ಈಗಲೂ ಕಾಲ ಮಿಂಚಿಲ್ಲ, ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ನೀಡಿ: ರೇಣುಕಾಚಾರ್ಯ ಹೊಸ ವರಸೆ
ಬಿಜೆಪಿಗೆ ಸಮರ್ಥ ನಾಯಕರ ಅಡಳಿತ ಬೇಕಾಗಿದೆ. ಯಡಿಯೂರಪ್ಪನವರ ಕಣ್ಣೀರಿನಿಂದ ಬಿಜೆಪಿ ಹಾಳಾಗಿದೆ. ಹೀಗಾಗಿ ಅವರ ಪುತ್ರ ಬಿ.ವೈ ವಿಜಯೇಂದ್ರ ರಾಜ್ಯಾಧ್ಯಕ್ಷ ಆಗಬೇಕು. ಅವರಿಗೆ ಯಡಿಯೂರಪ್ಪ ಪುತ್ರ ಎಂದು ಸ್ಥಾನಮಾನ ಕೊಡಬೇಡಿ.
Published: 29th September 2023 02:35 PM | Last Updated: 29th September 2023 08:43 PM | A+A A-

ರೇಣುಕಾಚಾರ್ಯ
ದಾವಣಗೆರೆ: ಬಿಜೆಪಿಗೆ ಸಮರ್ಥ ನಾಯಕರ ಅಡಳಿತ ಬೇಕಾಗಿದೆ. ಯಡಿಯೂರಪ್ಪನವರ ಕಣ್ಣೀರಿನಿಂದ ಬಿಜೆಪಿ ಹಾಳಾಗಿದೆ. ಹೀಗಾಗಿ ಅವರ ಪುತ್ರ ಬಿ.ವೈ ವಿಜಯೇಂದ್ರ ರಾಜ್ಯಾಧ್ಯಕ್ಷ ಆಗಬೇಕು. ಅವರಿಗೆ ಯಡಿಯೂರಪ್ಪ ಪುತ್ರ ಎಂದು ಸ್ಥಾನಮಾನ ಕೊಡಬೇಡಿ. ಅವರ ಸಂಘಟನಾ ಶಕ್ತಿ ನೋಡಿ ಕೊಡಿ ಎಂದು ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ಹೇಳಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಅವರು, ಮಾಜಿ ಬಿ.ಎಸ್. ಯಡಿಯೂರಪ್ಪ ಅವರ ಕಣ್ಣೀರಿನಿಂದಾಗಿ ಬಿಜೆಪಿ ರಾಜ್ಯದಲ್ಲಿ ಈ ರೀತಿಯಾಗಿ ಹಾಳಾಗಿದೆ. ಈಗಲೂ ಕಾಲ ಮಿಂಚಿಲ್ಲ. ಬಿವೈ ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿ ಎಂದು ಒತ್ತಾಯಿಸಿದ್ದಾರೆ. ಯುವ ಮೋರ್ಚಾ ರಾಜ್ಯಾಧ್ಯಕ್ಷರಾಗಿ ಸಂಘಟನೆ ಮಾಡಿದ್ದಾರೆ. ಬಿಜೆಪಿ ಉಪಾಧ್ಯಕ್ಷರಾಗಿ ಸಂಘಟನೆ ಮಾಡಿದ್ದಾರೆ. ರಾಜ್ಯದ ಎಲ್ಲ ಕರೆ ಓಡಾಡಿ ಸಂಘಟನೆ ಮಾಡಿರೋದು ವಿಜಯೇಂದ್ರ. ಅದ್ದರಿಂದ ರಾಜ್ಯಾಧ್ಯಕ್ಷ ಸ್ಥಾನವನ್ನು ವಿಜಯೇಂದ್ರಗೆ ನೀಡಬೇಕು ಎಂದು ಎಂದು ಎಂ.ಪಿ. ರೇಣುಕಾಚಾರ್ಯ ಆಗ್ರಹಿಸಿದ್ದಾರೆ.
