲ್ಲ
ಪಕ್ಷಕ್ಕೆ ಬದ್ಧವಾಗಿರುವ ಕಾರ್ಯಕರ್ತರು
ದೌರ್ಬಲ್ಯಗಳು
'ಕುಟುಂಬ ಕೇಂದ್ರಿತ' ಪಕ್ಷ ಎಂಬ ಬ್ರಾಂಡ್
ರಾಜ್ಯದಾದ್ಯಂತ, ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಯಾವುದೇ ಬಲವಾದ ನೆಲೆಯಿಲ್ಲ
ಎರಡನೇ ಹಂತದ ನಾಯಕತ್ವ ಇಲ್ಲ