ಸವದತ್ತಿ ಯಲ್ಲಮ್ಮ(ಬೆಳಗಾವಿ): ಕಾಂಗ್ರೆಸ್ ಪದೇಪದೇ ಸಾವರ್ಕರ್ಗೆ ಅಪಮಾನ ಮಾಡುತ್ತದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಾವರ್ಕರ್ ಅಪಮಾನ ಮಾಡುತ್ತೀರಿ. ನೀವು 10 ಜನ್ಮ ಹುಟ್ಟಿಬಂದರೂ ಸಾವರ್ಕರ್ರಂತಹ ಬಲಿದಾನ ನೋಡುವುದಕ್ಕೆ ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಬೆಳಗಾವಿಯಲ್ಲಿಂದು ಬಿಜೆಪಿ ಅಭ್ಯರ್ಥಿ ಪರ ಸಮಾವೇಶದಲ್ಲಿ ಮಾತನಾಡಿದ ಅವರು, ಭಾರತದ ಜನರು ನರೇಂದ್ರ ಮೋದಿ ನಂಬುತ್ತಾರೆ. ಮೋದಿಯನ್ನು ಮಲ್ಲಿಕಾರ್ಜುನ ಖರ್ಗೆ ವಿಷದ ಸರ್ಪ ಎನ್ನುತ್ತಾರೆ. ಖರ್ಗೆಯವರೇ ಮೋದಿಯನ್ನು ಎಷ್ಟು ಟೀಕಿಸುತ್ತೀರೋ ಟೀಕಿಸಿ. ನೀವು ಎಷ್ಟು ಬೈಯ್ಯುತ್ತೀರೋ ಕಮಲ ಅಷ್ಟು ಅರಳುತ್ತದೆ. ನರೇಂದ್ರ ಮೋದಿಯನ್ನು ಎಷ್ಟು ಬೈದರೂ ನಿಮಗೆ ಹೊಟ್ಟೆ ತುಂಬಿಲ್ಲ. ಅದಕ್ಕೆ ಬಜರಂಗಬಲಿ ವಿರುದ್ಧ ಕಾಂಗ್ರೆಸ್ನವರು ನಿಂತಿದ್ದಾರೆ ಎಂದು ಟೀಕಿಸಿದರು.
ಬೆಳಗಾವಿ ಜಿಲ್ಲೆ ಸವದತ್ತಿಯಲ್ಲಿ ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆ ನಡೆದಿದ್ದು ಕಳೆದ ಬಾರಿ ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳಲ್ಲಿ 11 ಕ್ಷೇತ್ರ ಬಿಜೆಪಿ ಗೆಲ್ಲಿಸಿದ್ರಿ. ಈ ಬಾರಿ 18ಕ್ಕೆ 18 ಕ್ಷೇತ್ರಗಳನ್ನು ಬಿಜೆಪಿಯ ಜೋಳಿಗೆಯಲ್ಲಿ ಹಾಕಿ ಎಂದು ಕರೆ ನೀಡಿದರು.
ಸುವರ್ಣ ಸೌಧದಲ್ಲಿ ವೀರ್ ಸಾವರ್ಕರ್ ಭಾವಚಿತ್ರ ಹಾಕಲಾಗಿದೆ. ಇಂದು ಬೆಳಗಾವಿ ಜಿಲ್ಲೆಯ 6 ಕ್ಷೇತ್ರಗಳಲ್ಲಿ ಪ್ರಚಾರ ಮಾಡಿ ರಾತ್ರಿ ಇಲ್ಲಿ ವಾಸ್ತವ್ಯ ಹೂಡುವೆ. ಇಡೀ ಕರ್ನಾಟಕ ಸುತ್ತಿ ನಾನು ಬಂದಿದ್ದೇನೆ. 13ನೇ ತಾರೀಖು ಪೂರ್ಣ ಬಹುಮತದ ಬಿಜೆಪಿ ಸರ್ಕಾರ ಬರುತ್ತದೆ. ಮೋದಿ ನೇತೃತ್ವದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸೋನಿಯಾ ಗಾಂಧಿ ನದಿ ನೀರು ಕೊಡಲ್ಲ ಅಂದ್ರು: ಕಾಂಗ್ರೆಸ್ ಪಕ್ಷ ನಿರಂತರವಾಗಿ ರೈತರಿಗೆ ಅನ್ಯಾಯ ಮಾಡುತ್ತಾ ಬಂದಿದೆ. ವಿಶೇಷವಾಗಿ ಉತ್ತರ ಕರ್ನಾಟಕ ರೈತರಿಗೆ ಕಾಂಗ್ರೆಸ್ ಅನ್ಯಾಯ ಮಾಡಿದೆ. ಹಿಂದೆ ಕರ್ನಾಟಕ ಮಹಾರಾಷ್ಟ್ರ ಗೋವಾದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. ಆಗ ಕಾಂಗ್ರೆಸ್ ಸರ್ಕಾರ ಮಹದಾಯಿ ವಿವಾದ ಬಗೆಹರಿಸಿದ್ರಾ? 2007ರಲ್ಲಿ ಸೋನಿಯಾ ಗಾಂಧಿ ಮಹದಾಯಿ ನದಿ ನೀರು ಕರ್ನಾಟಕಕ್ಕೆ ಕೊಡಲ್ಲ ಅಂದ್ರು. ಸೋನಿಯಾ ಗಾಂಧಿಯವರೇ ನೀವು ಹೋದ್ರಿ ನಿಮ್ಮ ಸರ್ಕಾರ ಹೋಯ್ತು. ಪ್ರಧಾನಿ ಮೋದಿ ಆಗಮಿಸಿ ಕರ್ನಾಟಕಕ್ಕೆ ಮಹದಾಯಿ ನೀರು ಹರಿಸುವ ನಿರ್ಧಾರ ಮಾಡಿದರು.
Advertisement