ಬಿಜೆಪಿ ಇಲ್ಲಿಯವರೆಗೂ ಪ್ರತಿಪಕ್ಷದ ನಾಯಕರನ್ನು ಆಯ್ಕೆ ಮಾಡಿಲ್ಲ, ಬಿಜೆಪಿ ರಾಜ್ಯಾಧ್ಯಕ್ಷರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿಲ್ಲ. ಈಗಲಾದರೂ ಆತ್ಮಾವಲೋಕನ ಮಾಡಿಕೊಂಡು ಮುನ್ನಡೆದರೆ ಬಿಜೆಪಿಗೆ ಒಳಿತು. ಅದನ್ನು ಬಿಟ್ಟು ಮೋದಿಯವರ ಹೆಸರು ಹೇಳಿಕೊಂಡು ಹೋಗುತ್ತಿದ್ದಾರೆ. ಇಲ್ಲಿ ಅದನ್ನು ಮತಗಳಾಗಿ ಪರಿವರ್ತನೆ ಮಾಡೋದು ರಾಜ್ಯ ನಾಯಕರ ಕರ್ತವ್ಯವಲ್ಲವೇ? ಬಿಜೆಪಿ 10 ವರ್ಷ ಬರಬಾರದು ಎಂದು ನಮ್ಮ ನಾಯಕರೇ ಹೀಗೆ ಮಾಡಿರಬಹುದು ಎಂದು ಗೇಲಿ ಮಾಡಿದರು.
ಇದನ್ನೂ ಓದಿ: ಬಿಎಸ್ ವೈ ಕಡೆಗಣಿಸಿದ್ದೇ ಪಕ್ಷದ ಸೋಲಿಗೆ ಕಾರಣ, ಈಗ ಮತ್ತೆ ಅವರ ಮೊರೆ ಹೋಗಿದ್ದಾರೆ: ಬಿಜೆಪಿ ವಿರುದ್ಧ ರೇಣುಕಾಚಾರ್ಯ ಮತ್ತೆ ಕಿಡಿ
ಕಾವೇರಿ ನೀರಿಗಾಗಿ ಹಲವು ಸಂಘಟನೆಗಳು ಬೆಂಬಲದೊಂದಿಗೆ ಕರ್ನಾಟಕ ಬಂದ್ ನಡೆಯುತ್ತಿದೆ. ತಮಿಳುನಾಡಿಗೆ ನೀರು ಬಿಡುವ ಅವಶ್ಯಕತೆ ಇರಲಿಲ್ಲ. ಯಾವುದೇ ಕಾರಣಕ್ಕೂ ನೀರನ್ನು ಬಿಡಬಾರದು ಎಂದು ಮನವಿ ಮಾಡುತ್ತೇನೆ. ಕೇಂದ್ರ ಇರಬಹುದು, ರಾಜ್ಯ ಇರಬಹುದು ಇಬ್ಬರಿಗೂ ಒತ್ತಾಯ ಮಾಡುತ್ತೇನೆ. ಪ್ರತಿ ವರ್ಷ ಇದೇ ರೀತಿ ಪ್ರತಿಭಟನೆ, ಬಂದ್ ಮಾಡಬೇಕಾಗುತ್ತದೆʼʼ ಎಂದು ಎಚ್ಚರಿಸಿದರು.
ರೈತರು ತೀವ್ರವಾದ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಸರ್ಕಾರ ಕೂಡಲೇ ಬರ ಪರಿಹಾರ ನೀಡಬೇಕು. ಹಾನಿಯಾದ ಬೆಳೆಗಳಿಗೆ ಸೂಕ್ತ ಪರಿಹಾರ ನೀಡಬೇಕು. ರೈತರ ಪರವಾಗಿ ಸರ್ಕಾರ ನಿಲ್ಲಬೇಕಿದೆʼʼ ಎಂದು ಸಲಹೆ ನೀಡಿದರು.